- Home
- Entertainment
- Cine World
- 'ಜಾನ್ವಿ ಕಪೂರ್' ಬಿಟ್ಟು, ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿದ ನಿತ್ಯಾ ಮೆನನ್! ಬಾಲಿವುಡ್ಗೆ ಕೆನ್ನೆಗೆ ಬಾರಿಸಿದ ನಟಿ
'ಜಾನ್ವಿ ಕಪೂರ್' ಬಿಟ್ಟು, ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿದ ನಿತ್ಯಾ ಮೆನನ್! ಬಾಲಿವುಡ್ಗೆ ಕೆನ್ನೆಗೆ ಬಾರಿಸಿದ ನಟಿ
ರಾಮ್ ಚರಣ್-ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಚಿತ್ರವು ನಾಯಕಿಯ ಅತಿಯಾದ ಲೈಂಗಿಕ ಚಿತ್ರಣದಿಂದ ವಿವಾದಕ್ಕೀಡಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟಿ ನಿತ್ಯಾ ಮೆನನ್, ಇದು ಇಡೀ ಭಾರತೀಯ ಚಿತ್ರರಂಗದ ಸಮಸ್ಯೆಯಾಗಿದ್ದು, ನಟಿಯರು ತಮ್ಮದೇ ಆದ ಗಡಿಗಳನ್ನು ಹಾಕಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರನ್ನು ಗ್ಲಾಮರ್ ಹೆಸರಿನಲ್ಲಿ ಅತಿಯಾಗಿ ಲೈಂಗಿಕವಾಗಿ ಬಿಂಬಿಸುವ (Hyper-sexualization) ವಿಚಾರ ಸದಾ ಚರ್ಚೆಯಲ್ಲೇ ಇರುತ್ತದೆ. ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ನಟನೆಯ 'ಪೆದ್ದಿ' (Peddhi) ಚಿತ್ರದ ಸುತ್ತ ಇಂತಹದ್ದೇ ಒಂದು ದೊಡ್ಡ ವಿವಾದ ಸೃಷ್ಟಿಯಾಗಿದೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರವನ್ನು ಅತಿಯಾಗಿ ಲೈಂಗಿಕ ವಸ್ತುವಿನಂತೆ ಬಳಸಿಕೊಳ್ಳಲಾಗಿದೆ ಎಂಬ ಕಠಿಣ ಟೀಕೆಗಳು ಕೇಳಿಬರುತ್ತಿವೆ. ಈ ವಿವಾದದ ನಡುವೆಯೇ ಬಹುಭಾಷಾ ನಟಿ ನಿತ್ಯಾ ಮೆನನ್ ನೀಡಿರುವ ಹೇಳಿಕೆ ಈಗ ಸಿನಿರಂಗದಲ್ಲಿ ತಲ್ಲಣ ಸೃಷ್ಟಿಸಿದೆ.
ಇದು ಇಡೀ ಚಿತ್ರರಂಗದ ಪ್ರವೃತ್ತಿ ಎಂದ ನಿತ್ಯಾ:
'ವೆರೈಟಿ ಇಂಡಿಯಾ'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಿತ್ಯಾ ಮೆನನ್, ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಭೋಗದ ವಸ್ತುವಿನಂತೆ ಪ್ರದರ್ಶಿಸುವುದು ಕೇವಲ ದಕ್ಷಿಣ ಭಾರತದ (South Indian Cinema) ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ಭಾರತೀಯ ಚಿತ್ರರಂಗದಾದ್ಯಂತ ಇರುವ ಪ್ರವೃತ್ತಿಯಾಗಿದೆ ಎಂದು ಖಡಕ್ ಆಗಿ ಹೇಳಿದ್ದಾರೆ. "ಸಿನಿಮಾಗಳ ಅತಿಯಾದ ವಾಣಿಜ್ಯೀಕರಣವೇ (Commercialization) ಈ ಎಲ್ಲ ಸಮಸ್ಯೆಗಳ ಮೂಲ ಬೇರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಲು ಮತ್ತು ಪ್ರೇಕ್ಷಕರನ್ನು ಉದ್ವೇಗಗೊಳಿಸಲು ಇಂತಹ ದೃಶ್ಯಗಳನ್ನು ಮುಂಚೂಣಿಗೆ ತರಲಾಗುತ್ತದೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಟಿಯರು ನಿಸ್ಸಹಾಯಕರಲ್ಲ, ಗಡಿ ಇರಬೇಕು:
ಕಿರುಕುಳ ಅಥವಾ ಮುಜುಗರದ ಸನ್ನಿವೇಶಗಳಲ್ಲಿ ನಟಿಯರು ನಿಸ್ಸಹಾಯಕರಲ್ಲ ಎಂದು ನಿತ್ಯಾ ಅಭಿಪ್ರಾಯಪಟ್ಟಿದ್ದಾರೆ. 'ನಟಿಯರಿಗೆ ತಮ್ಮದೇ ಆದ ಗಡಿರೇಖೆಗಳು (Boundaries) ಇರಬೇಕು. ತಮ್ಮನ್ನು ಲೈಂಗಿಕವಾಗಿ ಪ್ರದರ್ಶಿಸುವುದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಅದನ್ನು ನೇರವಾಗಿ ನಿರಾಕರಿಸುವ ಧೈರ್ಯ ತೋರಿಸಬೇಕು. ನೀವು ಕಮರ್ಷಿಯಲ್ ಸಿನಿಮಾಗಳನ್ನು ಒಪ್ಪಿಕೊಂಡು, ದಿಢೀರ್ ಆಗಿ ಒಂದು ದಿನ ಇಂತಹ ಸೀನ್ಗಳಿಗೆ ಒಪ್ಪಲ್ಲ ಎಂದರೆ ಯಾರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ಕೆಲವು ಗ್ಲಾಮರ್ ವಿಚಾರಗಳಿಗೆ ಒಪ್ಪದ ಕಾರಣ ನಾನು ಹಲವು ಸಿನಿಮಾಗಳನ್ನು ಕಳೆದುಕೊಂಡಿದ್ದೇನೆ. ಆದರೆ ನನಗೆ ಸ್ಟಾರ್ ಪಟ್ಟಕ್ಕಿಂತ ನನ್ನ ತತ್ವಗಳೇ ಮುಖ್ಯ. ದೊಡ್ಡ ಸ್ಟಾರ್ ಆಗಲು ಏನನ್ನೂ ಮಾಡಲು ಸಿದ್ಧ ಎನ್ನುವುದಾದರೆ ಅದು ಅವರವರ ವೈಯಕ್ತಿಕ ನಿರ್ಧಾರ,' ಎಂದು ನಿತ್ಯಾ ತೀಕ್ಷ್ಣವಾಗಿ ನುಡಿದಿದ್ದಾರೆ.
‘ಪೆದ್ದಿ’ ಚಿತ್ರದ ಮೇಲಿರುವ ಗಂಭೀರ ಆರೋಪಗಳೇನು?
ಬುಚ್ಚಿ ಬಾಬು ಸನ ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ನಾಯಕ ರಾಮ್ ಚರಣ್ ಪಾತ್ರಕ್ಕೆ ಪ್ರಬಲ ಸಾಮಾಜಿಕ-ರಾಜಕೀಯ ಹಿನ್ನೆಲೆ ನೀಡಲಾಗಿದೆ. ಆದರೆ ನಾಯಕಿ ಅಚ್ಚಿಯಮ್ಮ (ಜಾನ್ವಿ ಕಪೂರ್) ಪಾತ್ರವನ್ನು ಕೇವಲ ದೇಹ ಪ್ರದರ್ಶನಕ್ಕಷ್ಟೇ ಸೀಮಿತಗೊಳಿಸಲಾಗಿದೆ ಎಂದು ವಿಮರ್ಶಕರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದಲ್ಲಿ ನಾಯಕಿಯ ಒಪ್ಪಿಗೆಯಿಲ್ಲದೆ ಆಕೆಯನ್ನು ಸ್ಪರ್ಶಿಸುವುದು, ಕರೆಂಟ್ ಹೋದಾಗ ಬಲವಂತವಾಗಿ ಚುಂಬಿಸುವುದನ್ನು 'ಪ್ರೇಮ' ಎಂದು ವೈಭವೀಕರಿಸಲಾಗಿದೆ. ಈ ದೌರ್ಜನ್ಯದ ನಂತರ ನಾಯಕಿ ಅತ್ತಾಗ, ಆಕೆಯ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ಈ ಘಟನೆಯನ್ನು ಮರೆತುಬಿಡುವಂತೆ ಮತ್ತೊಂದು ಪಾತ್ರ ಹೇಳುವ ದೃಶ್ಯಗಳು ತೀವ್ರ ಟೀಕೆಗೆ ಒಳಗಾಗಿವೆ.
ವರದಿಗಳ ಪ್ರಕಾರ, ಪೋಸ್ಟ್-ಪ್ರೊಡಕ್ಷನ್ ಸಮಯದಲ್ಲಿ ಜಾನ್ವಿ ಕಪೂರ್ ಕೂಡ ಇಂತಹ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಬಾಕ್ಸ್ ಆಫೀಸ್ ಲಾಭಕ್ಕಾಗಿ ನಿರ್ದೇಶಕರು ನಟಿಯ ಮಾತಿಗೆ ಬೆಲೆ ಕೊಡದೆ ದೃಶ್ಯಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ ಸಾಮಾಜಿಕ ಜಾಲತಾಣದ ಪೋಸ್ಟ್ವೊಂದಕ್ಕೆ ಜಾನ್ವಿ ಬೆಂಬಲ ಸೂಚಿಸಿದ್ದರು. ಸದ್ಯ ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ನಿರ್ದೇಶಕ ಬುಚ್ಚಿ ಬಾಬು ಸನ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

