ಹೆಂಡತಿಯನ್ನ ಕೆಲಸದಿಂದ ತೆಗೆದಿರೋದಕ್ಕೆ ಪಾಪಿಯೊಬ್ಬ ಮಾಡಬಾರದ ಕೆಲಸ ಮಾಡಿ ಲಾಕ್ ಆಗಿದ್ದಾನೆ. 50 ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಕಂಟಕವಾಗುತ್ತಿದ್ದ ದುರಂತವನ್ನು ಶಾಲಾ ಶಿಕ್ಷಕಿಯೊಬ್ಬರ ಸಮಯೋಚಿತ ನಿರ್ಧಾರದಿಂದ ತಪ್ಪಿದೆ. ಅಷ್ಟಕ್ಕೂ ಆ ಶಾಲೆಯಲ್ಲಿ ಆಗಿದ್ದೇನು? ಇಲ್ಲಿದೆ ವಿವರ.
ಚೆನ್ನೈ/ಈರೋಡ್: ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ಮರೆತು ವಿಕೃತವಾಗಿ ವರ್ತಿಸಿದ ವ್ಯಕ್ತಿಯೊಬ್ಬನ ಅಮಾನವೀಯ ಕೃತ್ಯ ಬೆಚ್ಚಿಬೀಳಿಸಿದೆ. ಶಾಲಾ ಮಕ್ಕಳಿಗೆ ನೀಡಲಾಗುವ ಬಿಸಿಯೂಟದ ಸಾಂಬಾರ್ಗೆ ಸಗಣಿ ಪುಡಿ (ಕೆಮಿಕಲ್ ಡೈ) ಬೆರೆಸಿ, ನೂರಾರು ಮಕ್ಕಳ ಜೀವದ ಜೊತೆ ಆಟವಾಡಲು ಯತ್ನಿಸಿದ ನೀಚ ಪಾತಕಿಯನ್ನು ಸತ್ಯಮಂಗಲಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆಗಿದ್ದೇನು?
ಬಂಧಿತ ಆರೋಪಿಯನ್ನು ಆರುಮುಗಂ (48) ಎಂದು ಗುರುತಿಸಲಾಗಿದೆ. ಈತನ ಪತ್ನಿ ಅಲಮೇಲು ಈ ಹಿಂದೆ ಇದೇ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೆಲಸ ಮಾಡುತ್ತಿದ್ದಳು. ಆಕೆಯ ಅಡುಗೆಯ ಗುಣಮಟ್ಟ ಸರಿಯಿಲ್ಲದ ಕಾರಣ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಕುದಿಯುತ್ತಿದ್ದ ಆರುಮುಗಂ, ಶಾಲೆಯ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದ. ಇದಕ್ಕಾಗಿ ಆತ ಆರಿಸಿಕೊಂಡ ದಾರಿ ಮಾತ್ರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ಶಾಲೆಯ 8ನೇ ತರಗತಿಯ ಮುಗ್ಧ ವಿದ್ಯಾರ್ಥಿನಿಗೆ ಕೇವಲ 10 ರೂಪಾಯಿ ಆಮಿಷವೊಡ್ಡಿ ಹೊಸ ಬಟ್ಟೆ ಕೊಡಿಸುವುದಾಗಿ ನಂಬಿಸಿ, ಮಾರುಕಟ್ಟೆಯಿಂದ ಸಗಣಿ ಪುಡಿ (Auramine O ಕೆಮಿಕಲ್ ಡೈ) ತಂದು ಸಾಂಬಾರ್ಗೆ ಬೆರೆಸುವಂತೆ ಒತ್ತಾಯಿಸಿದ್ದಾನೆ!
ಶಿಕ್ಷಕಿಯ ಜಾಗರೂಕತೆಯಿಂದ ತಪ್ಪಿದ ದುರಂತ!
ಆಗಸ್ಟ್ 31ರಂದು ಶಾಲೆಯಲ್ಲಿ ಅಡುಗೆ ಸಿದ್ಧವಾದ ಬಳಿಕ ನಿಯಮದಂತೆ ಗುಣಮಟ್ಟ ಪರಿಶೀಲಿಸಲು ಶಿಕ್ಷಕಿ ರೇವತಿ ಅವರು ಸಾಂಬಾರ್ನ ಮಾದರಿಯನ್ನು ರುಚಿ ನೋಡಿದ್ದಾರೆ. ಈ ವೇಳೆ ಸಾಂಬಾರ್ ವಿಪರೀತ ಕಹಿಯಾಗಿರುವುದು ಹಾಗೂ ಅಸಹಜ ಹಳದಿ ಬಣ್ಣಕ್ಕೆ ತಿರುಗಿರುವುದು ಪತ್ತೆಯಾಗಿದೆ. ಆರಂಭದಲ್ಲಿ ಅರಿಶಿನ ಪುಡಿ ಹೆಚ್ಚಾಗಿರಬಹುದು ಎಂದು ಭಾವಿಸಿದ್ದರೂ ಸಂಶಯಗೊಂಡು ಪರಿಶೀಲಿಸಿದಾಗ ಈ ಕರಾಳ ಕೃತ್ಯ ಬಯಲಾಗಿದೆ.
ಅದೃಷ್ಟವಶಾತ್ ಆ ಪುಡಿಯನ್ನು ಕೇವಲ ಶಿಕ್ಷಕರ ಪರೀಕ್ಷೆಗೆ ಇಟ್ಟಿದ್ದ ಸಾಂಬಾರ್ನ ಸಣ್ಣ ಪಾತ್ರೆಗೆ ಮಾತ್ರ ಬೆರೆಸಲಾಗಿತ್ತು. ಮಕ್ಕಳಿಗಾಗಿ ತಯಾರಿಸಿದ್ದ ಮುಖ್ಯ ಸಾಂಬಾರ್ ಪಾತ್ರೆಗೆ ಅದು ಬೆರೆತಿರಲಿಲ್ಲ. ಇದರಿಂದಾಗಿ 50ಕ್ಕೂ ಹೆಚ್ಚು ಮುಗ್ಧ ಮಕ್ಕಳ ಜೀವಕ್ಕೆ ಬಂದಿದ್ದ ಕಂಟಕವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಮಕ್ಕಳ ಜೀವಕ್ಕೆ ಕಂಟಕ ತರಲು ಯತ್ನಿಸಿದ ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಕುಮುದಾ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸತ್ಯಮಂಗಲಂ ಪೊಲೀಸರು ಆರುಮುಗಂನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 123ರ ಅಡಿಯಲ್ಲಿ (ಅಪರಾಧ ಎಸಗುವ ಉದ್ದೇಶದಿಂದ ವಿಷ ಅಥವಾ ಹಾನಿಕಾರಕ ವಸ್ತುವನ್ನು ಬೆರೆಸಿ ಹಲ್ಲೆ ಮಾಡುವುದು) ಗಂಭೀರ ಪ್ರಕರಣ ದಾಖಲಿಸಲಾಗಿದೆ. ಈ ಕಠೋರ ಮನಸ್ಥಿತಿಯ ಆರೋಪಿಯನ್ನು ಜೈಲು ಕಂಬಿ ಹಿಂದೆ ತಳ್ಳಲಾಗಿದೆ.


