ಖ್ಯಾತ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಅವರು ಡಯೆಟ್ ಕುರಿತು ತಮ್ಮ ವಿಶಿಷ್ಟ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆನೆ ಮತ್ತು ತಿಮಿಂಗಲದ ಉದಾಹರಣೆ ನೀಡಿ, ತೆಳ್ಳಗೆ ಅಥವಾ ದಪ್ಪ ಇರುವುದು ನಮ್ಮ ಗ್ರಹಗತಿಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದು, ಈ ಮಾತುಗಳು ವೈರಲ್ ಆಗಿವೆ.

ಬ್ರಹ್ಮಾಂಡ ಗುರೂಜಿ ಎಂದರೆ ಬಹುಶಃ ಎಲ್ಲರಿಗೂ ತಿಳಿದದ್ದೇ. ಆದರೆ ಇವರ ಅಸಲಿ ಹೆಸರು ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ಇವರ ಹೆಸರು ನರೇಂದ್ರ ಬಾಬು ಶರ್ಮಾ. ವಾಹಿನಿಯೊಂದರಲ್ಲಿ ನಡೆಸಿಕೊಟ್ಟಿದ್ದ ಜ್ಯೋತಿಷದಿಂದಾಗಿ ಅದೇ ಹೆಸರು ಇವರಿಗೆ ಬಂದು ಅದೇ ಅಡ್ಡ ಹೆಸರಿಂದ ಬ್ರಹ್ಮಾಂಡ ಗುರೂಜಿ ಆದವರು. ಒಂದಿಷ್ಟು ಶಬ್ದಗಳಿಂದ ಇವರು ಫೇಮಸ್​ ಆಗಿದ್ದೂ ಇದೆ. ವಿವಿಧ ಸುದ್ದಿ ವಾಹಿನಿಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮದೇ ಆದ ನೇರ ಹಾಗೂ ವಿಶಿಷ್ಟ ಶೈಲಿಯ ಭವಿಷ್ಯ ನುಡಿಯುವಿಕೆ ಮತ್ತು ಜ್ಯೋತಿಷ್ಯ ವಿಶ್ಲೇಷಣೆಗಳ ಮೂಲಕ ಇವರು ರಾಜ್ಯದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದಾ ಟ್ರೋಲ್​ ಆಗುತ್ತಲೇ ತಮ್ಮದೇ ಆದ ರೀತಿಯಲ್ಲಿ ಭವಿಷ್ಯ ನುಡಿಯುವ ಇವರು ಇದಾಗಲೇ ರಾಜಕೀಯ, ಪ್ರಕೃತಿ ವಿಕೋಪ ಹಾಗೂ ಪ್ರಮುಖ ವ್ಯಕ್ತಿಗಳ ಭವಿಷ್ಯದ ಬಗ್ಗೆ ನುಡಿಯುವ ಭವಿಷ್ಯವಾಣಿಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇಂತಿಪ್ಪ ಬ್ರಹ್ಮಾಂಡ ಗುರೂಜಿ ಇದೀಗ ಡಯೆಟ್​ ವಿಷಯದ ಬಗ್ಗೆ ಮಾತನಾಡಿದ್ದು, ಅದೀಗ ಭಾರಿ ವೈರಲ್​ ಆಗುತ್ತಿದೆ.

ಆನೆ, ತಿಮಿಂಗಳ ತೆಳ್ಳಗಾಗತ್ತಾ?

ಕೀರ್ತಿ ಎಂಟರ್​ಟೈನ್​ಮೆಂಟ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರಿಗೆ ಡಯೆಟ್​ ಫಾಲೋ ಮಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಬ್ರಹ್ಮಾಂಡ ಗುರೂಜಿ, ಇಲ್ಲ, ಹಾಗೇನೂಇಲ್ಲರಿ. ಮನಸ್ಸು ಬಂದಾಗ ಮಾಡ್ತೇನೆ ಎನ್ನುತ್ತಲೇ, ನೋಡಿ ಆನೆ ಪ್ರತಿದಿನ ನಡೀತಾನೇ ಇರುತ್ತೆ, ತೆಳ್ಳಗಾಗತ್ತಾ ಇಲ್ವಲ್ಲಾ... ತಿಮಿಂಗಲ ಪ್ರತಿನಿತ್ಯ ನೀರಿನಲ್ಲಿ ಈಜುತ್ತಲೇ ಇರುತ್ತದೆ ಅದು ಎಂದಾದ್ರೂ ತೆಳ್ಳಗಾಗಿದ್ದು ನೋಡಿದ್ರಾ, ಮತ್ಯಾಕೆ ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ನೆಟ್ಟಿಗರು ಖುಷ್​

ತೆಳ್ಳಗೆ, ದಪ್ಪಗೆ ಆಗುವುದು ನಮ್ಮ ಗ್ರಹಗತಿಗಳಲ್ಲಿ ಇರುತ್ತದೆ. ಅದನ್ನು ತಪ್ಪಿಸಲು ಆಗುವುದಿಲ್ಲ. ಸುಮ್ಮನೇ ಏನೇನೋ ಮಾಡುವುದು ಸರಿಯಲ್ಲ ಎನ್ನುವುದು ಅವರ ಲಾಜಿಕ್​. ಈ ಮಾತು ಕೇಳಿ ಹಲವು ನೆಟ್ಟಿಗರಿಗೆ ಅದರಲ್ಲಿಯೂ ಮುಖ್ಯವಾಗಿ ಡಯೆಟ್​ ಎಂದರೆ ಮೂಗು ಮುರಿಯುವವರಿಗೆ ಸಕತ್​ ಖುಷಿಯಾಗಿದೆ. ನಿಮ್ಮ ಈ ಮಾತನ್ನು ಅಕ್ಷರಶಃ ಒಪ್ಪುತ್ತೇವೆ ಗುರೂಜಿ ಎನ್ನುತ್ತಿದ್ದಾರೆ ಅವರು.