'ಅವಳು ಸುತ್ತಲೂ ಇರುವಾಗಲೆಲ್ಲಾ ನನ್ನ ಕಣ್ಣುಗಳು ಅವಳಿಂದ ಬೇರೆಡೆ ಸರಿಯೋದಿಲ್ಲ. 'ನಾನು ಯಾರನ್ನೂ ದಿಟ್ಟಿಸಿ ನೋಡುವುದಿಲ್ಲ, ಆದರೆ ಅವಳು ತುಂಬಾ ಸುಂದರವಾಗಿದ್ದಾಳೆ, ಒಮ್ಮೆ ಅವಳನ್ನು ನೋಡಿದರೆ, ನೀವು ಅವಳನ್ನು ಮತ್ತೆಮತ್ತೆ ಹುಚ್ಚನಂತೆ ನೋಡುತ್ತಲೇ ಇರುತ್ತೀರಿ'.. ಯಾರವಳು? ಅಕ್ಷಯ್ ಖನ್ನಾ ಮನದನ್ನೆ?

ಅಕ್ಷಯ್ ಖನ್ನಾಗೆ ಇವರಂದ್ರೆ ಪಂಚಪ್ರಾಣವಂತೆ

ಮುಂಬೈ: ಪ್ರಪಂಚದಾದ್ಯಂತ ಬಾಕ್ಸಾಫೀಸ್‌ನಲ್ಲಿ (Box office) ಭಾರೀ ಅಬ್ಬರಿಸುತ್ತಿರುವ 'ಧುರಂಧರ್' ಸಿನಿಮಾದಿಂದಾಗಿ (Dhurandhar movie) ಬಾಲಿವುಡ್ ನಟ ಅಕ್ಷಯ್ ಖನ್ನಾ (Akshaye Khanna) ಈಗ ಮತ್ತೆ ಫೇಮಸ್ ಆಗಿದ್ದಾರೆ. ಖಳನಟ ಆದರೂ ಕೂಡ ಖನ್ನಾ ಹೀರೋಗಿಂತಲೂ ಹೆಚ್ಚಾಗಿ ಮಿಂಚುತ್ತಿದ್ದಾರೆ. ಕಾರಣ, ಅವರ ಪಾತ್ರ ಹಾಗೂ ಪಾತ್ರಕ್ಕೆ ತಕ್ಕ ಅಪ್ಪಟ ಅಭಿನಯ! ಇಂಥ ನಟ ಅಕ್ಷಯ್ ಖನ್ನಾ ಇದೀಗ ಒಬ್ಬರು ಸ್ಟಾರ್ ನಟಿ ಅಂದ್ರೆ ತಮಗೆ ಪಂಚಪ್ರಾಣ ಅಂತ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ.

ರಣವೀ‌ರ್ ಸಿಂಗ್ ಮುಖ್ಯ ಭೂಮಿಕೆ ನಿಭಾಯಿಸಿದ ಧುರಂಧರ್ ಚಿತ್ರದಲ್ಲಿ ಅಕ್ಷಯ್ ಖನ್ನಾ ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರವನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಅಕ್ಷಯ್ ಖನ್ನಾ ಅವರಿಗೀಗ 50 ವರ್ಷ ವಯಸ್ಸು. ಆದರೂ ಕೂಡ ಇನ್ನೂ ಅವರು ಮದುವೆ ಆಗಿಲ್ಲ. ಅಕ್ಷಯ್ ಖನ್ನಾ ಅನೇಕ ನಟಿಯರೊಂದಿಗೆ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆ ಪಟ್ಟಿ ದೊಡ್ದದಿದೆ.. ಆದರೆ, ವಿಶ್ವ ಸುಂದರಿ ಹಾಗೂ ಒಂದು ಕಾಲದ ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯ ರೈ ಮೇಲಿನ ತಮ್ಮ ಪ್ರೀತಿಯನ್ನು ಅಕ್ಷಯ್ ಖನ್ನಾ ಬಹಿರಂಗವಾಗಿ ಹೇಳಿಕೊಂಡಿದ್ದರು. ಸಲ್ಮಾನ್ ಮತ್ತು ಐಶ್ವರ್ಯ ರೈ ಬಚ್ಚನ್ ನಡುವಿನ ಬಿರುಕುಗೆ ಅಕ್ಷಯ್ ಖನ್ನಾ ಪ್ರೀತಿಯೇ ಕಾರಣವಾಗಿರಬಹುದಾ ಅಂತ ಹಲವರು ಕೇಳಿದ್ದರು.

ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಶೋನಲ್ಲಿ, ಅಕ್ಷಯ್ ಖನ್ನಾ ಅವರು ನಟಿ ಐಶ್ವರ್ಯಾ ರೈ ಅವರನ್ನು ಹೊಗಳುತ್ತಾ, 'ಅವಳು ಸುತ್ತಲೂ ಇರುವಾಗಲೆಲ್ಲಾ ನನ್ನ ಕಣ್ಣುಗಳು ಅವಳಿಂದ ಬೇರೆಡೆ ಸರಿಯೋದಿಲ್ಲ. ಇದು ಕಲೆವು ಪುರುಷರಿಗೆ ಮುಜುಗರ ಉಂಟು ಮಾಡಬಹುದು' ಎಂದು ಹೇಳಿದ್ದರು. 'ನಾನು ಯಾರನ್ನೂ ದಿಟ್ಟಿಸಿ ನೋಡುವುದಿಲ್ಲ, ಆದರೆ ಅವಳು ತುಂಬಾ ಸುಂದರವಾಗಿದ್ದಾಳೆ, ಒಮ್ಮೆ ಅವಳನ್ನು ನೋಡಿದರೆ, ನೀವು ಅವಳನ್ನು ಮತ್ತೆಮತ್ತೆ ಹುಚ್ಚನಂತೆ ನೋಡುತ್ತಲೇ ಇರುತ್ತೀರಿ' ಎಂದು ಅಕ್ಷಯ್ ಖನ್ನಾ ಹೇಳಿದರು. ಅಷ್ಟೇ ಅಲ್ಲ "ಬಾಲಿವುಡ್‌ ಅತ್ಯಂತ ಸೆಕ್ಸಿಯೆಸ್ಟ್ ನಟಿ ಯಾರು"? ಎಂದು ಕೇಳಿದಾಗ, ಅವರು 'ಐಶ್ವರ್ಯಾ ರೈ' ಎಂದು ಹೇಳಿ ರೊಮ್ಯಾಂಟಿಕ್ ಮೂಡ್‌ಗೇ ಹೋಗಿಬಿಟ್ಟರು.

ಅಕ್ಷಯ್ ಖನ್ನಾ ಮತ್ತು ಕರಿಷ್ಮಾ ಕಪೂರ್ ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆಯೂ ಒಮ್ಮೆ ಎರಡೂ ಫ್ಯಾಮಿಲಿಗಳಲ್ಲಿ ಅಂದು ಚರ್ಚೆ ನಡೆಸಲಾಗಿತ್ತು. ಆದರೆ ಕರಿಷ್ಮಾ ತಾಯಿ ಬಬಿತಾ ಈ ಸಂಬಂಧವನ್ನು ಒಪ್ಪಿಕೊಳ್ಳಲು ಸಂಪೂರ್ಣವಾಗಿ ಇಷ್ಟಪಡಲಿಲ್ಲ. ಹೀಗಾಗಿ ಆ ಮದುವೆ ನಡೆಯಲಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಅಕ್ಷಯ್ ಯಾಕೆ ಮದುವೆ ಆಗಲಿಲ್ಲ?

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಕ್ಷಯ್ ಖನ್ನಾ ತಮ್ಮ ಮದುವೆ ಬಗ್ಗೆ ಹೀಗೆ ಹೇಳಿದ್ದರು.. 'ನನಗೆ ಜವಾಬ್ದಾರಿಗಳು ಬೇಕಿಲ್ಲ. ನಾನು ಯಾವತ್ತೂ ಒಂಟಿಯಾಗಿ ಇರಲು ಇಷ್ಟಪಡುತ್ತೇನೆ. ಬೇರೆ ಯಾರದೋ ಬಗ್ಗೆ ನಾನು ಕಾಳಜಿ ಮಾಡಬೇಕಾಗಿಲ್ಲ. ನನ್ನ ಬಗ್ಗೆ ನಾನು ಚಿಂತೆ ಮಾಡಿದರೆ ಸಾಕು, ಇನ್ಯಾರದೋ ಚಿಂತೆ ನನಗೆ ಬೇಕಾಗಿಲ್ಲ.. ನನಗೆ ಈ ಅದ್ಭುತ ಜೀವನ ಸಿಕ್ಕಿದೆ. ಅದನ್ನು ನಾನು ಯಾಕೆ ಹಾಳು ಮಾಡಿಕೊಳ್ಳಲಿ?' ಎಂದಿದ್ದರು

ಅಕ್ಷಯ್ ಖನ್ನಾ ಆಶಯ ಏನು?

'ನಾನು ಮದುವೆ ಆಗುವುದಿಲ್ಲ.. ಮದುವೆಗೆ ಸೂಕ್ತವಾದ ವ್ಯಕ್ತಿ ನಾನಲ್ಲ. ಮದುವೆ ಎಂಬುದು ಒಂದು ಬದ್ಧತೆ. ಅಲ್ಲದೇ ಅದರಿಂದ ಜೀವನದಲ್ಲಿ ಊಹಿಸಲೂ ಆಗದಷ್ಟು ದೊಡ್ಡ ಬದಲಾವಣೆ ಆಗುತ್ತದೆ. ನಿಮ್ಮ ಬದುಕನ್ನು ಬೇರೆಯವರ ಜೊತೆ ಹಂಚಿಕೊಂಡಾಗ ನಿಮಗೆ ನಿಮ್ಮ ಲೈಫ್‌ ಮೇಲೆ ಪೂರ್ತಿ ನಿಯಂತ್ರಣ ಇರುವುದಿಲ್ಲ. ನನಗೆ ನನ್ನ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣ ಬೇಕು.. ಅದಕ್ಕಾಗಿ ನನಗೆ ಮದುವೆ ಬೇಡ' ಎಂದು ಅಕ್ಷಯ್ ಖನ್ನಾ ಹೇಳಿದ್ದರು.