'ಗೆಳತಿಯನ್ನು ಮದುವೆಯಾಗಬೇಕು ನನ್ನ ಲಿಂಗ ಪರಿವರ್ತನೆ ಮಾಡಿ' ಎಂದ ಲೆಸ್ಬಿಯನ್ನಳನ್ನು ಕೊಂದ ಮಾಟಗಾರ!
ಪ್ರೀತಿಸಿದ ಗೆಳತಿಯನ್ನು ಮದುವೆಯಾಗುವ ಸಲುವಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಹುಡುಗನಾಗಬೇಕು ಎಂದು ಬಯಸಿದ್ದಳು. ಆದರೆ, ಆಸ್ಪತ್ರೆಯ ಬದಲು ಮಾಟ ಮಾಡುವವನ ಬಳಿ ಬಂದಿದ್ದ ಆಕೆಯನ್ನು ಮಾಟಗಾರ ಹಾಗೂ ಆಕೆಯ ಗೆಳತಿ ಸೇರಿ ಕೊಲೆ ಮಾಡಿದ ಘಟನೆ ನಡೆದಿದೆ.
ನವದೆಹಲಿ (ಜೂ.21): ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಘಾತಕಾರಿ ಘಟನೆ ನಡೆದಿದೆ. ಕಾಲೇಜಿನಲ್ಲಿ ಭೇಟಿಯಾಗಿದ್ದ ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದ ಶಹಜಾನ್ಪುರದ 27 ವರ್ಷದ ಮಹಿಳೆಯನ್ನು ಮಾಟಗಾರನೊಬ್ಬ ಕೊಲೆ ಮಾಡಿದ್ದಾನೆ. ಸ್ನೇಹಿತೆಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದ ಆಕೆ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಸಲುವಾಗಿ ಮಾಟಗಾರನನ್ನು ಸಂಪರ್ಕಿಸಿದ್ದಳು. ಆದರೆ, ಮಾಟಗಾರ ಆಕೆಯನ್ನು ಕೊಲೆ ಮಾಡಿ ಈಗ ಪೊಲೀಸರಿ ಅತಿಥಿಯಾಗಿದ್ದಾನೆ. ಶಹಜಾನ್ಪುರದ ನಿವಾಸಿಯಾಗಿರುವ ಪೂನಂ ಕುಮಾರಿ ಮೃತ ದುರ್ದೈವಿ. ಲಿಂಗ ಪರಿವರ್ತನೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಮಾಟಗಾರ ರಾಮ್ನಿವಾಸ್ನನ್ನು ಪೊಲೀಸರು ಬಂಧಿಸಿದ್ದಾರೆ. ಪೂನಂ ಕುಮಾರಿ ತನ್ನ ಸ್ನೇಹಿತೆಯಾಗಿದ್ದ 25 ವರ್ಷದ ಪ್ರೀತಿ ಸಾಗರ್ರನ್ನು ಪ್ರೀತಿ ಮಾಡುತ್ತಿದ್ದರು. ಪ್ರೀತಿ ಸಾಗರ್ ಲಖೀಂಪುರ ಖೇರಿ ಮೂಲದವರು. ಬಿಎಡ್ ಓದುವ ವೇಳೆ ಇಬ್ಬರೂ ಪರಿಚಿತರಾಗಿದ್ದರು. ಆಪ್ತ ಸ್ನೇಹ ಕೊನೆಗೆ ಪ್ರೀತಿಯಾಗಿ ತಿರುಗಿತ್ತು ಎಂದು ಶಹಜಾನ್ಪುರದ ಎಎಸ್ಪಿ ಸುಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಈ ನಡುವೆ ಪ್ರೀತಿ ಸಾಗರ್ಗೆ ಮನೆಯಲ್ಲಿ ಮದುವೆಯಾಗುವ ಒತ್ತಡವೂ ಕೇಳಿ ಬಂದಿತ್ತು. ಮನೆಯವರ ದೊಡ್ಡ ಮಟ್ಟದ ಪ್ರಯತ್ನದ ಹೊರತಾಗಿಯೂ ಪುರುಷನನ್ನು ಮದುವೆಯಾಗಲು ತನಗೆ ಇಷ್ಟವಿಲ್ಲ ಎಂದು ಆಕೆ ತಿಳಿಸಿದ್ದಳು. ಈ ವೇಳೆ ಪ್ರೀತಿ ಸಾಗರ್ ಹಾಗೂ ಪೂನಂ ಕುಮಾರಿ ಪ್ರೀತಿ ಮಾಡುತ್ತಿರುವುದು ಗೊತ್ತಾಗಿದೆ. ಆ ಬಳಿಕ ಎರಡೂ ಕಡೆಯ ಕುಟುಂಬದವರು ಸಾಮಾಜಿಕ ಕಳಂಕಕ್ಕೆ ಹೆದರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೊಲೆ, ಕ್ರಿಮಿನಲ್ ಸಂಚು ಸೇರಿದಂತೆ ಹಲವು ಆರೋಪಗಳಡಿ ಪ್ರೀತಿ ಸಾಗರ್ಳನ್ನೂ ಪೊಲೀಸರು ಬಂಧಿಸಿದ್ದಾರೆ.
ಲಖಿಂಪುರ ಖೇರಿಯ ಮೊಹಮ್ಮದಿ ಪೊಲೀಸ್ ಠಾಣೆಯ ಉಸ್ತುವಾರಿ, ಅಂಬರ್ ಸಿಂಗ್, ಮಾಟಗಾರನು ಪ್ರೀತಿ ಸಾಗರ್ಳ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ. ಪೂನಂ ಕುಮಾರಿಯ ಲಿಂಗವನ್ನು ಬದಲಿಸಿದರೆ, ಪ್ರೀತಿ ಸಾಗರ್ ಹಾಗೂ ಪೂನಂ ಕುಮಾರಿ ಅವರ ಮದುವೆ ಸಾಧ್ಯವಿದೆ ಎನ್ನುವ ಸಲಹೆ ನೀಡಿದ್ದ.
ಮಾಟಮಂತ್ರ ಮಾಡಿ ಲಿಂಗ ಪರಿವರ್ತನೆ ಮಾಡುವ ಸಲುವಾಗಿ ಏಪ್ರಿಲ್ 18 ರಂದು ಲಖೀಂಪುರ ಖೇರಿಯ ಪ್ರೀತಿ ಸಾಗರ್ಳ ಮನೆಯಿಂದ 50 ಕಿಲೋಮೀಟರ್ ದೂರದ ಪ್ರದೇಶಕ್ಕೆ ಪೂನಂ ಕುಮಾರಿಯನ್ನು ಕರೆಸಿಕೊಳ್ಳಲಾಗಿತ್ತು. ಅದಾದ ಬಳಿಕ ಪೂನಂ ಕುಮಾರಿ ಪತ್ತೆಯಾಗಿಲ್ಲ. ಏಪ್ರಿಲ್ 26 ರಂದು ಪೂನಂ ಕುಮಾರಿಯ ಸಹೋದರ ಪರ್ವೀಂದರ್ ಕುಮಾರ್, ತಂಗಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. "ಪೊಲೀಸರು ಪೂನಂ ಕುಮಾರಿಯ ಕರೆ ವಿವರಗಳನ್ನು ಸ್ಕ್ಯಾನ್ ಮಾಡಿದಾಗ ಪ್ರೀತಿ ಸಾಗರ್ ಬಗ್ಗೆ ತಿಳಿದುಕೊಂಡರು ಮತ್ತು ಇಬ್ಬರೂ ದೀರ್ಘಕಾಲದವರೆಗೆ ಫೋನ್ನಲ್ಲಿ ಮಾತನಾಡುತ್ತಿದ್ದರು" ಎಂದು ಜೈಸ್ವಾಲ್ ಹೇಳಿದ್ದಾರೆ.
ಗೆಳತಿ ಮಾತು ನಂಬಿ ಪುರುಷನಾದ ಯುವತಿ, ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಕೈಕೊಟ್ಟಗೆಳತಿ!
ಈ ವೇಳೆ ಸೆರೆಸಿಕ್ಕ ಮಾಟಗಾರನನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕುಮಾರಿಯ ಲಿಂಗ ಬದಲಾಯಿಸಲು ಧಾರ್ಮಿಕ ಕ್ರಿಯೆ ನಡೆಸುವ ನೆಪದಲ್ಲಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆಸಿ ಕತ್ತು ಹಿಸುಕಿ ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಅರಣ್ಯ ಪ್ರದೇಶದಲ್ಲಿ ಗೋಮತಿ ನದಿಯ ದಡದಲ್ಲಿ ಶವವನ್ನು ಎಸೆದ ನಂತರ ರಾಮ್ ನಿವಾಸ್ ಪರಾರಿಯಾಗಿದ್ದಾನೆ ಎಂದು ಎಎಸ್ಪಿ ತಿಳಿಸಿದ್ದಾರೆ. ಸಾಗರ್ ಮನೆ ಬಳಿ ಪೊಲೀಸರು 11 ಮೂಳೆಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಪರ್ವೀಂದರ್ ಕುಮಾರ್ ನೀಡಿರುವ ದೂರಿನಲ್ಲಿ ಪ್ರೀತಿ ಸಾಗರ್, ಆಕೆಯ ತಾಯಿ ಊರ್ಮಿಳಾ ಹಾಗೂ ರಾಮ್ ನಿವಾಸ್ ತನ್ನ ತಂಗಿಯನ್ನು ಕೊಂದಿರುವುದಾಗಿ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ), 120-ಬಿ (ಕ್ರಿಮಿನಲ್ ಪಿತೂರಿ), ಮತ್ತು 201 (ಅಪರಾಧದ ನಂತರ ದೇಹವನ್ನು ಮರೆಮಾಚುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಕ್ಸ್ ನಂತರ ಚೂರಿ ಇರಿದು ಇಬ್ಬರು ತೃತೀಯಲಿಂಗಿಗಳ ಭೀಕರ ಕೊಲೆ!
ಈ ಘಟನೆಯು ಇಂದು ಭಾರತದಲ್ಲಿ ಸಲಿಂಗ ದಂಪತಿಗಳ ದುರವಸ್ಥೆಯನ್ನು ಒತ್ತಿಹೇಳುತ್ತದೆ ಇಂಥ ಪಕ್ಷಪಾತವನ್ನು ಹೋಗಲಾಡಿಸಲು ಸಂಘಟಿತ ಸಾಮಾಜಿಕ ಒತ್ತಡ ಮತ್ತು ಅಂತಹ ಅವೈಜ್ಞಾನಿಕ ಆಚರಣೆಗಳ ವಿರುದ್ಧ ನಿರಂತರ ಪೊಲೀಸ್ ಕ್ರಮ ಮಾತ್ರ ಈ ಹಾನಿಯನ್ನು ತಗ್ಗಿಸಬಹುದು.