ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ.ಎಸ್. ಧೋನಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂಬ ವದಂತಿಯನ್ನು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಳ್ಳಿಹಾಕಿದ್ದಾರೆ. ಇದು ಶುದ್ಧ ಸುಳ್ಳು ಎಂದಿರುವ ಅವರು, ಧೋನಿ ಮತ್ತು ಮ್ಯಾನೇಜ್‌ಮೆಂಟ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಧೋನಿ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಚೆನ್ನೈ: ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮಗೆ ಶೇ.25ರಷ್ಟು ಪಾಲು ಬೇಕು ಅಂತ ಮಾಜಿ ನಾಯಕ ಎಂ.ಎಸ್. ಧೋನಿ ಕೇಳಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ, ಈ ಸುದ್ದಿಯನ್ನು ತಂಡದ ಮ್ಯಾನೇಜ್‌ಮೆಂಟ್ ತಳ್ಳಿಹಾಕಿದೆ. ಇದೆಲ್ಲಾ ಶುದ್ಧ ಸುಳ್ಳು ಅಂತ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ.

ಧೋನಿ-ಸಿಎಸ್‌ಕೆ ಫ್ರಾಂಚೈಸಿ ನಡುವೆ ಮನಸ್ತಾಪ?

ಧೋನಿ ಸಿಎಸ್‌ಕೆಯಲ್ಲಿ ದೊಡ್ಡ ಮಟ್ಟದ ಶೇರು ಕೇಳಿದ್ದಾರೆ, ಆದರೆ ಮ್ಯಾನೇಜ್‌ಮೆಂಟ್ ಒಪ್ಪಿಲ್ಲ. ಇದರಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿದೆ ಅಂತ ಕಳೆದ ಕೆಲವು ದಿನಗಳಿಂದ ವರದಿಗಳು ಬಂದಿದ್ದವು. ಧೋನಿ ಶೇ.25ರಷ್ಟು ಪಾಲು ಕೇಳಿದಾಗ, ಮ್ಯಾನೇಜ್‌ಮೆಂಟ್ ಕೇವಲ ಶೇ.3ರಷ್ಟು ನೀಡುವುದಾಗಿ ಹೇಳಿತ್ತಂತೆ. ನಂತರ ಧೋನಿ ತಮ್ಮ ಬೇಡಿಕೆಯನ್ನು ಶೇ.18ಕ್ಕೆ ಇಳಿಸಿದರೂ ಮ್ಯಾನೇಜ್‌ಮೆಂಟ್ ಒಪ್ಪಲಿಲ್ಲ ಅಂತ ಸುದ್ದಿಯಾಗಿತ್ತು.

ಆದರೆ, ಈ ಎಲ್ಲಾ ವದಂತಿಗಳು ಸಂಪೂರ್ಣ ಸುಳ್ಳು ಎಂದು ಕಾಶಿ ವಿಶ್ವನಾಥನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಧೋನಿ ಮತ್ತು ಸಿಎಸ್‌ಕೆ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಗಾಳಿ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ. ಗಾಯದ ಕಾರಣ 2026ರ ಐಪಿಎಲ್ ಸೀಸನ್‌ನಿಂದ ಹೊರಗುಳಿದಿದ್ದ ಧೋನಿ, ಮುಂದಿನ ಸೀಸನ್ ಆಡುತ್ತಾರಾ ಎಂಬ ಬಗ್ಗೆಯೂ ಸಿಇಒ ಮಾಹಿತಿ ನೀಡಿದ್ದಾರೆ.

ಧೋನಿ ಭವಿಷ್ಯದ ಬಗ್ಗೆ ಫ್ರಾಂಚೈಸಿ ಮಾತು:

ಧೋನಿ ಇನ್ನೂ ನಿವೃತ್ತಿ ಘೋಷಿಸಿಲ್ಲ. 2027ರ ಐಪಿಎಲ್‌ನಲ್ಲಿ ಆಡುವುದಿಲ್ಲ ಅಂತ ನಮ್ಮ ಬಳಿ ಹೇಳಿಲ್ಲ ಎಂದು ಅವರು ಹೇಳಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಧೋನಿ ಮತ್ತೆ ಹಳದಿ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ನಾವು ಇಲ್ಲಿಯವರೆಗೂ ಧೋನಿಯವರ ಭವಿಷ್ಯದ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ. ಧೋನಿಯವರೇ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಧೋನಿ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವದನ್ನು ಗೌರವಿಸುತ್ತೇವೆ ಎಂದು ಕಾಶಿ ಹೇಳಿದ್ದಾರೆ.