Vishwakarma Puja 2026 : ಭಗವಾನ್ ವಿಶ್ವಕರ್ಮರನ್ನು ದೇವತೆಗಳ ವಾಸ್ತುಶಿಲ್ಪಿ ಎಂದು ಕರೆಯಲಾಗುತ್ತದೆ. ಅವರು ಶಿವನ ತ್ರಿಶೂಲ, ಸುದರ್ಶನ ಚಕ್ರ ಮತ್ತು ಅನೇಕ ದಿವ್ಯ ಆಯುಧಗಳನ್ನು ನಿರ್ಮಿಸಿದರು; ಹಾಗೆಯೇ ಸ್ವರ್ಗ ನಗರಿ, ಲಂಕೆಯ ಸುವರ್ಣ ನಗರಿ ಮತ್ತು ದ್ವಾರಕೆಯಂತಹ ನಗರಗಳನ್ನು ಕೂಡ ನಿರ್ಮಿಸಿದರು. ಈ ವರ್ಷ ವಿಶ್ವಕರ್ಮ ಪೂಜೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಗವಾನ್ ವಿಶ್ವಕರ್ಮ

ಹಿಂದೂ ಧರ್ಮದಲ್ಲಿ ಭಗವಾನ್ ವಿಶ್ವಕರ್ಮರನ್ನು ವಾಸ್ತುಶಿಲ್ಪಿ, ಎಂಜಿನಿಯರ್ ಹಾಗೂ ಶಿಲ್ಪಿಯಾಗಿ ಪರಿಗಣಿಸಲಾಗುತ್ತದೆ. ಸೃಷ್ಟಿಯ ನಿರ್ಮಾಣದಲ್ಲಿ ವಿಶ್ವಕರ್ಮರು ಮಹತ್ವದ ಕೊಡುಗೆ ನೀಡಿದ್ದಾರೆ ಎಂಬ ನಂಬಿಕೆ ಇದೆ. ಪೌರಾಣಿಕ ಕಥೆಗಳ ಪ್ರಕಾರ, ಸ್ವರ್ಗಲೋಕ, ಲಂಕಾನಗರಿ, ಇಂದ್ರಪ್ರಸ್ಥ ಮತ್ತು ದ್ವಾರಕೆಯಂತಹ ಭವ್ಯ ನಗರಗಳನ್ನು ವಿಶ್ವಕರ್ಮರು ನಿರ್ಮಿಸಿದ್ದಾರೆ ಎನ್ನಲಾಗುತ್ತದೆ. ಅವರ ಜಯಂತಿಯ ದಿನ ದೇಶಾದ್ಯಂತ ಕುಶಲಕರ್ಮಿಗಳು, ಎಂಜಿನಿಯರ್‌ಗಳು ಹಾಗೂ ಯಂತ್ರೋಪಕರಣಗಳಿಗೆ ಸಂಬಂಧಿಸಿದವರು ತಮ್ಮ ಉಪಕರಣಗಳು, ಸಲಕರಣೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಸೆಪ್ಟೆಂಬರ್ 17ರಂದು ವಿಶ್ವಕರ್ಮ ಪೂಜೆ

ಈ ವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಈಗಾಗಲೇ ಪೂಜೆಯ ಸಿದ್ಧತೆಗಳು ಆರಂಭವಾಗಿವೆ. ವಿಶ್ವಕರ್ಮ ಪೂಜೆಗೆ ಬೆಳಗ್ಗೆ 7:58ರಿಂದ ಮಧ್ಯಾಹ್ನ 12:40ರವರೆಗೆ ಶುಭ ಸಮಯ. ಇದಲ್ಲದೆ, ಅಭಿಜಿತ್ ಮುಹೂರ್ತದಲ್ಲಿಯೂ ವಿಶ್ವಕರ್ಮರನ್ನು ಪೂಜಿಸುವುದು ಶುಭಕರ.

ಬ್ರಹ್ಮದೇವರ ಮಾನಸ ಪುತ್ರ ವಿಶ್ವಕರ್ಮ

ಪೌರಾಣಿಕ ಕಥೆಗಳ ಪ್ರಕಾರ, ಭಗವಾನ್ ವಿಶ್ವಕರ್ಮರು ವಾಸ್ತುದೇವ ಮತ್ತು ಅಂಗಿರಸಿಯ ಪುತ್ರರು. ಕೆಲವು ಗ್ರಂಥಗಳಲ್ಲಿ ಅವರನ್ನು ಬ್ರಹ್ಮದೇವರ ಮಾನಸ ಪುತ್ರರೆಂದೂ ಉಲ್ಲೇಖಿಸಲಾಗಿದೆ. ಕನ್ಯಾ ಸಂಕ್ರಾಂತಿಯ ದಿನ ಅವರ ಜನನವಾಯಿತು ಎಂಬ ನಂಬಿಕೆ ಇರುವುದರಿಂದ ಪ್ರತಿವರ್ಷ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಭಗವಾನ್ ವಿಶ್ವಕರ್ಮರ ಸ್ವರೂಪ ಹೇಗಿರುತ್ತದೆ?

ಭಗವಾನ್ ವಿಶ್ವಕರ್ಮರನ್ನು ನಾಲ್ಕು ತೋಳುಗಳು, ಚಿನ್ನದ ಬಣ್ಣ, ಚಿನ್ನದ ಆಭರಣಗಳು ಮತ್ತು ಶಿಲ್ಪಕಲೆಯ ಉಪಕರಣಗಳೊಂದಿಗೆ ಚಿತ್ರಿಸಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ಅವರಿಗೆ ಐದು ಮುಖಗಳಿವೆ ಎಂದು ವಿವರಿಸಲಾಗಿದೆ. ಅವುಗಳನ್ನು ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂದು ಕರೆಯಲಾಗುತ್ತದೆ.

ದೇವತೆಗಳ ಶಿಲ್ಪಿ ಭಗವಾನ್ ವಿಶ್ವಕರ್ಮ

ಭಗವಾನ್ ವಿಶ್ವಕರ್ಮರನ್ನು ಮಹಾನ್ ಶಿಲ್ಪಿ ಹಾಗೂ ವಾಸ್ತುಶಿಲ್ಪಿಯಾಗಿ ಗೌರವಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಸತ್ಯಯುಗದಲ್ಲಿ ಸ್ವರ್ಗಲೋಕ, ತ್ರೇತಾಯುಗದಲ್ಲಿ ಚಿನ್ನದ ಲಂಕೆ, ದ್ವಾಪರಯುಗದಲ್ಲಿ ದ್ವಾರಕೆ ಹಾಗೂ ಕಲಿಯುಗದಲ್ಲಿ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥವನ್ನು ಅವರು ನಿರ್ಮಿಸಿದ್ದಾರೆ. ಜಗನ್ನಾಥ ಪುರಿ ದೇವಾಲಯದ ಬೃಹತ್ ವಿಗ್ರಹಗಳು ಮತ್ತು ರಾಮಾಯಣದಲ್ಲಿ ಉಲ್ಲೇಖವಾಗಿರುವ ಪುಷ್ಪಕ ವಿಮಾನವೂ ಅವರ ಶಿಲ್ಪಕಲೆಯ ಪ್ರತೀಕ.

ಶಿವನ ತ್ರಿಶೂಲ, ವಿಷ್ಣುವಿನ ಸುದರ್ಶನ ಚಕ್ರವನ್ನೂ ನಿರ್ಮಿಸಿದರಂತೆ!

ವಿಶ್ವಕರ್ಮರು ಕೇವಲ ನಗರಗಳು ಮತ್ತು ಕಟ್ಟಡಗಳನ್ನು ಮಾತ್ರ ನಿರ್ಮಿಸಲಿಲ್ಲ. ಪೌರಾಣಿಕ ಕಥೆಗಳ ಪ್ರಕಾರ, ದೇವತೆಗಳಿಗಾಗಿ ಹಲವು ದಿವ್ಯಾಸ್ತ್ರಗಳನ್ನೂ ನಿರ್ಮಿಸಿದರು. ಅವುಗಳಲ್ಲಿ ಭಗವಾನ್ ವಿಷ್ಣುವಿನ ಸುದರ್ಶನ ಚಕ್ರ, ಭಗವಾನ್ ಶಿವನ ತ್ರಿಶೂಲ, ಬ್ರಹ್ಮದೇವರ ಬ್ರಹ್ಮಾಸ್ತ್ರ, ಯಮರಾಜನ ಕಾಲದಂಡ ಮತ್ತು ಪಾಶ ಹಾಗೂ ಇಂದ್ರದೇವನ ವಜ್ರ ಪ್ರಮುಖವಾಗಿವೆ.

 ವಿಶ್ವಕರ್ಮ ಪೂಜೆಯ ಮಹತ್ವವೇನು?

ವಿಶ್ವಕರ್ಮ ಜಯಂತಿಯಂದು ಕಾರ್ಖಾನೆಗಳು, ಕೆಲಸದ ಸ್ಥಳಗಳು ಮತ್ತು ಕಚೇರಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಜನರು ತಮ್ಮ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಅರಿಶಿನ ಮತ್ತು ಚಂದನ ಹಚ್ಚಿ ವಿಶ್ವಕರ್ಮರನ್ನು ಪೂಜಿಸುತ್ತಾರೆ. ಕೆಲಸದಲ್ಲಿ ಪ್ರಗತಿ, ಯಶಸ್ಸು ಮತ್ತು ಸಮೃದ್ಧಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸುತ್ತಾರೆ. ಈ ಹಬ್ಬವು ಶಿಲ್ಪಕಲೆ ಮತ್ತು ಕೌಶಲ್ಯಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಪರಿಶ್ರಮ ಹಾಗೂ ಸೃಜನಶೀಲತೆಯನ್ನೂ ಆಚರಿಸುವ ಹಬ್ಬವಾಗಿದೆ.