- Home
- Karnataka Districts
- ಕೊಪ್ಪಳ: ಮನೇಲಿ ಕೂಲಿಗೆ ಹೋಗು ಅಂದಿದ್ದಕ್ಕೆ AI ನಲ್ಲಿ ಹುಲಿ ಸೃಷ್ಟಿಸಿ ಆತಂಕ, ಮೈಗಳ್ಳನಿಗೆ 50 ಬಸ್ಕಿ ಹೊಡೆಸಿದ ಅರಣ್ಯ ಸಿಬ್ಬಂದಿ!
ಕೊಪ್ಪಳ: ಮನೇಲಿ ಕೂಲಿಗೆ ಹೋಗು ಅಂದಿದ್ದಕ್ಕೆ AI ನಲ್ಲಿ ಹುಲಿ ಸೃಷ್ಟಿಸಿ ಆತಂಕ, ಮೈಗಳ್ಳನಿಗೆ 50 ಬಸ್ಕಿ ಹೊಡೆಸಿದ ಅರಣ್ಯ ಸಿಬ್ಬಂದಿ!
AI ತಂತ್ರಜ್ಞಾನ ಯುವಕರ ಕೈಗೆ ಬಂದ ನಂತರ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚುತ್ತಿದೆ, ಅನುಕೂಲಕ್ಕಿಂತ ಅನಾಹುತವೇ ಸೃಷ್ಟಿಸುತ್ತಿದೆ ಎಂಬುದಕ್ಕೆ ಇಲ್ಲೊಂದು ಘಟನೆ ತಾಜಾ ನಿದರ್ಶನವಾಗಿದೆ. ಕೊಪ್ಪಳದ ಕವಳಿ ಗ್ರಾಮ ಹುಡುಗನೊಬ್ಬ ಕೆಲಸ ತಪ್ಪಿಸಲು ಎಐ ಬಳಸಿ ಅನಾಹುತ ಸೃಷ್ಟಿಸಿದ್ದಾನೆ.

ಕೊಪ್ಪಳ: ಕವಳಿ ಗ್ರಾಮದ ಹುಡುಗನಿಂದ ಎಐನಲ್ಲಿ ಹುಲಿ ಸೃಷ್ಟಿಸಿ ಆತಂಕ
ಕೊಪ್ಪಳದ ಕವಳಿ ಗ್ರಾಮದ ಈರಣ್ಣ ಎಂಬ ಹುಡುಗ ಎಐ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದ ಅಸಾಮಿ. ಈರಣ್ಣ ಪೋಷಕರು ಬಡವರು. ದೈನಂದಿನ ಜೀವನ ನಿರ್ವಹಣೆಗೆ ಕೂಲಿ ಮಾಡಬೇಕಾದ ಅನಿವಾರ್ಯತೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೇ ದುಡಿದರೆ ಆಗದು ಅಂತಾ ಮಗ ಈರಣ್ಣನಿಗೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಾರೆ. ಆದರೆ ಈರಣ್ಣ ಸೋಮಾರಿತನ ಕೂಲಿ ಕೆಲಸ ಮಾಡಲು ಇಷ್ಟವಿಲ್ಲದಿರುವುದು ಹೇಗಾದರೂ ಕೂಲಿಗೆ ಹೋಗುವುದು ತಪ್ಪಿಸಲು ಇಂಥ ಅನಾಹುತ ಸೃಷ್ಟಿಸಿದ್ದಾನೆ. ಎಐನಲ್ಲಿ ಹುಲಿ ಸೃಷ್ಟಿ, ಗುಡ್ಡದಲ್ಲಿ ಹುಲಿ ಬಂದಿದೆ ಅಂತಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದ ಯುವಕ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
50 ಬಸ್ಕಿ ಹೊಡೆಸಿದ ಅರಣ್ಯಾಧಿಕಾರಿಗಳು
ಕೂಲಿ ಕೆಲಸದಿಂದ ತಪ್ಪಿಸಿಕೊಳ್ಳು ಎಐ ನಲ್ಲಿ ಹುಲಿ ಸೃಷ್ಟಿಸಿ ಆತಂಕ ಸೃಷ್ಟಿಸಿದ ಯುವಕನಿಗೆ ಅರಣ್ಯಾಧಿಕಾರಿಗಳು ತಕ್ಕ ಶಾಸ್ತಿ ಮಾಡಿದ್ದಾರೆ. ಯುವಕ ಇದ್ದಲ್ಲಿಗೆ ತೆರಳಿದ ಅರಣ್ಯ ಸಿಬ್ಬಂದಿ 50 ಬಸ್ಕಿ ಹೊಡೆಸಿದ್ದಾರೆ. ಅರಣ್ಯ ಸಿಬ್ಬಂದಿ ವಿಚಾರಣೆ ವೇಳೆ ಕೆಲಸದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಅಂತಾ ಈರಣ್ಣ ತಪ್ಪೊಪ್ಪಿಕೊಂಡಿದ್ದಾನೆ.
ಈಗಾಗಲೇ ಕೊಪ್ಪಳ ಸುತ್ತಮುತ್ತ ಕರಡಿ, ಹುಲಿ ಪ್ರತ್ಯಕ್ಷ ವರದಿಗಳಿಂದ ಹಳ್ಳಿಯ ಜನರು ಕೂಲಿಗೆ ಹೋಗಲು ಹೆದರುವಂತಾಗಿದೆ. ಹೀಗಿರುವಾಗ ಎಐನಲ್ಲಿ ಹುಲಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು.
ನೈಜ ವಿಡಿಯೋದಂತೆ ಕಾಣುತ್ತೆ!
ನೈಜ ವಿಡಿಯೋ ರೀತಿಯಲ್ಲೇ ಕಾಣುವ ದೃಶ್ಯವನ್ನು ಕಂಡು ಗ್ರಾಮಸ್ಥರು ಗೊಂದಲಕ್ಕೆ ಒಳಗಾಗಿದ್ದಾರೆ. ಇಂಥದೊಂದು ಎಐ ತಂತ್ರಜ್ಞಾನ ಎಂಬುದನ್ನ ತಿಳಿಯಾದ ಹಳ್ಳಿಯ ಕೂಲಿ ಕಾರ್ಮಿಕರು, ಕೃಷಿಕರು ಇದನ್ನೇ ನಿಜವೆಂದು ಭಾವಿಸಿ ಹೊರಗೆ ಬರಲು ಹೆದರುವಂತಹ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂಥ ವಿಡಿಯೋಗಳ ಬಗ್ಗೆ ಅರಣ್ಯ ಇಲಾಖೆ, ಪೊಲೀಸರು ಕಠಿಣ ಕ್ರಮ ಜರುಗಿಸಬೇಕಾದ ಅಗತ್ಯವಿದೆ.

