ಎರಡು ಬಾರಿ ಮುಖ್ಯಮಂತ್ರಿಯಾದರೂ ಸ್ವಂತ ಮನೆಯಿಲ್ಲದ ಸಿದ್ದರಾಮಯ್ಯ ಅವರ ಹೊಸ ಮನೆಯ ಕನಸು ಮೈಸೂರಿನಲ್ಲಿ ನನಸಾಗಿದೆ. ಆದರೆ, ಮಾಜಿ ಸಿಎಂ ಅವರ ಸ್ವಂತ ಮನೆಯ ಕನಸಿನ ರೂವಾರಿ ಬೇರೊಬ್ಬ ವ್ಯಕ್ತಿಯೇ ಆಗಿದ್ದಾರೆ. ಸ್ವಂತ ಮನೆಗಾಗಿ ನಾಲ್ಕು ದಶಕಗಳಿಂದ ಕಾಣುತ್ತಿದ್ದ ಕನಸು ಇದೀಗ ನೆರವೇರಿದೆ.
ರಾಜ್ಯ ರಾಜಕಾರಣದಲ್ಲಿ 9 ಬಾರಿ ಶಾಸಕ, ಉಪ ಮುಖ್ಯಮಂತ್ರಿ ಹಾಗೂ 2 ಬಾರಿ ಮುಖ್ಯಮಂತ್ರಿಯಾದರೂ ಒಂದು ಸ್ವಂತ ಮನೆಯೂ ಇಲ್ಲದೇ ಸ್ನೇಹಿತರು ಕೊಟ್ಟಿದ್ದ ಮನೆಯಲ್ಲೇ ವಾಸವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಸೂರಿನ ಕನಸು ಮೈಸೂರಿನಲ್ಲಿ ವಿನಾಯಕ ಚತುರ್ಥಿ ದಿನ ಗೃಹ ಪ್ರವೇಶದ ಮೂಲಕ ನೆರವೇರುವ ಮೂಲಕ ಈಡೇರಿದೆ. ಆದರೆ, ಸಿದ್ದರಾಮಯ್ಯ ಅವರ ಮನೆ ನಿರ್ಮಾಣ ಸಂಪೂರ್ಣ ರೂವಾರಿ ಪಾರ್ವತಿ ಸಿದ್ದರಾಮಯ್ಯ ಅವರೇ ಆಗಿದ್ದಾರೆ. ಹೀಗಾಗಿ, ಈ ಮನೆ ನಮ್ಮ ಅಮ್ಮನ ಕನಸು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ತಾಯಿ ಪಾರ್ವತಿ ಅವರ ಆಸೆಯಂತೆ ಈ ಮನೆಯನ್ನು ಕಟ್ಟಿಸಲಾಗಿದೆ ಎಂದು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅಮ್ಮನ ಆಸೆಯಂತೆ ಮೂಡಿಬಂದ ಮನೆ:
'ಈ ಮನೆಯನ್ನು ನಮ್ಮ ತಾಯಿಯ ಆಸೆಯಂತೆ ಮೈಸೂರಿನಲ್ಲಿ ಕಟ್ಟಿಸಿದ್ದೇವೆ. ನನ್ನ ತಾಯಿಗೆ ಹೇಗಾದರೂ ಮಾಡಿ ಮೈಸೂರಿನಲ್ಲಿ ಸೆಟಲ್ ಆಗಬೇಕು, ಇಲ್ಲೇ ನೆಲೆಸಬೇಕು ಎಂಬುದು ದೊಡ್ಡ ಆಸೆಯಾಗಿತ್ತು. ಹೀಗಾಗಿಯೇ ಅವರ ಇಚ್ಛೆಯಂತೆಯೇ ನಾವು ಈ ಮನೆ ಕಟ್ಟಿಸಿದ್ದೇವೆ. ಅಷ್ಟೇ ಅಲ್ಲ, ಈ ಮನೆಯ ಸಂಪೂರ್ಣ ಪ್ಲ್ಯಾನ್ (ವಿನ್ಯಾಸ) ಕೂಡ ನಮ್ಮ ತಾಯಿಯದ್ದೇ' ಎಂದು ಸ್ಮರಿಸಿಕೊಂಡರು.
ಹಿಂದೆ ಮನೆಗಳನ್ನು ಮಾರಬೇಕ ಬಂದಿತ್ತು:
ಕುಟುಂಬದ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಯತೀಂದ್ರ, 'ನಾವು ಹಿಂದೆ ಎರಡು ಮನೆಗಳನ್ನು ಕಟ್ಟಿಸಿದ್ದೆವು. ಆದರೆ, ಅಂದಿನ ಪರಿಸ್ಥಿತಿಯಿಂದಾಗಿ ಆ ಮನೆಯಲ್ಲಿ ನಾವು ಒಂದು ದಿನವೂ ಇರಲು ಸಾಧ್ಯವಾಗಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಆ ಎರಡು ಮನೆಯನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿತ್ತು, ಹಾಗಾಗಿ ಮಾರಿದೆವು. ನಮ್ಮ ತಾಯಿ 40 ವರ್ಷದಿಂದ ಕಂಡಿದ್ದ ಕನಸು ಈಗ ನನಸಾಗಿದೆ. ಈಗ ಅಮ್ಮನ ಆಸೆಯಂತೆ ಹೊಸ ಮನೆ ಕಟ್ಟಿಸಿದ್ದೇವೆ' ಎಂದರು.
ಇನ್ಮುಂದೆ ವಾರಕ್ಕೊಮ್ಮೆ ಮೈಸೂರಿಗೆ ಸಿದ್ದರಾಮಯ್ಯ:
ಮುಂದಿನ ದಿನಗಳಲ್ಲಿ ತಂದೆ-ತಾಯಿ ಹಾಗೂ ತಾವೆಲ್ಲರೂ ಇದೇ ಮನೆಯಲ್ಲಿ ಉಳಿಯುವುದಾಗಿ ಯತೀಂದ್ರ ತಿಳಿಸಿದರು. 'ಇನ್ಮುಂದೆ ನನ್ನ ತಂದೆ (ಸಿದ್ದರಾಮಯ್ಯ) ವಾರಕ್ಕೊಮ್ಮೆಯಾದರೂ ಮೈಸೂರಿಗೆ ಬರಲು ಹೇಳಿದ್ದೇವೆ. ಅದರಂತೆ ಇನ್ನುಮುಂದೆ ನಮ್ಮ ತಂದೆ ಪ್ರತಿವಾರ ಮೈಸೂರಿಗೆ ಬಂದು ಹೋಗುತ್ತಾರೆ" ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಅವರ ಕುಟುಂಬದ ಹೊಸ ಮನೆಯ ಗೃಹಪ್ರವೇಶವು ರಾಜಕೀಯ ವಲಯ ಹಾಗೂ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ತಮ್ಮ ತಾಯಿ ಪಾರ್ವತಿ ಅವರ ಆಸೆಯಂತೆ ಕಟ್ಟಿದ ಈ ಮನೆಯು ಸದ್ಯ ಮೈಸೂರಿನಲ್ಲಿ ಎಲ್ಲರ ಗಮನ ಸೆಳೆದಿದೆ.


