ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್, ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅನ್ವಯ್ ಈ ಹಿಂದೆ ಶ್ರೀಲಂಕಾ ಪ್ರವಾಸದಲ್ಲಿ ಮಿಂಚಿದ್ದರೆ, ಆರ್ಯವೀರ್‌ಗೆ ಇದು ಮೊದಲ ಆಯ್ಕೆಯಾಗಿದೆ.

ನವದೆಹಲಿ: ಭಾರತ ಕ್ರಿಕೆಟ್‌ನಲ್ಲಿ ದ್ರಾವಿಡ್ ಮತ್ತು ಸೆಹ್ವಾಗ್ ಹೆಸರು ಮತ್ತೊಮ್ಮೆ ರಾರಾಜಿಸಲಿದೆ! ಆದರೆ ಈ ಬಾರಿ ಆಡಲಿಳಿಯುತ್ತಿರುವುದು ದಿಗ್ಗಜರಲ್ಲ, ಅವರ ಮಕ್ಕಳು. ಹೌದು, ಟೀಂ ಇಂಡಿಯಾದ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ ಸರಣಿ

ಈ ಸರಣಿಯು ಸೆಪ್ಟೆಂಬರ್ 18ರಂದು ಆರಂಭವಾಗಲಿದೆ. ಬಿಸಿಸಿಐ ಆಯ್ಕೆ ಸಮಿತಿಯು ಮೂರು ಏಕದಿನ ಪಂದ್ಯಗಳು ಮತ್ತು ಎರಡು ಮಲ್ಟಿ-ಡೇ (ದೀರ್ಘ ಮಾದರಿ) ಪಂದ್ಯಗಳಿಗಾಗಿ ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ. ಏಕದಿನ ತಂಡವನ್ನು ಲಕ್ಷ್ಯ ರಾಯ್ ಚಂದಾನಿ ಮತ್ತು ದೀರ್ಘ ಮಾದರಿಯ ಪಂದ್ಯಗಳ ತಂಡವನ್ನು ಯಶ್‌ವರ್ಧನ್ ಸಿಂಗ್ ಚೌಹಾಣ್ ಮುನ್ನಡೆಸಲಿದ್ದಾರೆ.

ಅನ್ವಯ್ ಮತ್ತು ಆರ್ಯವೀರ್ ಇಬ್ಬರೂ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. 18 ವರ್ಷದ ಆರ್ಯವೀರ್ ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಅವರು ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇನ್ನು, ರಾಹುಲ್ ದ್ರಾವಿಡ್ ಅವರ ಕಿರಿಯ ಮಗನಾದ 17 ವರ್ಷದ ಅನ್ವಯ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಅಂಡರ್-19 ತಂಡದಲ್ಲಿ ಅನ್ವಯ್ ಕೂಡ ಇದ್ದರು. ಅಲ್ಲಿ ಆಡಿದ ಎರಡು ಏಕದಿನ ಪಂದ್ಯಗಳಲ್ಲಿ ಅವರು ಕ್ರಮವಾಗಿ 14 ಮತ್ತು 87 ರನ್ ಗಳಿಸಿ ಗಮನ ಸೆಳೆದಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳು ಮತ್ತು ಒಂದು ಮಲ್ಟಿ-ಡೇ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಎರಡನೇ ಮಲ್ಟಿ-ಡೇ ಪಂದ್ಯ ಅಹಮದಾಬಾದ್‌ನಲ್ಲಿ ಆಯೋಜನೆಯಾಗಿದೆ.

ತಂಡದ ವಿವರ:

ಅಂಡರ್-19 ಏಕದಿನ ತಂಡ: ಲಕ್ಷ್ಯ ರಾಚಂದಾನಿ (ನಾಯಕ), ಯಶ್‌ಬರ್ಧನ್ ಚೌಹಾಣ್ (ಉಪನಾಯಕ), ರಜತ್ ಭಾಗೇಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶಾವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ್, ಕಾವ್ಯ ಪಟೇಲ್.