ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಸುಪ್ರೀಂಕೋರ್ಟ್‌ನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ

ಮುಂಬೈ (ಜು.9): ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ ಕುರಿತು ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಬೆಳಗಾವಿ ಗಡಿ ವಿವಾದ(belagavi border dispute) ಸಂಬಂಧ ಸುಪ್ರೀಂಕೋರ್ಟ್‌(Supreme court)ನಲ್ಲಿ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸುವ, ಕರ್ನಾಟದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವ ಮತ್ತು ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡುವ ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾತುಕತೆ ಮೂಲಕ ಇತ್ಯರ್ಥಕ್ಕೆ ಮನವಿ

ಇದರ ಜೊತೆಜೊತೆಗೇ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ವಿಷಯ ಇತ್ಯರ್ಥ ಸಂಬಂಧ ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.

ಗಡಿ ವಿವಾದ ಸಂಬಂಧ ಉನ್ನತ ಮಟ್ಟದ ಸಭೆ

ಗಡಿ ವಿವಾದ ಸಂಬಂಧ ಬುದವಾರ ಇಲ್ಲಿನ ವಿಧಾನಭವನದಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಸರ್ಕಾರದ ಹಿರಿಯ ಸಚಿವರು, ವಿಪಕ್ಷ ನಾಯಕರು ಮತ್ತು ಕರ್ನಾಟಕದ ಮರಾಠಿ ಭಾಷಿಕರ ನಿಯೋಗ ಭಾಗಿಯಾಗಿತ್ತು. ಎನ್‌ಸಿಪಿ (ಪವಾರ್‌ ಬಣ) ನಾಯಕ ಶರದ್‌ ಪವಾರ್‌ ಕೂಡ 3 ದಶಕಗಳ ಬಳಿಕ ವಿಧಾನಭವನದಲ್ಲಿ ನಡೆದ ಈ ಸಭೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಮಹಾರಾಷ್ಟ್ರ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದೆ. ಇಡೀ ಮಹಾರಾಷ್ಟ್ರದ ಜನತೆ ಗಡಿ ಭಾಗದಲ್ಲಿರುವ ಮರಾಠಿಗರ ಪರವಾಗಿ ನಿಲ್ಲಲಿದೆ. ಮರಾಠಿ ಭಾಷಿಕ ಹೋರಾಟಗಾರರಿಗೆ ಅಗತ್ಯವಾದ ಎಲ್ಲಾ ಕಾನೂನು, ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧ’ ಎಂದು ಭರವಸೆ ನೀಡಿದ್ದಾರೆ.

2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದ

ಜೊತೆಗೆ, ‘ಕರ್ನಾಟಕದಲ್ಲಿ ಮರಾಠಿಗರ ಸಮಸ್ಯೆಯನ್ನು ಸಂಸದರ ಮೂಲಕ ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಗಮನಕ್ಕೆ ತರಲಾಗುವುದು. 2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದದ ಬಗ್ಗೆ ತ್ವರಿತ ವಿಚಾರಣೆ ನಡೆಸುವಂತೆ ಹೊಸ ಅರ್ಜಿ ಸಲ್ಲಿಸುತ್ತೇವೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗಡಿಯಲ್ಲಿರುವ ಮರಾಠಿಗರ ವಿರುದ್ಧ ಪ್ರಕರಣಗಳಿದ್ದರೆ ನಾವೇ ವಕೀಲರನ್ನು ನೇಮಿಸಿ, ಅವರ ವೆಚ್ಚವನ್ನು ಭರಿಸುತ್ತೇವೆ’ ಎಂದು ಸಭೆಗೆ ಮುಖ್ಯಮಂತ್ರಿ ಭರವಸೆ ನೀಡಿದರು ಎನ್ನಲಾಗಿದೆ.

ಜತೆಗೆ ‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದೆಡೆ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥದ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಲು ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂವರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದು ಫಡ್ನವೀಸ್‌ ಹೇಳಿದರು.