Asianet Suvarna News Asianet Suvarna News

ಇಂದು ರಾಜೀವ್‌ ಗಾಂಧಿ ಜನ್ಮದಿನ: ದೇಶಕ್ಕೆ ಆಧುನಿಕ ಸ್ಪರ್ಶ ನೀಡಿದ ಕಾಂಗ್ರೆಸ್‌ ನಾಯಕ..!

ಭಾರತದ ಅತಿ ದೊಡ್ಡ ಶಕ್ತಿ ಎಂದರೆ ಅದು ಯುವಜನತೆ. ಬೇರೆ ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆ ಶಾಪ ಎನಿಸಿಕೊಂಡರೆ, ಭಾರತದಲ್ಲಿ ಅದು ಅಮೂಲ್ಯ ಮಾನವ ಸಂಪನ್ಮೂಲ ಎನಿಸಿಕೊಂಡಿದೆ. 80ರ ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ತಿರುವು ದೊರೆತು ಇಡೀ ದೇಶವನ್ನು ಯುವಶಕ್ತಿ ಹೇಗೆ ಆಳಬಲ್ಲದು ಎಂಬ ಸಂದೇಶ ಅನುರಣಿಸಿತ್ತು. ಅಂತಹ ಯುವಶಕ್ತಿಯನ್ನು ರಾರಾಜಿಸಿದವರೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ. 
 

Former pm Rajiv Gandhi gave modern touch to India grg
Author
First Published Aug 20, 2024, 11:44 AM IST | Last Updated Aug 20, 2024, 11:44 AM IST

ಮಂಜುನಾಥ್ ಭಂಡಾರಿ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ

ಬೆಂಗಳೂರು(ಆ.20): ದೇಶದಲ್ಲಿ ಕಂಪ್ಯೂಟರ್‌ ಹಾಗೂ ಟೆಲಿಫೋನ್‌ ಕ್ರಾಂತಿ, ಮತದಾನದ ವಯೋಮಿತಿ 21ರಿಂದ 18ಕ್ಕೆ ಇಳಿಕೆ, ನವೋದಯ ಶಾಲೆಗಳ ನಿರ್ಮಾಣ, ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣದ ಕ್ರಮಗಳು ಮೊದಲಾದ ಸರಣಿ ಸಾಧನೆಗಳು ರಾಜೀವ್ ಗಾಂಧಿಯವರ ಹೆಸರಿನಲ್ಲಿವೆ.

ಭಾರತದ ಅತಿ ದೊಡ್ಡ ಶಕ್ತಿ ಎಂದರೆ ಅದು ಯುವಜನತೆ. ಬೇರೆ ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆ ಶಾಪ ಎನಿಸಿಕೊಂಡರೆ, ಭಾರತದಲ್ಲಿ ಅದು ಅಮೂಲ್ಯ ಮಾನವ ಸಂಪನ್ಮೂಲ ಎನಿಸಿಕೊಂಡಿದೆ. 80ರ ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ತಿರುವು ದೊರೆತು ಇಡೀ ದೇಶವನ್ನು ಯುವಶಕ್ತಿ ಹೇಗೆ ಆಳಬಲ್ಲದು ಎಂಬ ಸಂದೇಶ ಅನುರಣಿಸಿತ್ತು. ಅಂತಹ ಯುವಶಕ್ತಿಯನ್ನು ರಾರಾಜಿಸಿದವರೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ!

ಮಾಜಿ ಪ್ರಧಾನಿ ಮನವಿ ಮೇರೆಗೆ ರಾಜಕೀಯಕ್ಕೆ ಬಂದ ಗೃಹ ಸಚಿವ ಪರಮೇಶ್ವರ ವಿದ್ಯಾಭ್ಯಾಸವೇನು?

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ಅವರು ಜನಿಸಿದ ಕ್ಷಣ, ಈ ಮಗು ದೇಶದ ರಾಜಕಾರಣಕ್ಕೆ ಪರಿವರ್ತನೆಯ ಮೇಲ್ಪಂಕ್ತಿ ಹಾಕಿಕೊಡಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಬಾಲಕನಾಗಿದ್ದಾಗಲೇ ತಾಯಿಯ ರಾಜಕಾರಣವನ್ನು ಅತಿ ಹತ್ತಿರದಿಂದ ನೋಡಿದ್ದರೂ, ರಾಜಕೀಯದ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ, ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ರಾಜೀವ್ ಮನಸ್ಸು ಮಾಡಿರಲಿಲ್ಲ. ಅವರ ಒಲವು ಇದ್ದುದು ಎಂಜಿನಿಯರಿಂಗ್ ಮತ್ತು ವಿಜ್ಞಾನದ ಕಡೆಗೆ ಮಾತ್ರ. ಸಂಗೀತ ಎಂದರೆ ರಾಜೀವ್ ಗಾಂಧಿಯವರ ಮನಸ್ಸಿಗೆ ಆಪ್ತ. ಪಾಶ್ಚಿಮಾತ್ಯ, ಹಿಂದೂಸ್ತಾನಿ ಸಂಗೀತ ಆಲಿಸುತ್ತಿದ್ದರು. ವೃತ್ತಿಯಲ್ಲಿ ಪೈಲಟ್ ಆಗಬೇಕೆಂದುಕೊಂಡು ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಪೂರ್ಣಗೊಳಿಸಿ ಆ ಕನಸನ್ನು ಈಡೇರಿಸಿಕೊಂಡರು. ಆದರೆ ವಿಮಾನವನ್ನು ನಡೆಸಬೇಕಾದ ವ್ಯಕ್ತಿ, ರಾಜಕೀಯದ ಸ್ಥಿತ್ಯಂತರಗಳಿಂದಾಗಿ ಇಡೀ ದೇಶವನ್ನು ಮುನ್ನಡೆಸುವ ಗುರುತರ ಹೊಣೆ ಹೊರಬೇಕಾಯಿತು.

ತಮ್ಮನ ಮರಣ, ಅಣ್ಣ ರಾಜಕೀಯಕ್ಕೆ

ರಾಜೀವ್ ಗಾಂಧಿ ವಿಮಾನಯಾನ ಕ್ಷೇತ್ರಕ್ಕೆ ಮನಸ್ಸು ತೆರೆದುಕೊಂಡಿದ್ದಾಗ, 1980ರಲ್ಲಿ ಸೋದರ ಸಂಜಯ್ ಗಾಂಧಿ ಅಪಘಾತದಲ್ಲಿ ಮೃತರಾದರು. ಈ ವೇಳೆ ಅವರು ರಾಜಕೀಯ ಪ್ರವೇಶಿಸುವಂತೆ ಒತ್ತಡ ಬಂತು. ನಂತರ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.

ಇದಾದ ಬಳಿಕ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ದೇಶದ ಏಕತೆಗಾಗಿ ಮುಲಾಜಿಲ್ಲದೆ ಕೈಗೊಂಡ ಉಕ್ಕಿನ ನಿರ್ಧಾರಕ್ಕೆ ಇಂದಿರಾ ತಮ್ಮ ಪ್ರಾಣದ ಬೆಲೆಯನ್ನೇ ತೆರಬೇಕಾಯಿತು. ಹೆತ್ತ ತಾಯಿ ಹೀಗೆ ದುರಂತ ಅಂತ್ಯವನ್ನು ಕಂಡಾಗಲೂ ನೋವು ನುಂಗಿಕೊಂಡು, ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡು ದಿಢೀರನೆ ಎದ್ದು ನಿಲ್ಲುವುದು ನಿಜಕ್ಕೂ ಕಠಿಣ ಹೃದಯದ ವ್ಯಕ್ತಿಗೆ ಮಾತ್ರ ಸಾಧ್ಯ. ಅಂತಹ ದೃಢತೆ ತಂದುಕೊಂಡ ರಾಜೀವ್ ಗಾಂಧಿ, 1984ರಿಂದ 1989 ರವರೆಗೆ ಐದು ವರ್ಷಗಳ ಕಾಲ ಸಂಪೂರ್ಣವಾಗಿ ದೇಶಕ್ಕೆ ಅರ್ಪಿಸಿಕೊಂಡುಬಿಟ್ಟರು.

ದೇಶದ ಅತ್ಯಂತ ಕಿರಿಯ ಪ್ರಧಾನಿ

ರಾಜೀವ್ ಗಾಂಧಿ ತಮ್ಮ 41ನೇ ವಯಸ್ಸಿನಲ್ಲಿ ಪ್ರಧಾನಿಯಾಗಿ ಭಾರತದ ಅತ್ಯಂತ ಕಿರಿಯ ಪ್ರಧಾನಿ ಎಂಬ ಇತಿಹಾಸ ಬರೆದರು. ಬಹುಶಃ ಅದು ಜಗತ್ತಿನಲ್ಲೇ ಚುನಾಯಿತ ಸರ್ಕಾರದ ಅತಿ ಕಿರಿಯ ಮುಖ್ಯಸ್ಥ ಎಂಬ ದಾಖಲೆಯೂ ಹೌದು. ಈ ಹೊಸ ಸವಾಲು ಹಾಗೂ ಅನುಭವ ಅವರಿಗೆ ಇಡೀ ದೇಶದ ಸಮಸ್ಯೆ, ಸವಾಲುಗಳನ್ನು ಪರಿಚಯ ಮಾಡಿಸಿಕೊಟ್ಟಿತು. ಜೊತೆಗೆ ಮುಂದಿನ ಐವತ್ತು ವರ್ಷಕ್ಕೂ ಅಧಿಕ ಕಾಲಕ್ಕೆ ಭಾರತವನ್ನು ಸುದೃಢವಾಗಿ ನಿಲ್ಲುವಂತೆ ಅಡಿಪಾಯ ಹಾಕಲು ಆರಂಭಿಸಿದರು. ಈಗ ದೇಶದಲ್ಲಿ ವಿಕಸಿತ ಭಾರತದ ಹೆಸರಿನಲ್ಲಿ ಭದ್ರ ಅಡಿಪಾಯ ಹಾಕುತ್ತೇವೆ ಎಂಬ ಘೋಷಣೆ ಕೇಳಿಬರುತ್ತಿದೆ. ಈಗ ಭಾರತ ಬಲಿಷ್ಠ ಆರ್ಥಿಕತೆಯಾಗಿ ಬೆಳೆದಿರುವುದಕ್ಕೆ ಅಂದು ರಾಜೀವ್ ಗಾಂಧಿ ಮೌನವಾಗಿ ಕೈಗೊಂಡ ಕ್ರಾಂತಿಕಾರಕ ನಿಲುವುಗಳೇ ಕಾರಣ.

ಸಂಪರ್ಕ ಕ್ರಾಂತಿ

ಇಂದಿನ ಡಿಜಿಟಲ್ ಇಂಡಿಯಾದ ಆರಂಭವಾಗಿದ್ದೇ ರಾಜೀವ್ ಗಾಂಧಿಯವರ ತೀರ್ಮಾನಗಳಿಂದ ಎಂಬುದು ಅನೇಕರಿಗೆ ಗೊತ್ತಿಲ್ಲ. 80ರ ದಶಕದಲ್ಲಿ ಭಾರತದಲ್ಲಿ ಸುಮಾರು 20 ಲಕ್ಷ ಫೋನ್ ಸಂಪರ್ಕಗಳಿದ್ದವು. ಒಂದು ದೂರವಾಣಿ ಸಂಪರ್ಕ ಪಡೆಯುವುದು ಹರಸಾಹಸವೇ ಆಗಿತ್ತು. ದೂರಸಂಪರ್ಕ ಕ್ಷೇತ್ರದಲ್ಲಿ ಸ್ವದೇಶಿ ಎಂಬ ಸೂತ್ರವನ್ನು ತಂದ ಪ್ರಧಾನಿ ರಾಜೀವ್ ಗಾಂಧಿ, ಅದಕ್ಕಾಗಿಯೇ 1984ರಲ್ಲಿ ಸಿ-ಡಾಟ್ ಸಂಸ್ಥೆ ಸ್ಥಾಪಿಸಿದರು. ಪರಿಣಾಮ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ದೂರಸಂಪರ್ಕ ಸಂವಹನ ಜಾಲ ಬೆಳೆಯಿತು. ಇದರ ಜೊತೆಗೆ ಬಂದ ಪಬ್ಲಿಕ್ ಕಾಲ್ ಆಫೀಸ್ (ಪಿಸಿಒ) ಕ್ರಮದಿಂದ ವಿದೇಶಗಳಿಗೂ ದೂರಸಂಪರ್ಕ ಸಂವಹನ ಸಾಧ್ಯವಾಯಿತು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಸಾರ್ವಜನಿಕ ಸ್ಥಳಗಳಲ್ಲಿ ದೂರವಾಣಿ ಬಳಸಿ ಸುಲಭವಾಗಿ ಮಾತನಾಡುವಂತಾಯಿತು. ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಈ ಸೇವೆ ಎಲ್ಲರಿಗೂ ದೊರೆಯಿತು. ಇದು ಬಳಿಕ ಮಹಾನಗರ ಟೆಲಿಫೋನ್ ನಿಗಮ ಲಿಮಿಟೆಡ್‌ ಸ್ಥಾಪನೆಗೂ ನಾಂದಿ ಹಾಡಿತು.

ಕಂಪ್ಯೂಟರ್‌ಗಳ ಮಹತ್ವವನ್ನು ಆಗಲೇ ಅರಿತಿದ್ದ ರಾಜೀವ್ ಗಾಂಧಿ, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕಂಪ್ಯೂಟರ್ ಅಳವಡಿಕೆಗೆ ಶ್ರಮಿಸಿದ್ದರು. ರೈಲ್ವೆ ವ್ಯವಸ್ಥೆಯಲ್ಲಿ ಕಂಪ್ಯೂಟರೀಕೃತ ಟಿಕೆಟ್ ಬಳಕೆಯಿಂದ ಬಹಳ ಸುಧಾರಣೆಯಾಗಿತ್ತು. ಕಂಪ್ಯೂಟರ್‌ಗಳ ಮೇಲಿದ್ದ ತೆರಿಗೆ ಇಳಿಸಲು ಕೂಡ ರಾಜೀವ್ ಕ್ರಮ ವಹಿಸಿದ್ದರು.

ಗ್ರಾಮೀಣ ಸ್ವಾವಲಂಬನೆ

ಗ್ರಾಮಗಳಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ತರುವಲ್ಲಿ ರಾಜೀವ್ ಗಾಂಧಿಯವರ ಶ್ರಮ ಅಪಾರ. ದೇಶದೆಲ್ಲೆಡೆ ಸಂಚಾರ ಮಾಡಿದ್ದ ಅವರು, ಜನರ ಬಳಿಗೆ ಹೋಗಿ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಸ್ಥಳೀಯಾಡಳಿತದಿಂದ ಮಾತ್ರ ಸುಧಾರಣೆ ಸಾಧ್ಯ ಎಂದು ಅರಿತಿದ್ದರಿಂದಲೇ ಸಂಪೂರ್ಣ ಬದ್ಧತೆಯಿಂದ ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಗ್ರಾಮ ಸಭಾಗೆ ಮಾನ್ಯತೆ ನೀಡಲು ಶ್ರಮಿಸಿದರು. ದುರದೃಷ್ಟವಶಾತ್ ಅದಕ್ಕೆ ಸಂಪೂರ್ಣ ಬೆಂಬಲ ಸಿಗಲಿಲ್ಲ. ಮುಂದೆ ಅಧಿಕಾರಕ್ಕೆ ಬಂದ ಸರ್ಕಾರ ಆ ಪ್ರಯತ್ನಕ್ಕೆ ಕಾರ್ಯರೂಪ ನೀಡಿತು. ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಸ್ವಾವಲಂಬನೆಯ ಆಶಯಕ್ಕೆ ಮೊದಲ ಬಾರಿಗೆ ಕಾನೂನಿನ ಸ್ವರೂಪ ನೀಡಿದ್ದೇ ರಾಜೀವ್ ಗಾಂಧಿ.

ಅಂಬೇಡ್ಕರ್‌ ಇಲ್ಲದಿದ್ದರೆ ಎಸ್ಸಿ, ಎಸ್ಟಿಗೆ ನೆಹರು ಮೀಸಲು ನೀಡುತ್ತಿರಲಿಲ್ಲ: ಮೋದಿ

ಇಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಆದರೆ 1986 ರಲ್ಲೇ ರಾಜೀವ್ ಗಾಂಧಿ ಸರ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿ, ಮಹಿಳೆಯರು, ಪರಿಶಿಷ್ಟ ಜಾತಿ/ವರ್ಗದ ಜನರಿಗೆ ಶಿಕ್ಷಣದ ಹಕ್ಕು ಕಲ್ಪಿಸುವ ಕೆಲಸ ಮಾಡಿತ್ತು. ಮತದಾನದ ವಯೋಮಿತಿ 21ರಿಂದ 18ಕ್ಕೆ ಇಳಿಕೆ, ನವೋದಯ ಶಾಲೆಗಳ ನಿರ್ಮಾಣ, ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣದ ಕ್ರಮಗಳು ಮೊದಲಾದ ಸರಣಿ ಸಾಧನೆಗಳು ರಾಜೀವ್ ಗಾಂಧಿಯವರ ಹೆಸರಿನಲ್ಲಿದೆ.

ದೇಶಕ್ಕೆ ಭದ್ರ ಬುನಾದಿ

ರಾಜೀವ್ ಗಾಂಧಿ 46 ವರ್ಷ ವಯಸ್ಸಿನಲ್ಲಿ ಪ್ರಾಣ ತೆತ್ತರೂ, ದೇಶಕ್ಕಾಗಿ ಅವರು ಕೈಗೊಂಡ ತೀರ್ಮಾನ, ಜಾರಿಗೊಳಿಸಿದ ಯೋಜನೆಗಳು, ಆರ್ಥಿಕ ಹಾಗೂ ಸಾಮಾಜಿಕ ಸುಸ್ಥಿರತೆಗೆ ಭದ್ರ ಬುನಾದಿ ಒದಗಿಸಿತ್ತು. ಅವರು ಇನ್ನಷ್ಟು ವರ್ಷ ಕಾಲ ಬದುಕುವಂತಾಗಿದ್ದರೆ ಭಾರತ 90ರ ದಶಕದಲ್ಲೇ ಜಗತ್ತಿನ ಬಲಿಷ್ಠ ರಾಷ್ಟ್ರ ಎಂದೆನಿಸಿಕೊಳ್ಳುತ್ತಿತ್ತು. ಅವರ ಚಿಂತನೆ ಮತ್ತು ಸುಧಾರಣಾ ಕ್ರಮಗಳು, ಇಂದಿನ ಆಡಳಿತಗಾರರಿಗೆ ಸ್ಫೂರ್ತಿಯಾದರೆ ಅಭಿವೃದ್ಧಿಗೆ ಅದಕ್ಕಿಂತ ಬೇರೆ ಮಾರ್ಗದರ್ಶನ ಬೇಕಿಲ್ಲ.

Latest Videos
Follow Us:
Download App:
  • android
  • ios