- Home
- Life
- Women
- ಮನೆಗೆಲಸದಿಂದ ಏರ್ಲೈನ್ಸ್ವರೆಗೆ: 21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ
ಮನೆಗೆಲಸದಿಂದ ಏರ್ಲೈನ್ಸ್ವರೆಗೆ: 21ನೇ ವಯಸ್ಸಿಗೆ ಅಕ್ಷರ ಕಲಿತಾ ಅರ್ಚನಾ ಇಂದು ವಿಮಾನಯಾನ ಸಂಸ್ಥೆ ಉದ್ಯೋಗಿ
from housemaid to airline staff: ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ.

21ನೇ ವಯಸ್ಸಿಗೆ ಅಕ್ಷರಾಭ್ಯಾಸ:ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ
ಎಲ್ಲರಿಗೂ ಬದುಕು ಒಂದೇ ರೀತಿಯ ಅವಕಾಶಗಳನ್ನು ನೀಡುವುದಿಲ್ಲ, ಕೆಲವರಿಗೆ ಅವಕಾಶಗಳು ತಾನಾಗೇ ಬಂದರೆ ಮತ್ತೆ ಕೆಲವರು ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ತಾವಾಗೇ ಅವಕಾಶ ಸೃಷ್ಟಿಸಿದವರ ಬದುಕು ಅನೇಕರಿಗೆ ಸ್ಫೂರ್ತಿ ತುಂಬುತ್ತದೆ. ಜೊತೆಗೆ ಮನಸ್ಸಿದ್ದರೆ ಯಾರೋ ಊಹಿಸಲೂ ಕೂಡ ಆಗದಿರುವುದನ್ನು ಮಾಡಬಹುದು ಎಂಬುದಕ್ಕೆ ಇಲ್ಲೊಬ್ಬರು ಯುವತಿಯ ಬದುಕು ಸಾಕ್ಷಿಯಾಗಿದೆ. ಹೌದು ನಮ್ಮಲ್ಲನೇಕರು ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಇಂದು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಖಾಸಗಿ ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿ ಮಕ್ಕಳ ವಾರ್ಷಿಕ ಶಾಲಾ ಶುಲ್ಕವೇ ಲಕ್ಷ ದಾಟಿದೆ.
ಬಡತನದ ಸಂಕೋಲೆ ಮೀರಿ ಬಾನಿನತ್ತ ಚಿಮ್ಮಿದ ಪ್ರತಿಭೆ
ಆದರೆ ಪೊಷಕರೇ ಇಲ್ಲದ ಮಕ್ಕಳು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾಗುತ್ತದೆ. ಅವರಿಗೆ ಇಂತಹ ಶಾಲೆಗಳನ್ನು ಕನಸುಗಳಲ್ಲಿ ಊಹಿಸುವುದಕ್ಕೂ ಸಾಧ್ಯವಿಲ್ಲ, ಕೆಲವು ಮಕ್ಕಳಿಗಂತೂ ತಾವು ಶಿಕ್ಷಣ ಪಡೆಯುವುದಿರಲಿ, ಮನೆಯ ಸದಸ್ಯರ ತುತ್ತಿನ ಚೀಲವನ್ನು ತಾವೇ ತುಂಬಿಸಬೇಕಾದಂತಹ ಸ್ಥಿತಿ ಇದೆ. ಅಂತಹದ್ದೇ ಸ್ಥಿತಿಯಿಂದ ಮೇಲೆ ಬಂದಂತಹ ಒಬ್ಬಳು ದಿಟ್ಟ ಹೆಣ್ಣು ಮಗಳ ಕತೆ ಇಲ್ಲಿದೆ. ಹೌದು ಆಕೆಯ ಹೆಸರು ಅರ್ಚನಾ ಪಾಟೀಲ್, ಆಕೆಯ ವಯಸ್ಸಿನ ಎಲ್ಲರೂ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡುವ ಸಮಯದಲ್ಲಿ ಆಕೆ ಕುಟುಂಬ ಸದಸ್ಯರ ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮನೆ ಕೆಲಸದವಳಾಗಿ ಕೆಲಸ ಮಾಡಬೇಕಿತ್ತು. ಆಕೆಯ ಮಾತಿನಲ್ಲೇ ಆಕೆಯ ಯಶೋಗಾಥೆಯನ್ನು ಕೇಳುವುದಾದರೆ...
ಇದು ಅರ್ಚನಾ ಪಾಟೀಲ್ ಎಂಬ ದಿಟ್ಟ ಹೆಣ್ಣಿನ ಯಶೋಗಾಥೆ
ನಾನು 21 ವರ್ಷ ತುಂಬುವವರೆಗೆ ಶಾಲೆಯ ಮೆಟ್ಟಿಲುಗಳನ್ನೇ ಹತ್ತಿದವಳಲ್ಲ, ಆದರೆ ಇಂದು ಮುಂಬೈನಂತಹ ಮಹಾನಗರಿಯಲ್ಲಿ ನಾನು ಮನೆ ಹೊಂದಿದ್ದೇನೆ. ಅದು ನನ್ನ ಸ್ವಂತ ಹಣ, ಬೆವರು ರಕ್ತ ಹಾಗೂ ಧೈರ್ಯದಿಂದ ಸಂಪಾದಿಸಿದ್ದು. ನನ್ನ ಅಮ್ಮ ಒಬ್ಬರು ಅಂಧೆ, ನನ್ನ ಅಪ್ಪ ಕುಡಿತಕ್ಕೆ ದಾಸನಾಗಿದ್ದ. ನಾನು ಬಡತನದಲ್ಲೇ ಬೆಳೆದೆ. ಹೀಗಾಗಿ ಬಾಲ್ಯದಲ್ಲೇ ನಾನು ಮನೆಕೆಲಸದವಳಾಗಿ ಕೆಲಸಕ್ಕೆ ಸೇರಿಕೊಂಡೆ. ಒಂದು ದಶಕದ ಕಾಲ ನಾನು ನನ್ನ ಕುಟುಂಬವನ್ನು ಸಲಹುವುದಕ್ಕಾಗಿ ಕೆಲಸ ಮಾಡಿದೆ. ನನ್ನ ಸೋದರರನ್ನು ಶಾಲೆಗೆ ಕಳುಹಿಸಿದೆ. ಆದರೆ 2020ರಲ್ಲಿ ನನ್ನ ಬದುಕು ಬದಲಾಯ್ತು.
ಬದುಕು ಬದಲಿಸಿದ ಸೋದರನ ಸಾವು
ಆ ವರ್ಷ ನಾನು ನನ್ನ 16 ವರ್ಷದ ಸೋದರನನ್ನು ಕಳೆದುಕೊಂಡೆ. ಬ್ರೈನ್ ಟ್ಯೂಮರ್ ಆದ ಒಂದೇ ವಾರಕ್ಕೆ ಆತ ನಮ್ಮನ್ನು ಬಿಟ್ಟು ಹೋದ. ಇದು ನನಗೆ ನಾನು ಸೋತೆ ಎಂಬ ಭಾವನೆ ಮೂಡಿಸಿತು. ನಾನು ನನ್ನ ಸೋದರನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಹತಾಶೆ ಮೂಡಿತು. ಇದರಿಂದ ನನಗೆ ಖಿನ್ನತೆ ಉಂಟಾಯ್ತು. ಆದರೆ ನನ್ನ ಸೋದರ ಸಾಯುವ ಮೊದಲು ಕೊನೆಯದಾಗಿ ಹೇಳಿದ ಮಾತು ನನಗೆ ನೆನಪಾಯ್ತು. ನಾನು ನೀನು ಖುಷಿಯಾಗಿರುವುದನ್ನು ನೊಡಲು ಬಯಸುವೆ. ನೀನು ನಿನ್ನ ಕನಸುಗಳನ್ನು ಪೂರೈಸಿದಾಗ ಮಾತ್ರ ನೀನು ಖುಷಿಯಾಗಿರಬಹುದು ಎಂದು ಆತ ಹೇಳಿದ್ದ. ಈ ಮಾತು ನೆನಪಾಗಿ ಯಾರೂ ಯೋಚಿಸದೇ ಇರುವುದನ್ನು ಮಾಡುವುದಕ್ಕೆ ಸಿದ್ಧಳಾದೆ.
ನನ್ನ ವಯಸ್ಸಿನ ಎಲ್ಲರೂ ಪದವಿ ಓದುತ್ತಿರುವ ಸಮಯದಲ್ಲಿ ನಾನು ನನ್ನ ಬದುಕಿನ ಮೊದಲ ಅಕ್ಷರಗಳನ್ನು ಕಲಿಯುವುದಕ್ಕೆ ಶುರು ಮಾಡಿದೆ. ನಾನು ಕೈಬರಹವನ್ನು ಸರಿಪಡಿಸುವುದಕ್ಕೆ ರಾತ್ರಿಯೆಲ್ಲಾ ಎಚ್ಚರವಿದ್ದು, ಅಭ್ಯಾಸ ಮಾಡಿದೆ. 2021ರಲ್ಲಿ 65 ಶೇಕಡಾ ಅಂಕಗಳೊಂದಿಗೆ ನಾನು ನನ್ನ 10ನೇ ತರಗತಿಯನ್ನು ಪಾಸು ಮಾಡಿದೆ. 2023ರಲ್ಲಿ 12ನೇ ತರಗತಿ ಪಾಸು ಮಾಡಿದೆ. ಈಗ ನನ್ನ ವಯಸ್ಸು 26 ನಾನೀಗ ನನ್ನ ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದೇನೆ.
ಶಾಲೆಯ ಮೆಟ್ಟಿಲು ಹತ್ತದಿದ್ದರೂ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿದ ಅರ್ಚನಾ
ಕೆಲ ತಿಂಗಳ ಹಿಂದಷ್ಟೇ ನಾನು ಒಂದು ಅಂತಾರಾಷ್ಟ್ರೀಯ ಏರ್ಲೈನ್ಸ್ನಲ್ಲಿ ಗ್ರೌಂಡ್ ಸ್ಟಾಪ್ ಆಗಿ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಮೊದಲ ದಿನ ನಾನು ಮಾಡಿದ ಮೊದಲ ಕೆಲಸ ಎಂದರೆ ನಮ್ಮದೆಂದು ಕರೆಯುವ ಒಂದು ಮನೆಯೊಂದಕ್ಕೆ ಡೆಪಾಸಿಟ್ ಮಾಡಿದ್ದು, ಬಳಿಕ ನಾನು ಅದರ ಕೀಯನ್ನು ನನ್ನ ಅಮ್ಮನ ಕೈಗೆ ಇತ್ತಾಗ ಆಕೆಗೆ ಮನೆಯನ್ನು ನೋಡುವುದಕ್ಕೆ ಸಾಧ್ಯವಿರಲಿಲ್ಲ, ಆದರೆ ನಾನು ಅವಳ ಕಣ್ಣುಗಳಲ್ಲಿ ಹೆಮ್ಮೆಯನ್ನು ಕಂಡೆ. ಜೊತೆಗೆ ನಾನು ಒಂದು ನಿರ್ಧಾರಕ್ಕೆ ಬಂದೇ ಜೀವನ ಹೇಗೆಯೇ ಇರಲಿ ಆದರೆ ಬದುಕು ನಿಲ್ಲಬಾರದು ಎಂದು.
ನಾನು ನನ್ನ ಶಿಕ್ಷಣವನ್ನು ಮುಂದುವರಿಸಬೇಕು. ದೊಡ್ಡ ಕಚೇರಿಯಲ್ಲಿ ಕೆಲಸ ಮಾಡಬೇಕು, ನನ್ನ ಪೋಷಕರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಬೇಕು ಹೀಗೆ ಕನಸುಗಳಿವೆ. ಇವೆಲ್ಲಾ ಕನಸುಗಳನ್ನು ಈಡೇರಿಸಲು ಸ್ವಲ್ಪ ಸಮಯ ಬೇಕು. ಆದರೆ ನಾನು ಇಷ್ಟೊಂದು ದೊಡ್ಡ ಕನಸು ಕಾಣಬಲ್ಲೆ ಎಂಬುದೇ ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಅರ್ಚನಾ ಪಾಟೀಲ್ ಹೇಳಿಕೊಂಡಿದ್ದಾರೆ. ಇವರ ಕತೆ ಈಗ ಅನೇಕರಿಗೆ ಸ್ಪೂರ್ತಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

