- Home
- Karnataka Districts
- ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?
ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?
ಬೆಳಗಾವಿಯ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ 8.27 ಲಕ್ಷ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿದೆ. ಆದರೆ, ಈ ಬಗ್ಗೆ ಮಾತನಾಡಿದ ಕಾರ್ಮಿಕ ಲಕ್ಕುಂಡಿ ನಿಧಿ ಪ್ರಕರಣದ ಅರಿವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಚಿನ್ನದ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಬೆಳಗಾವಿಯ ಇಂಚಲ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಬಂಗಾರದ ನಾಣ್ಯಗಳ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೂಲಿ ಕೆಲಸ ಮಾಡುವ ವೇಳೆ ಮಣ್ಣಿನ ಗಡಿಗೆಯಲ್ಲಿ ಸಿಕ್ಕ ಬರೋಬ್ಬರಿ 8.27 ಲಕ್ಷ ರೂಪಾಯಿ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳನ್ನು ಕೂಲಿಕಾರ್ಮಿಕನೊಬ್ಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆದರೆ, ಇದರ ಹಿಂದೆ ಲಕ್ಕುಂಡಿ ಪ್ರಕರಣದ ಅರಿವಿನ ಬಗ್ಗೆ ಸುವರ್ಣ ನ್ಯೂಸ್ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಕೂಲಿಕಾರ್ಮಿಕ ಯಲ್ಲಪ್ಪ ಕರಿಗಾರ ಎಂಬುವವರೇ ಈ ಅಪರೂಪದ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈ ಕುರಿತು ಅವರು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಜೊತೆ ಮಾತನಾಡಿ ಸಂಪೂರ್ಣ ಘಟನೆಯನ್ನು ಹಂಚಿಕೊಂಡಿದ್ದಾರೆ.
ಮಣ್ಣಿನ ಗಡಿಗೆಯಲ್ಲಿ ಸಿಕ್ಕಿತ್ತು 14 ಬಂಗಾರದ ನಾಣ್ಯಗಳು!
ಕಳೆದ ಆಗಸ್ಟ್ 29 ರಂದು ಇಂಚಲ ಗ್ರಾಮದ ಗೋಮಾಳ ಜಮೀನಿನಲ್ಲಿ ವಿಬಿಜಿ ರಾಮ್ ಜೀ (ಗ್ರಾಮೀಣ ಕಾಮಗಾರಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಯಲ್ಲಪ್ಪ ಕರಿಗಾರ ಸೇರಿದಂತೆ ನಾಲ್ವರು ಕೂಲಿಕಾರ್ಮಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಜಮೀನು ಅಗೆಯುವ ಸಂದರ್ಭದಲ್ಲಿ ಹಳೆಯ ಕಾಲದ ಮಣ್ಣಿನ ಪುಟ್ಟ ಗಡಿಗೆಯೊಂದು ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪುರಾತನ ಕಾಲದ 14 ಚಿನ್ನದ ನಾಣ್ಯಗಳಿರುವುದು ಕಂಡುಬಂದಿತ್ತು. ಈ ನಾಣ್ಯಗಳ ಅಂದಾಜು ಮೌಲ್ಯ ಬರೋಬ್ಬರಿ 8.27 ಲಕ್ಷ ರೂಪಾಯಿ ಎನ್ನಲಾಗಿದೆ.
ಮನೆಗೆ ತಂದಿದ್ದ ಯಲ್ಲಪ್ಪ; ಮನಸ್ಸು ಬದಲಾಗಿದ್ದು ಹೇಗೆ?
ನಿಧಿ ಸಿಕ್ಕ ತಕ್ಷಣ ಏನು ಮಾಡಬೇಕೆಂದು ದಿಕ್ಕು ತೋಚದೆ ಯಲ್ಲಪ್ಪ ಆ ಮಣ್ಣಿನ ಗಡಿಗೆಯನ್ನು ಮನೆಗೆ ಕೊಂಡೊಯ್ದು ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ವಿಚಾರ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ವೇಳೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದ ಯಲ್ಲಪ್ಪ ಅವರಿಗೆ, ‘ಭೂಮಿಯಲ್ಲಿ ಸಿಗುವ ಯಾವುದೇ ಪ್ರಾಚೀನ ನಿಧಿ ಅಥವಾ ಸಂಪತ್ತು ಸರ್ಕಾರದ ಸ್ವತ್ತು’ ಎಂಬ ಅರಿವು ಉಂಟಾಗಿದೆ.
ದುರಾಸೆಗೆ ಬೀಳದೆ ಸತ್ಯದ ಹಾದಿ ಹಿಡಿದ ಯಲ್ಲಪ್ಪ, ಕೂಡಲೇ ಇಂಚಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿ ಮಾಡಿ, ತನಗೆ ಸಿಕ್ಕಿದ್ದ ಎಲ್ಲಾ 14 ಚಿನ್ನದ ನಾಣ್ಯಗಳಿದ್ದ ಗಡಿಗೆಯನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ.
ಸರ್ವತ್ರ ಪ್ರಶಂಸೆ; ಸುವರ್ಣ ನ್ಯೂಸ್ಗೆ ಯಲ್ಲಪ್ಪ ಹೇಳಿದ್ದೇನು?
'ನಿಧಿ ಸಿಕ್ಕಾಗ ಒಂದು ಕ್ಷಣ ಭಯ ಮತ್ತು ಆಶ್ಚರ್ಯವಾಗಿತ್ತು. ಹೀಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದೆ. ಆದರೆ ಲಕ್ಕುಂಡಿ ಘಟನೆಯ ಬಳಿಕ ಇದು ಸಾರ್ವಜನಿಕ ಆಸ್ತಿ, ಸರ್ಕಾರಕ್ಕೆ ಸೇರಿದ್ದು ಎಂದು ತಿಳಿಯಿತು. ಆದ್ದರಿಂದ ಯಾವುದೇ ಆಸೆ ಪಡದೆ ಪಿಡಿಒ ಸಾಹೇಬರಿಗೆ ಒಪ್ಪಿಸಿದೆ. ಅಧಿಕಾರಿಗಳು ಮತ್ತು ಊರಿನ ಜನ ನನ್ನ ಪ್ರಾಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸುತ್ತಿದ್ದಾರೆ. ನನಗೆ ತುಂಬಾ ನೆಮ್ಮದಿ ಮತ್ತು ಖುಷಿಯಾಗಿದೆ' ಎಂದು ಯಲ್ಲಪ್ಪ ಕರಿಗಾರ ಸುವರ್ಣ ನ್ಯೂಸ್ ಎದುರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಡತನದಲ್ಲಿದ್ದರೂ ಕೋಟ್ಯಂತರ ಆಸೆಯ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸರ್ಕಾರಕ್ಕೆ ಮರಳಿಸಿದ ಯಲ್ಲಪ್ಪನ ಪ್ರಾಮಾಣಿಕತೆಗೆ ಇಡೀ ಜಿಲ್ಲೆಯಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

