ದುಲೀಪ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಮಾರಕ ಬೌಲಿಂಗ್ ದಾಳಿಗೆ ಸೆಂಟ್ರಲ್ ಜೋನ್ ತತ್ತರಿಸಿದೆ; ಪಂದ್ಯದ ನಡುವೆ ಮುಕೇಶ್ ಅವರು ಹಿರಿಯ ವೇಗಿ ಶಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕ್ಷಣ ವೈರಲ್ ಆಗಿದೆ.
ದುಲೀಪ್ ಟ್ರೋಫಿ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈಸ್ಟ್ ಜೋನ್ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಅವರ ಬೆಂಕಿ ಉಂಡೆಗಳಂತಹ ಬೌಲಿಂಗ್ಗೆ ಸೆಂಟ್ರಲ್ ಜೋನ್ ಬ್ಯಾಟರ್ಗಳು ತತ್ತರಿಸಿ ಹೋಗಿದ್ದಾರೆ. ಈ ಪಂದ್ಯ ಕೇವಲ ವಿಕೆಟ್ ಬೇಟೆಗೆ ಮಾತ್ರವಲ್ಲದೆ ಮೈದಾನದಲ್ಲಿ ನಡೆದ ಒಂದು ಅಪರೂಪದ ಗೌರವದ ಕ್ಷಣಕ್ಕೆ ಸಾಕ್ಷಿಯಾಗಿದೆ.
ಈಸ್ಟ್ ಜೋನ್ ಪರ ಬೌಲಿಂಗ್ ದಾಳಿ ಸಂಘಟಿಸಿದ ಶಮಿ ಮತ್ತು ಮುಕೇಶ್ ಜೋಡಿ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. ಮೊದಲ ಇನ್ಸಿಂಗ್ಸ್ನಲ್ಲಿ ಸೆಂಟ್ರಲ್ ಜೋನ್ ತಂಡವನ್ನು 266 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಈ ಜೋಡಿ, ಎರಡನೇ ಇನಿಂಗ್ಸ್ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಇಡೀ ಪಂದ್ಯದಲ್ಲಿ ಇವರಿಬ್ಬರೇ ಸೇರಿ ಒಟ್ಟು 12 ವಿಕೆಟ್ಗಳನ್ನು ಕಬಳಿಸಿ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು.
ಶಮಿ ಮೇಲೆ ಗೌರವ
ಪಂದ್ಯದ ಅತ್ಯಂತ ಸುಂದರ ಕ್ಷಣವೆಂದರೆ ಅದು ಮುಕೇಶ್ ಕುಮಾರ್ ಅವರು ಹಿರಿಯ ಬೌಲರ್ ಶಮಿ ಅವರಿಗೆ ತೋರಿದ ಗೌರವ. ಸೆಂಟ್ರಲ್ ಜೋನ್ ನಾಯಕ ರಜತ್ ಪಾಟಿದಾರ್ ಅವರನ್ನು ಎರಡೂ ಇನಿಂಗ್ಸ್ಗಳಲ್ಲಿ ಮುಕೇಶ್ ಕ್ಲೀನ್ ಬೌಲ್ಡ್ ಮಾಡಿದರು. ಎರಡನೇ ಇನಿಂಗ್ಸ್ನಲ್ಲಿ ಪಾಟಿದಾರ್ ವಿಕೆಟ್ ಉರುಳಿಸಿದ ತಕ್ಷಣ, ಮುಕೇಶ್ ಸಂಭ್ರಮಿಸುವ ಬದಲು ನೇರವಾಗಿ ಶಮಿ ಅವರ ಬಳಿ ಹೋಗಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರೀಡಾಭಿಮಾನಿಗಳ ಮನ ಗೆದ್ದಿದೆ.
ಮುಕೇಶ್ ಕುಮಾರ್ ಎರಡನೇ ಇನಿಂಗ್ಸ್ನಲ್ಲಿ 12 ಓವರ್ಗಳಲ್ಲಿ ಕೇವಲ 44 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಮೊಹಮ್ಮದ್ ಶಮಿ ತಮ್ಮ ಅನುಭವವನ್ನು ಧಾರೆ ಎರೆದು 3 ವಿಕೆಟ್ ಕಿತ್ತು ಸೆಂಟ್ರಲ್ ಜೋನ್ ಬೆನ್ನೆಲುಬು ಮುರಿದರು. ಉಳಿದಂತೆ ಅಭಿಜೀತ್ ಸರ್ಕಾರ್, ಅನುಕೂಲ್ ರಾಯ್ ಮತ್ತು ಕುನೈನ್ ಖುರೇಶಿ ತಲಾ ಒಂದು ವಿಕೆಟ್ ಹಂಚಿಕೊಂಡರು. ವೇಗಿಗಳ ಆರ್ಭಟಕ್ಕೆ ಸಿಲುಕಿದ ಸೆಂಟ್ರಲ್ ಜೋನ್ ಎರಡನೇ ಇನಿಂಗ್ಸ್ನಲ್ಲಿ ಕೇವಲ 158 ರನ್ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 95 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಮನ್ ಮೋಖಾಡೆ (41 ರನ್) ಸ್ವಲ್ಪ ಚೇತರಿಕೆ ನೀಡಿದರು. ಕೊನೆಯಲ್ಲಿ ಹರ್ಷ್ ದುಬೆ ಮತ್ತು ಅರ್ಷದ್ ಖಾನ್ ಅವರ ಹೋರಾಟದಿಂದ ತಂಡ 150ರ ಗಡಿ ದಾಟಿತು.
ಕ್ರೀಡಾಂಗಣದಲ್ಲಿ ಸ್ಪರ್ಧೆಯ ಜೊತೆಗೆ ಹಿರಿಯ ಆಟಗಾರರಿಗೆ ನೀಡುವ ಗೌರವ ಭಾರತೀಯ ಕ್ರಿಕೆಟ್ನ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಶಮಿ ಮತ್ತು ಮುಕೇಶ್ ಅವರ ಈ ಮೈತ್ರಿ ಮುಂಬರುವ ಅಂತರಾಷ್ಟ್ರೀಯ ಪಂದ್ಯಗಳಿಗೂ ಭಾರತ ತಂಡಕ್ಕೆ ಹೊಸ ಭರವಸೆ ನೀಡಿದೆ.


