ಭಾರತೀಯ ಕ್ರಿಕೆಟಿಗ ದೇವದತ್ ಪಡಿಕ್ಕಲ್, ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಕ್ರೀಡಾಪಟುಗಳು ಪ್ರವಾಸದ ವೇಳೆ ತಮ್ಮದೇ ಹಾಸಿಗೆ ಮತ್ತು ದಿಂಬುಗಳನ್ನು ಏಕೆ ಕೊಂಡೊಯ್ಯುತ್ತಾರೆ ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರು (ಆ.3): ವೃತ್ತಿಪರ ಕ್ರೀಡಾಪಟುಗಳ ನಿರ್ವಹಣೆ ಮತ್ತು ದೈಹಿಕ ಸಾಮರ್ಥ್ಯ ಮರುಗಳಿಕೆಯಲ್ಲಿ (ರಿಕವರಿ) 'ಉತ್ತಮ ನಿದ್ರೆ' ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಭಾರತೀಯ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಬಹಿರಂಗಪಡಿಸಿದ್ದಾರೆ. ಜೊತೆಗೆ ತಮ್ಮ ಸಹ ಆಟಗಾರ ಕೆ.ಎಲ್. ರಾಹುಲ್ ಸೇರಿದಂತೆ ಪ್ರಮುಖ ಅಥ್ಲೀಟ್ಗಳು ಪ್ರವಾಸದ ವೇಳೆ ತಮ್ಮದೇ ಆದ ಹಾಸಿಗೆ, ತಲೆದಿಂಬು ಏಕೆ ಕೊಂಡೊಯ್ಯುತ್ತಾರೆ ಎನ್ನುವ ಕುತೂಹಲಕಾರಿ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
'ಹ್ಯೂಮನ್ಸ್ ಆಫ್ ಬಾಂಬೆ'ಗೆ (Humans of Bombay) ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಡಿಕ್ಕಲ್, ಪ್ರಮುಖ ಕ್ರೀಡಾಪಟುಗಳು ತಾವು ಯಾವುದೇ ದೇಶ ಅಥವಾ ನಗರದಲ್ಲಿ ಪಂದ್ಯವನ್ನಾಡಲಿ, ಸಮಾನ ಮತ್ತು ಪೂರ್ಣ ಪ್ರಮಾಣದ ನಿದ್ರೆ ಪಡೆಯಲು ತಮ್ಮದೇ ಸ್ವಂತ ಹಾಸಿಗೆ (Mattress), ದಿಂಬುಗಳು (Pillows) ಮತ್ತು ಇತರ ಪರಿಕರಗಳನ್ನು ಕೊಂಡೊಯ್ಯುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದಿದ್ದಾರೆ. ಆಧುನಿಕ ಕ್ರೀಡಾಪಟುಗಳು ಅನುಸರಿಸುವ ಅತ್ಯಂತ ಶಿಸ್ತಿನ ರಿಕವರಿ ದಿನಚರಿ ಇದು ಎಂದಿದ್ದಾರೆ.
ಕೆಎಲ್ ರಾಹುಲ್ ಹಾಸಿಗೆಯನ್ನೇ ಕೊಂಡೊಯ್ಯುತ್ತಾರೆ!
ಕ್ರಿಕೆಟ್ ಪ್ರವಾಸಗಳ ಸಮಯದಲ್ಲಿ ಕೆ.ಎಲ್. ರಾಹುಲ್ ಅವರು ತಮ್ಮ ಸ್ವಂತ ಹಾಸಿಗೆಯನ್ನೇ ಜೊತೆಯಲ್ಲಿ ಕೊಂಡೊಯ್ಯುವುದನ್ನು ತಾವು ಖುದ್ದಾಗಿ ನೋಡಿರುವುದಾಗಿ ಪಡಿಕ್ಕಲ್ ಹಂಚಿಕೊಂಡಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿರುವ ಹೋಟೆಲ್ಗಳಲ್ಲಿ ಉಳಿದುಕೊಂಡರೂ ನಿರಂತರ ಕಂಫರ್ಟ್ ಹಾಗೂ ಪರಿಚಿತ ವಾತಾವರಣಕ್ಕಾಗಿ ಹಲವು ಕ್ರೀಡಾಪಟುಗಳು ತಮ್ಮ ಸ್ವಂತ ದಿಂಬುಗಳನ್ನು ಹೊತ್ತೊಯ್ಯುತ್ತಾರೆ ಎಂದು ಅವರು ಸೇರಿಸಿದ್ದಾರೆ. ಕ್ರೀಡಾಪಟುಗಳ ದೀರ್ಘಾವಧಿಯ ಅತ್ಯುತ್ತಮ ನಿರ್ವಹಣೆ ಹಾಗೂ ಸಿದ್ಧತೆಗೆ ನಿದ್ರೆಯ ಗುಣಮಟ್ಟ ಪ್ರಮುಖ ಅಂಶವಾಗಿರುವುದರಿಂದ, ಈ ರೀತಿಯ ಅಭ್ಯಾಸಗಳು ವೃತ್ತಿಪರ ಅಥ್ಲೀಟ್ಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ಪಡಿಕ್ಕಲ್ ವಿವರಿಸಿದ್ದಾರೆ.
ಈ ಅಭ್ಯಾಸಗಳ ಹಿಂದಿನ ಮಹತ್ವವನ್ನು ವಿವರಿಸಿದ ಅವರು, ಕ್ರೀಡಾಪಟುಗಳು ತಮ್ಮ ದಿನದ ಬಹುಪಾಲು ಸಮಯವನ್ನು ನಿದ್ರೆಯಲ್ಲೇ ಕಳೆಯುತ್ತಾರೆ. ಹೀಗಾಗಿ ವೃತ್ತಿಪರ ಕ್ರೀಡೆಯಲ್ಲಿ ದೈಹಿಕ ಜಡತ್ವ ಮತ್ತು ಶ್ರಮದಿಂದ ಚೇತರಿಸಿಕೊಳ್ಳುವುದು (Recovery) ಅತ್ಯಂತ ಮುಖ್ಯವಾದ ಭಾಗವಾಗಿದೆ ಎಂದಿದ್ದಾರೆ. ಸೂಕ್ತ ನಿದ್ರೆಯು ಕ್ರೀಡಾಪಟುವಿಗೆ ದೈಹಿಕ ಶ್ರಮದಿಂದ ಹೊರಬರಲು ಹಾಗೂ ಕಠಿಣ ತರಬೇತಿ ಮತ್ತು ಪಂದ್ಯಗಳಿಗೆ ದೇಹವನ್ನು ಸಿದ್ಧಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ, ಫಿಟ್ನೆಸ್ ತರಬೇತಿ ಮತ್ತು ಪೌಷ್ಟಿಕ ಆಹಾರಕ್ಕೆ (Nutrition) ನೀಡುವಷ್ಟೇ ಪ್ರಾಮುಖ್ಯತೆಯನ್ನು ಅನೇಕ ಆಟಗಾರರು ತಮ್ಮ ನಿದ್ರೆಯ ವಾತಾವರಣಕ್ಕೂ ನೀಡುತ್ತಿದ್ದಾರೆ.
ಇದನ್ನೂ ಓದಿ:25 ಸಿಕ್ಸರ್, 14 ಬೌಂಡರಿ, 233 ರನ್! ಸಿಡಿಲಬ್ಬರದ ದ್ವಿಶತಕ ಸಿಡಿಸಿ ಆಯ್ಕೆಗಾರರಿಗೆ 'ಸಿಗ್ನಲ್' ಕೊಟ್ಟ ಅಭಿಷೇಕ್ ಶರ್ಮಾ
ವಿಜ್ಞಾನ ಏನು ಹೇಳುತ್ತದೆ?
ಕ್ರೀಡಾಪಟುಗಳ ನಿರ್ವಹಣೆ ಹೆಚ್ಚಿಸಲು, ರಿಯಾಕ್ಷನ್ ಟೈಮ್ (ತಕ್ಷಣದ ಸ್ಪಂದನೆ), ಸರಿಯಾದ ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ಗಾಯಗಳನ್ನು ತಡೆಗಟ್ಟಲು ಉತ್ತಮ ನಿದ್ರೆ ಪ್ರಮುಖ ಅಂಶ ಎಂದು ಕ್ರೀಡಾ ವಿಜ್ಞಾನಿಗಳು (Sports Scientists) ಈಗಾಗಲೇ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ನಿರಂತರ ಪ್ರಯಾಣ ಮತ್ತು ವಿಭಿನ್ನ ಟೈಮ್ ಝೋನ್ಗಳಲ್ಲಿ ಪಂದ್ಯಗಳನ್ನಾಡುವ ವೇಳೆ ಎದುರಾಗುವ ಆಯಾಸವನ್ನು ಕಡಿಮೆ ಮಾಡಲು ಹಾಗೂ ಮಾನಸಿಕ ಗಮನ ಹೆಚ್ಚಿಸಲು ನಿರಂತರ ನಿದ್ರೆಯ ದಿನಚರಿ ಸಹಕಾರಿಯಾಗಿದೆ. ಅಪರಿಚಿತ ಹೋಟೆಲ್ ಹಾಸಿಗೆಗಳು ಮತ್ತು ಬದಲಾಗುವ ವಾತಾವರಣದಿಂದ ಉಂಟಾಗುವ ತೊಂದರೆಗಳನ್ನು ತಡೆಯಲು, ಅನೇಕ ಎಲೈಟ್ ಅಥ್ಲೀಟ್ಗಳು ಪ್ರಯಾಣದ ವೇಳೆಯೂ ತಮಗೆ ಅಭ್ಯಾಸವಿರುವ ನಿದ್ರೆಯ ವಾತಾವರಣವನ್ನೇ ಮರುಸೃಷ್ಟಿಸಿಕೊಳ್ಳಲು ಬಯಸುತ್ತಾರೆ.
ನಿರಂತರ ಪ್ರಯಾಣ ಮತ್ತು ಬದಲಾದ ಕ್ರಿಕೆಟ್ ಶೈಲಿ
ವಿಶೇಷವಾಗಿ ಅಂತರರಾಷ್ಟ್ರೀಯ ಕ್ರಿಕೆಟಿಗರು ದ್ವಿಪಕ್ಷೀಯ ಸರಣಿಗಳು ಮತ್ತು ಫ್ರಾಂಚೈಸಿ ಟೂರ್ನಿಗಳಿಗಾಗಿ ವರ್ಷದಲ್ಲಿ ಹಲವು ತಿಂಗಳುಗಳನ್ನು ಮನೆಯಿಂದ ದೂರವಿದ್ದು, ಬೇರೆ ಬೇರೆ ದೇಶಗಳಲ್ಲಿ ಕಳೆಯುತ್ತಾರೆ. ಸುದೀರ್ಘ ಪ್ರಯಾಣದ ವೇಳಾಪಟ್ಟಿ, ಬದಲಾಗುವ ಹವಾಮಾನ ಮತ್ತು ಸಾಲು ಸಾಲು ಪಂದ್ಯಗಳ ನಡುವೆ ಇಡೀ ಸೀಸನ್ನಲ್ಲಿ ಅತ್ಯುತ್ತಮ ನಿರ್ವಗಣೆ ಕಾಯ್ದುಕೊಳ್ಳಲು 'ರಿಕವರಿ' ಅತ್ಯಗತ್ಯವಾಗಿದೆ. ಹೀಗಾಗಿಯೇ ತಂಡಗಳು ಆಟಗಾರರ ನಿದ್ರೆ, ವರ್ಕ್ಲೋಡ್ ನಿರ್ವಹಣೆ ಮತ್ತು ಒಟ್ಟಾರೆ ಕ್ಷೇಮವನ್ನು ಮೇಲ್ವಿಚಾರಣೆ ಮಾಡಲು ಕ್ರೀಡಾ ವಿಜ್ಞಾನ ತಜ್ಞರ (Sports Science Experts) ನೇಮಕವನ್ನು ಹೆಚ್ಚಿಸಿವೆ.


