'ಕರಾವಳಿ' ಚಿತ್ರದ ಟ್ರೈಲರ್ ವಿವಾದದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ಚಿತ್ರತಂಡ ಸಂಭಾವನೆ ಬಾಕಿ ಉಳಿಸಿಕೊಂಡಿದ್ದರಿಂದ ಡಬ್ಬಿಂಗ್ ಮಾಡಿರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು (ಜು.7): ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ‘ಕರಾವಳಿ’ ಚಿತ್ರದ ಟ್ರೈಲರ್ ಲಾಂಚ್ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ನಾಯಕ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ತಾವು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಹಾಗೂ ಟ್ರೈಲರ್‌ನಲ್ಲಿ ತಮ್ಮ ಧ್ವನಿ ಇಲ್ಲದಿರಲು ಕಾರಣವೇನು ಎಂಬುದನ್ನು ಮಾಧ್ಯಮಗಳ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನನ್ನ ಇಡೀ ಸಿನಿ ಜರ್ನಿಯಲ್ಲಿ ಇಂತಹ ಬ್ಲಾಕ್ ಮಾರ್ಕ್ ಇರಲಿಲ್ಲ, ಆದರೆ ಚಿತ್ರತಂಡ ನನ್ನನ್ನು ನಡೆಸಿಕೊಂಡ ರೀತಿ ತೀವ್ರ ಬೇಸರ ತರಿಸಿದೆ' ಎಂದು ಅವರು ಬೇಸರ ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖಾಸಗಿ ಟಿವಿಯ ಜೊತೆ ಮಾತನಾಡಿರುವ ಪ್ರಜ್ವಲ್‌ ದೇವರಾಜ್‌, ನಾನು ಚಿತ್ರರಂಗದ ಮೇಲಿರುವ ಪ್ರೀತಿ ಮತ್ತು ಬಾಂಧವ್ಯದಿಂದಾಗಿ ನಿರ್ಮಾಪಕರಿಗಾಗಿ ಕಳೆದ ವರ್ಷದಲ್ಲಿ ಅಂದಾಜು 1.5 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದೇನೆ. ಆದರೆ, ನಾವೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರಬೇಕಲ್ಲವೇ? ಕಳೆದ 2-3 ವರ್ಷಗಳಿಂದ ಬೇರೆ ಸಿನಿಮಾ ಮಾಡದೆ ಕೇವಲ ಈ ಪ್ರಾಜೆಕ್ಟ್‌ಗಳನ್ನೇ ನಂಬಿ ಮನೆಯಲ್ಲಿದ್ದೇನೆ. ನನಗೂ ಫೈನಾನ್ಸಿಯಲ್ ಕಮೀಟ್‌ಮೆಂಟ್‌ ಇರುತ್ತವೆ. ಚಿತ್ರತಂಡ ನನಗೆ ಕೊಡಬೇಕಾದ ಸಂಭಾವನೆ ಹಾಗೂ ಜಿಎಸ್‌ಟಿ (GST) ಪೇಮೆಂಟ್ ಅನ್ನು ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಟ್ಟರೆ ನಾನು ಬಂದು ಡಬ್ಬಿಂಗ್ ಮಾಡುತ್ತೇನೆ ಎಂದಿದ್ದೆ. ಆದರೆ ಅವರು ಖಡಾಖಂಡಿತವಾಗಿ 'ಕೊಡಲು ಆಗಲ್ಲ' ಎಂದು ಹಠ ಮಾಡುತ್ತಿದ್ದಾರೆ ಎಂದಿದ್ದಾರೆ.

ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ವಾಯ್ಸ್ ಇರಲಿಲ್ಲ!

ನಾನು ಸದಾ ಸಿನಿಮಾದ ಪ್ರಮೋಷನ್ ಮಾಡಲು ಸಿದ್ಧನಿದ್ದೆ. ನನ್ನ ಮ್ಯಾನೇಜರ್ ಮೂಲಕ ಚಿತ್ರತಂಡವನ್ನು ಸಂಪರ್ಕಿಸಿ 'ಟ್ರೈಲರ್ ಡಬ್ಬಿಂಗ್ ಯಾವಾಗ?' ಎಂದು ಕೇಳಿದ್ದೆ. ಆದರೆ ಅವರು 'ಫಸ್ಟ್ ಲಾಂಚ್‌ಗೆ ಬನ್ನಿ, ಆಮೇಲೆ ಮಾತನಾಡೋಣ' ಎಂದಿದ್ದರು. ನಾನು ಬೆಳಗ್ಗೆ ಜೋಶ್‌ನಲ್ಲಿ ಕಾರ್ಯಕ್ರಮಕ್ಕೆ ಹೋಗಲು ನಿರ್ಧಾರ ಮಾಡಿದ್ದೆ. ಆದರೆ, ನೆನ್ನೆ ಮಧ್ಯರಾತ್ರಿ ನಾನು ಕಾಡಿ ಬೇಡಿ ಅವರಿಂದ ಟ್ರೈಲರ್ ತರಿಸಿಕೊಂಡು ನೋಡಿದಾಗ ನನಗೆ ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನನ್ನ ಧ್ವನಿಯೇ ಇರಲಿಲ್ಲ! ಈ ಮುಂಚೆ ಹಾಡಿನ ಡೈಲಾಗ್‌ನಲ್ಲೂ ನನ್ನ ವಾಯ್ಸ್ ಬಳಸಿರಲಿಲ್ಲ. ಕನಿಷ್ಠಪಕ್ಷ ನನಗೆ ಈ ವಿಷಯವನ್ನು ತಿಳಿಸುವ ಸೌಜನ್ಯವನ್ನೂ ಚಿತ್ರತಂಡ ತೋರಲಿಲ್ಲ. ನನ್ನನ್ನು ಇಷ್ಟು ಕೇರ್‌ಲೆಸ್ ಮಾಡಿದ್ದಕ್ಕೆ ಬೇಸರಗೊಂಡು ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅವರು ಮೊದಲೇ ಹೇಳಿದ್ದರೆ ನಾನು ಉಚಿತವಾಗಿಯಾದರೂ ಟ್ರೈಲರ್ ಮುಗಿಸಿಕೊಡುತ್ತಿದ್ದೆ ಎಂದು ಹೇಳಿದರು.

ರಾಜ್ ಬಿ. ಶೆಟ್ಟಿ ಎಕ್ಸ್‌ಟ್ರಾಆರ್ಡಿನರಿ ಪರ್ಸನ್; ನಮ್ಮ ನಡುವೆ ಮನಸ್ತಾಪವಿಲ್ಲ

ಮಲ್ಟಿಸ್ಟಾರರ್ ಸಿನಿಮಾ ಎಂಬ ಕಾರಣಕ್ಕೆ ನಟ ರಾಜ್ ಬಿ. ಶೆಟ್ಟಿ ಮತ್ತು ನಿಮ್ಮ ನಡುವೆ ಇಗೋ ಕ್ಲ್ಯಾಶ್ (Ego Clash) ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್, ಖಂಡಿತವಾಗಿಯೂ ಇಲ್ಲ. ನಾವು ಹಿಂದೆ ‘ಚೌಕ’ ಸಿನಿಮಾದಲ್ಲಿ ನಾಲ್ಕು ಜನ ಹೀರೊಗಳು ಒಟ್ಟಿಗೆ ನಟಿಸಿರಲಿಲ್ಲವೇ? ಇವತ್ತಿಗೂ ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ರಾಜ್ ಬಿ. ಶೆಟ್ಟಿ ಅವರು ಎಕ್ಸ್‌ಟ್ರಾಆರ್ಡಿನರಿ ಟ್ಯಾಲೆಂಟ್, ಅಮೇಜಿಂಗ್‌ ಪರ್ಸನ್ ಮತ್ತು ವಂಡರ್‌ಫುಲ್ ಕೋ-ಸ್ಟಾರ್. ಅವರ ಜೊತೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅವರು ನನಗೆ ಕರೆ ಮಾಡಿಲ್ಲ, ಆದರೆ ಅವರ ಜೊತೆ ಮುಕ್ತವಾಗಿ ಮಾತನಾಡಲು ನಾನು ಸಿದ್ಧನಿದ್ದೇನೆ. ಇಂಡಸ್ಟ್ರಿ ಬೆಳೆಯಬೇಕು, ಪ್ರೊಡ್ಯೂಸರ್ಸ್ ಚೆನ್ನಾಗಿರಬೇಕು ಅನ್ನೋದಷ್ಟೇ ನನ್ನ ಆಸೆ ಎಂದಿದ್ದಾರೆ.

ಅಪ್ಪನಿಗೆ ಬೇಸರವಾಗಿದೆ; ಲಿಖಿತ ಒಪ್ಪಂದ ಮಾಡಿಕೊಳ್ಳದ ನಂಬಿಕೆಯೇ ಮುಳುವಾಯಿತು!

"ನನ್ನ ತಂದೆ (ಹಿರಿಯ ನಟ ದೇವರಾಜ್) ಈ ಬೆಳವಣಿಗೆಯಿಂದ ತೀವ್ರ ಬೇಸರಗೊಂಡಿದ್ದಾರೆ. 'ನೀನ್ಯಾಕಪ್ಪಾ ಹೀಗೆ ಪ್ರತಿಬಾರಿಯೂ ಲಾಸ್ಟ್ ತನಕ ಕಾಸು ಬಿಟ್ಟುಕೊಟ್ಟು ಒದ್ದಾಡುತ್ತೀಯಾ, ನಿನ್ನ ನೋಡಿದರೆ ಅಯ್ಯೋ ಅನ್ಸುತ್ತೆ' ಎಂದು ಬೇಸರ ಹೊರಹಾಕಿದ್ದಾರೆ. ನಾನು ಯಾವುದೇ ನಿರ್ಮಾಪಕರ ಹತ್ತಿರ ಲಿಖಿತ ಒಪ್ಪಂದ ಮಾಡಿಕೊಳ್ಳಲ್ಲ. ಮಾತಿನ ನಂಬಿಕೆ ಮೇಲೆ ಸಿನಿಮಾ ಮಾಡುತ್ತೇನೆ. ಅದೇ ಈಗ ನನಗೆ ಮುಳುವಾಗಿದೆ ಎಂದಿದ್ದಾರೆ ಪ್ರಜ್ವಲ್.

ಸಿನಿಮಾ ಒಬ್ಬನದಲ್ಲ, ಅದರ ಹಿಂದೆ 500 ಜನರ ಬದುಕಿರುತ್ತದೆ...

ಒಂದು ಸಿನಿಮಾದ ಹಿಂದೆ ನನ್ನೊಬ್ಬನದಲ್ಲ, 500 ಜನರ ಬದುಕಿರುತ್ತದೆ. ಎಲ್ಲರಿಗೂ ಆ ಸಿನಿಮಾ ಜೀವನ ನೀಡಬೇಕು. ಚಿತ್ರತಂಡದೊಂದಿಗೆ ನನ್ನ ಮ್ಯಾನೇಜರ್ ಇನ್ನು ಕಾಂಟ್ಯಾಕ್ಟ್‌ನಲ್ಲೇ ಇದ್ದಾರೆ. ಸಮಸ್ಯೆ ಬಗೆಹರಿದರೆ ನನಗೂ ಸಂತೋಷವೇ" ಎಂದು ಮಾತು ಮುಗಿಸಿರುವ ಪ್ರಜ್ವಲ್, ನಾಯಕ ನಟನ ಧ್ವನಿ ಇಲ್ಲದೆ ಸಿನಿಮಾ ರಿಲೀಸ್ ಆಗುವುದು ಹೇಗೆ ಎಂಬ ಪ್ರಶ್ನೆಗೆ, "ಅದು ನನಗೂ ದೊಡ್ಡ ಡೌಟ್!" ಎಂದು ಉತ್ತರಿಸಿರುವುದು ಚಿತ್ರದ ಭವಿಷ್ಯದ ಮೇಲೆ ಕುತೂಹಲ ಮೂಡಿಸಿದೆ.