ಬಾಲಿವುಡ್ ನಟ ಆಮಿರ್ ಖಾನ್ ಮೇಘಾಲಯದ ರಾಜಾ ರಘುವಂಶಿ ಕೊಲೆ ಪ್ರಕರಣವನ್ನು ಆಧರಿಸಿದ ಚಿತ್ರ ನಿರ್ಮಿಸುವ ಸಾಧ್ಯತೆ ಇದೆ. ಈ ಚಿತ್ರವು ನಿಜ ಜೀವನದ ದುರಂತ ಘಟನೆಯನ್ನು ಆಧರಿಸಿದೆ ಮತ್ತು ಆಮಿರ್ ಖಾನ್ ಈ ಪ್ರಕರಣದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Aamir Khan’s Next Crime Thriller movie: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ ಆಮಿರ್ ಖಾನ್ ತಮ್ಮ ಇತ್ತೀಚಿನ ಯಶಸ್ವಿ ಚಿತ್ರ 'ಸಿತಾರೆ ಜಮೀನ್ ಪರ್' ನಂತರ ಮತ್ತೊಂದು ದೊಡ್ಡ ಸಿನಿಮಾವೊಂದಕ್ಕೆ ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ, ಆಮಿರ್ ಖಾನ್, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯದ ರಾಜಾ ರಘುವಂಶಿ ಕೊಲೆ ಪ್ರಕರಣವನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಆಮಿರ್ ಖಾನ್ ಈ ಪ್ರಕರಣದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ. 'ಆಮಿರ್ ಈ ಕೇಸ್‌ನ ಅಪ್ಡೇಟ್ಸ್ ಮೇಲೆ ವೈಯಕ್ತಿಕವಾಗಿ ನಿಗಾ ಇಟ್ಟಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ಬೆಳವಣಿಗೆಗಳು ನಡೆಯುತ್ತಿವೆ' ಎಂದು ಆಮಿರ್‌ಗೆ ಆಪ್ತ ಮೂಲವೊಂದು ತಿಳಿಸಿದೆ. ಆದರೆ ಆಮಿರ್ ಈ ಚಿತ್ರವನ್ನು ಕೇವಲ ನಿರ್ಮಿಸುತ್ತಾರೆಯೇ ಅಥವಾ ಅದರಲ್ಲಿ ನಟಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ದೇಶವನ್ನೇ ಬೆಚ್ಚಿಬಿಳಿಸಿತ್ತು ರಾಜಾ ರಘುವಂಶಿ ಪ್ರಕರಣ:

ಈ ಚಿತ್ರದ ಕಥೆಯು ಇಂದೋರ್‌ನ ರಾಜಾ ರಘುವಂಶಿ ಮತ್ತು ಸೋನಮ್ ದಂಪತಿಗಳ ದಾರುಣ ಕೊಲೆ ಪ್ರಕರಣವನ್ನು ಆಧರಿಸಿದೆ. ಈ ವರ್ಷ ಮೇ 11 ರಂದು ವಿವಾಹವಾದ ಈ ಜೋಡಿ, ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿತ್ತು. ಆದರೆ, ಮೇ 20 ರಂದು ಶಿಲ್ಲಾಂಗ್‌ನಿಂದ 65 ಕಿ.ಮೀ ದೂರದ ಸೊಹ್ರಾದಲ್ಲಿ ಅವರು ನಾಪತ್ತೆಯಾದರು. ಜೂನ್ 2 ರಂದು, ಚಿರಾಪುಂಜಿಯ ವೈಸಾಡಾಂಗ್ ಜಲಪಾತದ ಬಳಿ 200 ಅಡಿ ಆಳದ ಕಮರಿಯಿಂದ ರಾಜಾ ಅವರ ಛಿದ್ರಗೊಂಡ ಶವ ಪತ್ತೆಯಾಯಿತು. ಒಂದು ವಾರದ ನಂತರ, ಉತ್ತರ ಪ್ರದೇಶದ ಘಾಜಿಪುರದಿಂದ ಸೋನಮ್‌ನನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ, ಸೋನಮ್ ತನ್ನ ಗಂಡನ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದರು. ಸೋನಮ್ ಜೊತೆಗೆ ವಿಶಾಲ್ ಚೌಹಾಣ್, ಆನಂದ್ ಕುರ್ಮಿ ಮತ್ತು ಆಕಾಶ್ ರಜಪೂತ್ ಎಂಬ ಮೂವರು ಹಂತಕರನ್ನೂ ಇಂದೋರ್ ಪೊಲೀಸರು ಬಂಧಿಸಿದ್ದಾರೆ.

ಚಿತ್ರ ಇನ್ನೂ ಆರಂಭಿಕ ಹಂತದಲ್ಲಿ..

ಆಮಿರ್ ಖಾನ್‌ರ ಈ ಮುಂದಿನ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಪಾತ್ರವರ್ಗದ ಆಯ್ಕೆ ಸೇರಿದಂತೆ ಯಾವುದೇ ಅಧಿಕೃತ ಘೋಷಣೆಗಳು ಇನ್ನೂ ಆಗಿಲ್ಲ. 'ಸಿತಾರೆ ಜಮೀನ್ ಪರ್' ಚಿತ್ರದ ಯಶಸ್ಸಿನ ನಂತರ, ಆಮಿರ್‌ರ ಈ ಹೊಸ ಕ್ರೈಮ್ ಥ್ರಿಲ್ಲರ್ ಚಿತ್ರವು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರವು ಆಮಿರ್‌ರ ವಿಶಿಷ್ಟ ನಿರ್ಮಾಣ ಶೈಲಿಯಲ್ಲಿ ನಿಜ ಜೀವನದ ದುರಂತವನ್ನು ತೆರೆ ಮೇಲೆ ತರುವ ಸಾಧ್ಯತೆಯಿದೆ.