Asianet Suvarna News Asianet Suvarna News

ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಮಾಸ್ಟರ್‌ ಪ್ಲಾನ್‌: ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಗೆ ಅನ್ವಯವಾಗುವಂತೆ ತಯಾರಾಗುವ ಈ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಅಂದಾಜು 16 ಲಕ್ಷ ರು.ಗಳವರೆಗೂ ಖರ್ಚಾಗಬಹುದು. ಈ ಅನುಕೂಲು ಕ್ಷೇತ್ರದ 24 ಪ್ರೌಢಶಾಲೆಗಳ ಸುಮಾರು 4000 ಮಕ್ಕಳಿಗೆ ಸಿಗುತ್ತಿದ್ದು, ಪರೀಕ್ಷೆ ನಡೆಯುವ ಎಲ್ಲಾ ಶಾಲೆಗಳಿಗೂ ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗುವುದು. ನವೆಂಬರ್ 4 ರಿಂದ ಪ್ರತಿದಿನ ನಡೆಯುವ 48 ಟೆಸ್ಟ್ ಗಳು ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮುಗಿಯಲಿವೆ: ಶಾಸಕ ಪ್ರದೀಪ್‌ ಈಶ್ವರ್‌

master plan for better SSLC results Says Chikkaballapur Congress MLA Pradeep Eshwar grg
Author
First Published Oct 20, 2024, 8:39 AM IST | Last Updated Oct 20, 2024, 8:39 AM IST

ಚಿಕ್ಕಬಳ್ಳಾಪುರ(ಅ.20):  ಎಸ್ಸೆಸ್ಸೆಲ್ಸಿ ಸರಣಿ ಟೆಸ್ಟ್ 2023- 24 ಎಂಬ ಹೆಸರಿನಲ್ಲಿ ಪ್ರಶ್ನೆ ಪತ್ರಿಕೆ ತಯಾರಾಗುತಿದ್ದು, ಈ ಸರಣಿ ಟೆಸ್ಟ್‌ನಿಂದ ವಿದ್ಯಾರ್ಥಿಗಳು ಪ್ರತಿದಿನ ತಾವು ಮರೆತಿರುವ ವಿಷುಯಗಳ ನೆನಪು ಮಾಡಿಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗೆ ಉತ್ತಮ ಸಿದ್ಧತೆ ನಡೆಸಲು ಸಹಾಯವಾಗುತ್ತದೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಪ್ರೌಢಶಾಲಾ ಶಿಕ್ಷಕರ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಾಸಕರು, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಈ ಮಾಸ್ಟರ್‌ ಪ್ಲಾನ್‌ ರೂಪಿಸಿರುವುದಾಗಿ ವಿವರಿಸಿದರು.

ವರ್ಷಕ್ಕೆ 3 ಪರೀಕ್ಷೆಯ ಪ್ರಯೋಗ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್: ಪಿಯು ಫಲಿತಾಂಶ ಏರಿಕೆ!

4000 ಮಕ್ಕಳಿಗೆ ಅನುಕೂಲ

ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಗೆ ಅನ್ವಯವಾಗುವಂತೆ ತಯಾರಾಗುವ ಈ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಅಂದಾಜು 16 ಲಕ್ಷ ರು.ಗಳವರೆಗೂ ಖರ್ಚಾಗಬಹುದು. ಈ ಅನುಕೂಲು ಕ್ಷೇತ್ರದ 24 ಪ್ರೌಢಶಾಲೆಗಳ ಸುಮಾರು 4000 ಮಕ್ಕಳಿಗೆ ಸಿಗುತ್ತಿದ್ದು, ಪರೀಕ್ಷೆ ನಡೆಯುವ ಎಲ್ಲಾ ಶಾಲೆಗಳಿಗೂ ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗುವುದು. ನವೆಂಬರ್ 4 ರಿಂದ ಪ್ರತಿದಿನ ನಡೆಯುವ 48 ಟೆಸ್ಟ್ ಗಳು ಡಿಸೆಂಬರ್ ತಿಂಗಳ ಅಂತ್ಯಕ್ಕೆ ಮುಗಿಯಲಿವೆ ಎಂದರು.

ಜಾತಿಗಣತಿ ವರದಿಗೆ ವಿರೋಧವಿಲ್ಲ

ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಎಚ್. ಕಾಂತರಾಜು ಅವರ ಜಾತಿ ಗಣತಿ ವರದಿಯ ಬಹಿರಂಗಕ್ಕೆ ನನ್ನ ವಿರೋಧ ಇಲ್ಲ. ಆದರೆ ಕೆಲವು ಸಮುದಾಯದ ಮುಖಂಡರು ಇದಕ್ಕೆ ಅಡ್ಡಗಾಲು ಹಾಕಿದ್ದಾರೆ. ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಳಿಗೆ ವರದಿ ಜಾರಿಯಿಂದ ಅವಕಾಶಗಳು ಸಿಗಲಿವೆ ಎಂದರು.
ಅಹಿಂದ ವರ್ಗಗಗಳಲ್ಲಿ ಅರಿವು ಮತ್ತು ಸಂಘಟನೆಯ ಕೊರತೆಯ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ ಎನ್ನುವುದರ ಜೊತೆಗೆ ನಿರ್ಧಿಷ್ಟವಾಗಿ ಅವರ ಜನಸಂಖ್ಯಾ ಪರಿಸ್ಥಿತಿ ಗೊತ್ತಿಲ್ಲದಿರುವುದು ಪ್ರಮುಖ ಕಾರಣವಾಗಿದೆ. ಜಾತಿ ಜನಗಣತಿಯ ವರದಿ ಬಂದರೆ ಜಾತಿಗಳ ವಸ್ತುಸ್ಥಿತಿ ತಿಳಿಯಲಿದೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ.

2ಎ ಮೀಸಲು ಉದ್ಯೋಗಕ್ಕೂ ಅನ್ವಯ

ಜಾತಿ ಜನಗಣತಿ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲಾ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ಆಗಲಿದೆ. ನಾನು ಸಹ ಹಿಂದುಳಿದ ವರ್ಗದ ಬಲಿಜ ಜಾತಿಗೆ ಸೇರಿದ್ದೇನೆ ಬಲಿಜ ಸಮುದಾಯವನ್ನು ಶೈಕ್ಷಣ ಮೀಸಲಾತಿಗೆ ನೀಡಿರುವ 2 ಎ ಯನ್ನು ಉದ್ಯೋಗ ಮೀಸಲಾತಿಗೂ ಅನ್ವಯವಾಗುವಂತೆ ಪರಿವರ್ತಿಸಬೇಕು ಎಂದು ಸರ್ಕಾರವನ್ನು ಕೋರಿದ್ದೇವೆ. ಅದನ್ನ ನಾನು ಮಾಡಿಸಿಯೇ ತೀರುತ್ತೆನೆ ಎಂದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕ್ರಷರ್ ಗಳ ಹಾವಳಿ ತಪ್ಪಿಸಲು ಅವರಿಗೆ ನೀಡಿರುವ ಅನುಮತಿ ರದ್ದುಪಡಿಸಬಹುದಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾನು ಶಾಸಕ, ಕ್ರಷರ್ ಗಳ ಅನುಮತಿ ರದ್ದು ಪಡಿಸಲು ಸರ್ಕಾರದಿಂದ ಮಾತ್ರ ಸಾಧ್ಯ. ನನ್ನ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಕ್ರಷರ್ ಗಳ ಅನುಮತಿ ರದ್ದು ಪಡಿಸಲು ಸರ್ಕಾರದಲ್ಲಿ ಒತ್ತಡ ತರುತ್ತೇನೆ ಎಂದರು. 

ಎಸ್‌ಎಸ್‌ಎಲ್‌ಸಿಯಲ್ಲಿ ಇನ್ಮುಂದೆ ಗ್ರೇಸ್‌ ಅಂಕವಿಲ್ಲ: ಸಚಿವ ಮಧು ಬಂಗಾರಪ್ಪ

ಕಾಂಗ್ರೆಸ್‌ ಸರ್ಕಾರ ಗಟ್ಟಿಯಾಗಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಇಡಿ ದಾಳಿ ಬಗ್ಗೆ ಕೇಳಿದ ಪ್ರಶ್ನೆಗೆ, ಇನ್ನೂ ಸಿಎಂ ಸಿದ್ದರಾಮಯ್ಯ ಸರ್ಕಾರ ಗಟ್ಟಿಯಾಗಿದೆ. ಅವರ ಮೇಲೆ ಇಡಿ ಲೋಕಾಯುಕ್ತ ಯಾರಾದ್ರು ತನಿಖೆ ನಡೆಸಲಿ ಏನೂ ಆಗೊಲ್ಲ ಎಂದು ಉತ್ತರಿಸಿದ ಶಾಸಕರು, ನಗರದ ಗಂಗಮ್ಮಗುಡಿ ರಸ್ತೆ, ಬಜಾರ್ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಇದಕ್ಕೆ ಮುನ್ನ ನಡೆದ ಶೈಕ್ಷಣಿಕ ಅಭಿವೃದ್ಧಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಡಿಡಿಪಿಐ ಬೈಲಾಂಜಿನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್, ವೆಂಕಟೇಶಪ್ಪ, ಮಾಸ್ಟರ್ ವಿಷನ್ ಶಾಲೆಯ ಮುಖ್ಯಸ್ಥ ನಾಗಭೂಷಣ್ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios