10ವರ್ಷದ ಬಳಿಕ ವಿಜಯ್ ಮೊದಲ ಸಂದರ್ಶನ; ಇಷ್ಟುವರ್ಷದ ಮೌನ, ಚರ್ಚ್, ದೇವಸ್ಥಾನದ ಬಗ್ಗೆ ದಳಪತಿ ಮಾತು
ತಮಿಳು ನಟ ವಿಜಯ್ 10 ವರ್ಷದ ಬಳಿಕ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಬೀಸ್ಟ್ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ರಾಜಕೀಯ ಎಂಟ್ರಿ ಮತ್ತು 10 ವರ್ಷಗಳಿಂದ ಸಂದರ್ಶನಗಳಿಂದ ದೂರ ಇದ್ದ ಬಗ್ಗೆ ವಿಜಯ್ ಮಾತನಾಡಿದ್ದಾರೆ.
![Beast actor Vijay First Interview In Over A Decade Reveals The Real Reason Behind His Silence Beast actor Vijay First Interview In Over A Decade Reveals The Real Reason Behind His Silence](https://static-ai.asianetnews.com/images/01g0dr3e1tn2h4cfeahph2r2gt/images--1--jpg_363x203xt.jpg)
ತಮಿಳು ಸ್ಟಾರ್ ನಟ ಇಳಯದಳಪತಿ ವಿಜಯ್(Thalapathy Vijay) ಸದ್ಯ ಬೀಸ್ಟ್(Beast) ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ. ಈಗಾಗಲೇ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2(KGF2) ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ಬೀಸ್ಟ್ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಬೀಸ್ಟ್ ತಮಿಳುನಾಡು ಮಾತ್ರವಲ್ಲದೆ ದಕ್ಷಿಣ ಭಾರತೀಯ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ನಟ ವಿಜಯ್ ಬರೋಬ್ಬರಿ 10 ವರ್ಷಗಳ ಬಳಿಕ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ವಿಜಯ್ ಯಾವುದೇ ಸಿನಿಮಾ ಬಿಡುಗಡೆ ಸಮಯದಲ್ಲೂ ಸಂದರ್ಶನ ನೀಡಿರಲಿಲ್ಲ. ಆದರೀಗ ಬೀಸ್ಟ್ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ದಿಲೀಪ್ ಕುಮಾರ್ ಕುಮಾರ್ ಮಾತುಕತೆ ನಡೆಸಿರುವ ವಿಜಯ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ಸನ್ ಟಿವಿಯಲ್ಲಿ ವಿಜಯ್ ಸಂದರ್ಶನ ಪ್ರಸಾರವಾಗಿದೆ. ಈ ಮಾತುಕತೆಯಲ್ಲಿ 10 ವರ್ಷಗಳಿಂದ ಸಂದರ್ಶನಗಳಿಂದ ದೂರ ಇದ್ದ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾರೆೆ.
10 ವರ್ಷಗಳಿಂದ ಸಂದರ್ಶನದಿಂದ ದೂರ ಇಳಿದಿದ್ದೇಕೆ ವಿಜಯ್?
10 ವರ್ಷಗಳಿಂದ ಸಂದರ್ಶನ ನೀಡದೆ ಇರಲು ಕಾರಣ ನೀಡಿದ ವಿಜಯ್, ಹಾಗಲ್ಲ ನನಗೆ ಸಂದರ್ಶನ ನೀಡಲು ಸಮಯವಿದೆ. ಆದರೆ ಅದರಿಂದ ಏನು ಪ್ರಯೋಜನ ವಿಲ್ಲ. ನಾನು ಸುಮಾರು 10 ವರ್ಷಗಳ ಹಿಂದೆ ಸಂದರ್ಶನ ನೀಡಿದ್ದೆ. ಆದರೆ ಆ ಸಂದರ್ಶನದಲ್ಲಿ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಅದು ನನಗೆ ಇಷ್ಟವಾಗಿರಲಿಲ್ಲ. ಅದರಿಂದ ನನ್ನ ಕುಟುಂಬದವರು ಸಹ ಯಾಕೆ ಇಷ್ಟು ದುರಹಂಕಾರದಿಂದ ಮಾತನಾಡುತ್ತೀಯಾ ಎಂದು ಕೇಳಿದ್ದರು. ಬಳಿಕ ನಾನು ಸಂಬಂಧ ಪಟ್ಟ ವ್ಯಕ್ತಿಗೆ ಕರೆ ಮಾಡಿ ನಾನು ಹಾಗೆ ಹೇಳಿದಲ್ಲ ಎಂದು ತಿಳಿಸಿದೆ. ಹಾಗಾಗಿ ನಾನು ಸಂದರ್ಶನಗಳಿಂದ ದೂರ ಉಳಿದ್ದಿದ್ದೀನಿ ಎಂದು ಬಹಿರಂಗ ಪಡಿಸಿದರು.
Beast ಸಿನಿಮಾ ಬ್ಯಾನ್ ಮಾಡಿದ ಕುವೈತ್; ವಿಜಯ್ ಸಿನಿಮಾದಲ್ಲಿ ಏನಿದೆ ಅಂತದ್ದು?
ಚರ್ಚ್, ದೇವಸ್ಥಾನಗಳ ಬಗ್ಗೆ ವಿಜಯ್ ಮಾತು
ನಾನು ದೃಢ ನಂಬಿಕೆ ಇರುವ ವ್ಯಕ್ತಿ. ನಾನು ಚಿತ್ರೀಕರಣ ವೇಳೆ ಚರ್ಚ್ ಗೆ ಹೋಗುತ್ತೇನೆ. ದೇವಸ್ಥಾನಗಳಿಗೂ ಹೋಗುತ್ತೇನೆ ಮತ್ತು ಅಮೀನ್ ಪೀರ್ ದರ್ಗಾಗೂ ಹೋಗಿದ್ದೇನೆ. ನಾನು ಈ ಎಲ್ಲಾ ಸ್ಥಳಗಳಲ್ಲೂ ದೈವಿಕ ಭಾವನೆ ಅನುಭವಿಸಿದ್ದೇನೆ. ನನ್ನ ತಾಯಿ ಹಿಂದೂ ಮತ್ತು ತಂದೆ ಕ್ರಿಶ್ಚಿಯನ್ ಇಬ್ಬರೂ ಪ್ರೀತಿಸಿ ಮದುವೆಯಾದರು. ನಾನು ಎಲ್ಲಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಬಂಧಿಸದ ಕುಟುಂಬದಲ್ಲಿ ನಾನು ಬೆಳೆದಿದ್ದೀನಿ. ನನ್ನ ಮಕ್ಕಳಿಗೂ ನಾನು ಅದನ್ನೆ ಕಲಿಸಿದ್ದೇನೆ ಎಂದರು.
ಬೀಸ್ಟ್ ಸಿನಿಮಾ ಬಗ್ಗೆ
ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತದ ಕಲಾವಿದರಲ್ಲಿ ವಿಜಯ್ ಕೂಡ ಒಬ್ಬರು. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ವಿಜಯ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಸದ್ಯ ಬೀಸ್ಟ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೈಲರ್ ನಲ್ಲಿ ವಿಜಯ್ ಸೈನಿಕನ ಪಾತ್ರ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗವಾಗಿದೆ.
KGF 2 VS Beast: ಕರ್ನಾಟಕದಲ್ಲಿ KGF 2 ಗೆ ಫೈಟ್ ನೀಡೋಕೆ ಬೀಸ್ಟ್ ಮಾಸ್ಟರ್ ಪ್ಲ್ಯಾನ್.!
ಇನ್ನು ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪೂಜಾ ಹೆಗ್ಡೆ ಒಂದು ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾ ಏಪ್ರಿಲ್ 13ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.