ರಸ್ತೆ ಇಲ್ಲದ ಕಾರಣ ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಮೃತಪಟ್ಟಿದ್ದರಿಂದ ನೊಂದ ಪತಿ ತುಳಸಿರಾಮ್ ಗೆಡಮ್, ಗ್ರಾಮಸ್ಥರ ನೆರವಿನಿಂದ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತನ್ನ ಪತ್ನಿಗಾದ ದುರ್ಗತಿ ಬೇರೆಯವರಿಗೆ ಬರಬಾರದೆಂಬ ಉದ್ದೇಶದಿಂದ ಅವರು ಈ ಕಾರ್ಯಕ್ಕೆ ಕೈಹಾಕಿದ್ದಾರೆ.
ಚಂದ್ರಾಪುರ: ರಸ್ತೆ ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದರಿಂದ ನೊಂದ ಪತಿ, ಗ್ರಾಮಸ್ಥರನ್ನೆಲ್ಲ ಒಟ್ಟುಗೂಡಿಸಿ ರಸ್ತೆ ನಿರ್ಮಾಣ ಕೆಲಸಕ್ಕಿಳಿದಿರುವ ಘಟನೆ ಮಹಾರಾಷ್ಟ್ರದ ಘೋಡಂಕಪ್ಪಿ ಎಂಬಲ್ಲಿ ನಡೆದಿದೆ. ಇದು, ಗುಡ್ಡೆ ಕೊರೆದು ರಸ್ತೆ ನಿರ್ಮಿಸಿದ ಬಿಹಾರ ‘ಪರ್ವತ ಮನುಷ್ಯ’ ದಶರಥ್ ಮಾಂಝಿ ನೆನಪಿಸುವಂತಿದೆ.
1.5 ಕಿ.ಮೀ. ರಸ್ತೆ ನಿರ್ಮಿಸಲು ಆರಂಭ
ಗುಡ್ಡಗಾಡು ಪ್ರದೇಶದ ನಿವಾಸಿ ಸಂಗೀತಾ ಜೂ.14ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತಾದರೂ, ಆ ಪ್ರದೇಶಕ್ಕೆ ಆ್ಯಂಬುಲೆನ್ಸ್ ಬರಲು ರಸ್ತೆಯಿಲ್ಲದ ಕಾರಣ ಅವರು ಚಿಕಿತ್ಸೆ ಸಿಗದೆ ಸಾವನ್ನಪ್ಪಿದರು. ಇದರಿಂದ ನೊಂದ ಪತಿ ತುಳಸಿರಾಮ್ ಗೆಡಮ್, ನೆರೆಹೊರೆಯವರ ಸಹಾಯದೊಂದಿಗೆ, ಮುಖ್ಯ ರಸ್ತೆಯನ್ನು ಸಂಪರ್ಕಿಸಲು 1.5 ಕಿ.ಮೀ. ರಸ್ತೆ ನಿರ್ಮಿಸಲು ಆರಂಭಿಸಿದ್ದಾರೆ. ಅರ್ಧ ಕೆಲಸ ಅದಾಗಲೇ ಪೂರ್ಣಗೊಂಡಿದೆ. ‘ಎಷ್ಟೇ ಮನವಿ ಮಾಡಿದರೂ ಸ್ಥಳೀಯ ಆಡಳಿತವು ಸ್ಪಂದಿಸುತ್ತಿಲ್ಲ. ನನ್ನ ಪತ್ನಿಗಾದ ಸಮಸ್ಯೆಯನ್ನು ಬೇರೆ ಯಾರೂ ಅನುಭವಿಸಬಾರದು ಎಂದುಕೊಂಡು ಈ ಹೆಜ್ಜೆ ಇಟ್ಟೆ’ ಎಂದು ತುಳಸಿರಾಮ್ ಹೇಳಿದ್ದಾರೆ.
ಇದನ್ನೂ ಓದಿ: 5 ವರ್ಷದ ಬಾಲಕನ ಮುದ್ದು ಕಂಠದಲ್ಲಿ ರಾಷ್ಟ್ರಗೀತೆ: ನಾಗಾಲ್ಯಾಂಡ್ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ!
ಇದನ್ನೂ ಓದಿ: ಶಿಕ್ಷಕರಿಬ್ಬರಿಗೆ H1N1, 500 ಮಕ್ಕಳಿಗೆ ಜ್ವರ? ಬೆಂಗಳೂರಿನ ಶಾಲೆಗೆ 2 ದಿನ ರಜೆ ಘೋಷಣೆ


