ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಚುರುಕು ಸಿಕ್ಕಿದ್ದು, ಅದಾನಿ ಗ್ರೂಪ್ ಬೆಂಬಲಿತ 'ಸೆಮಿಂಡಿಯಾ ಪ್ರಾಜೆಕ್ಟ್ಸ್' 665.61 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದೆ.
ಬೆಂಗಳೂರು (ಆ.31): ರಾಜಧಾನಿ ಬೆಂಗಳೂರಿನ ಮಹತ್ವಾಕಾಂಕ್ಷೆಯ ಉಪನಗರ ರೈಲು ಯೋಜನೆಗೆ (Suburban Rail Project) ಚುರುಕು ಸಿಕ್ಕಿದ್ದು, 665.61 ಕೋಟಿ ರೂಪಾಯಿ ಮೌಲ್ಯದ ಸಿವಿಲ್ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ನಲ್ಲಿ ಅದಾನಿ ಗ್ರೂಪ್ ಬೆಂಬಲಿತ 'ಸೆಮಿಂಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್' (Cemindia Projects Ltd) ಅತ್ಯಂತ ಕಡಿಮೆ ಬಿಡ್ದಾರರಾಗಿ (L1) ಹೊರಹೊಮ್ಮಿದೆ. ಈಗಾಗಲೇ ಬೆಂಗಳೂರು ಸುರಂಗ ರಸ್ತೆಯ ಪ್ರಾಜೆಕ್ಟ್ ಸಂಪಾದಿಸಿರುವ ಅದಾನಿ ಒಡೆತನದ ಕಂಪನಿಗೆ ಇದು ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಟೆಂಡರ್ ಎನಿಸಿದೆ.
ಈ ಹಿಂದೆ 'ಐಟಿಡಿ ಸಿಮೆಂಟೇಷನ್ ಇಂಡಿಯಾ' (ITD Cementation India) ಎಂದು ಕರೆಯಲ್ಪಡುತ್ತಿದ್ದ ಈ ಸಂಸ್ಥೆ, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (K-RIDE) ಆಹ್ವಾನಿಸಿದ್ದ ಟೆಂಡರ್ನಲ್ಲಿ ಈ ಯಶಸ್ಸು ಸಾಧಿಸಿದೆ. ಕೆ-ರೈಡ್ ಈ ಯೋಜನೆಗೆ 671.65 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಿತ್ತು.
ಪ್ರಮುಖ ಸ್ಪರ್ಧಿಗಳನ್ನು ಹಿಂದಿಕ್ಕಿದ ಸಂಸ್ಥೆ
ಕೆ-ರೈಡ್ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಸೆಮಿಂಡಿಯಾ ಸಂಸ್ಥೆಯು 665.61 ಕೋಟಿ ರೂಪಾಯಿ ಉಲ್ಲೇಖಿಸಿದರೆ, ಎರಡನೇ ಅತ್ಯಂತ ಕಡಿಮೆ ಬಿಡ್ದಾರರಾಗಿದ್ದ 'ರೈಲ್ ವಿಕಾಸ್ ನಿಗಮ್ ಲಿಮಿಟೆಡ್' (RVNL) 759.05 ಕೋಟಿ ರೂಪಾಯಿ ಪ್ರಸ್ತಾಪಿಸಿತ್ತು. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 24 ತಿಂಗಳ (2 ವರ್ಷ) ಸಮಯಾವಕಾಶ ನೀಡಲಾಗಿದೆ.
ವಿಶೇಷವೆಂದರೆ, ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ನಡುವಿನ 16.75 ಕಿ.ಮೀ ಉದ್ದದ ಸುರಂಗ ರಸ್ತೆ (Tunnel Road) ಯೋಜನೆಯ ಎರಡೂ ಪ್ಯಾಕೇಜ್ಗಳಿಗೆ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (AEL) ಅತ್ಯಂತ ಕಡಿಮೆ ಬಿಡ್ದಾರರಾಗಿ ಹೊರಹೊಮ್ಮಿತ್ತು. ಆದರೆ, ಈ ಕಾಮಗಾರಿಗಳ ಅಧಿಕೃತ ಗುತ್ತಿಗೆ ಆದೇಶ ಇನ್ನೂ ನೀಡಬೇಕಿದೆ. ಇದೇ ಆಗಸ್ಟ್ 23 ರಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿದ್ದರು. ಸಿಎಂ ಇದನ್ನು 'ಸೌಜನ್ಯದ ಭೇಟಿ' ಎಂದು ಬಣ್ಣಿಸಿದ್ದರು.
ಏನೆಲ್ಲಾ ಒಳಗೊಂಡಿದೆ ಈ ಕಾಮಗಾರಿ ಪ್ಯಾಕೇಜ್?
ಕಾರಿಡಾರ್-2 (ಮಲ್ಲಿಗೆ ಲೈನ್) ವ್ಯಾಪ್ತಿಯ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ 7.8 ಕಿಲೋಮೀಟರ್ ಉದ್ದದ ಮೇಲ್ಸೇತುವೆ (Elevated Viaduct) ಹಾಗೂ ರಾಂಪ್ಗಳ ನಿರ್ಮಾಣ ಈ ಟೆಂಡರ್ನಲ್ಲಿ ಸೇರಿದೆ.
ಇದರ ಪ್ರಮುಖ ಆಕರ್ಷಣೆಯೆಂದರೆ, ಮತ್ತಿಕೆರೆಯಲ್ಲಿ ನಿರ್ಮಾಣವಾಗಲಿರುವ ರೈಲು-ರಸ್ತೆ ಒಳಗೊಂಡ 'ಡಬಲ್ ಡೆಕ್ಕರ್' ಫ್ಲೈಓವರ್ ಹಾಗೂ ಡಬಲ್ ಡೆಕ್ಕರ್ ರೈಲು ನಿಲ್ದಾಣ! ಮತ್ತಿಕೆರೆ ಮತ್ತು ಯಶವಂತಪುರ ನಡುವಿನ ಮೋಹನ್ ಕುಮಾರ್ ರಸ್ತೆಯಲ್ಲಿ 1.2 ಕಿ.ಮೀ ಉದ್ದದ ಈ ಬೃಹತ್ ಡಬಲ್ ಡೆಕ್ಕರ್ ರಚನೆ ನಿರ್ಮಾಣವಾಗಲಿದೆ. ಅತ್ಯಂತ ದಟ್ಟಣೆಯಿಂದ ಕೂಡಿದ ಹಾಗೂ ಜಾಗದ ಅಭಾವವಿರುವ ಈ ಪ್ರದೇಶದಲ್ಲಿ, ಮೇಲ್ಭಾಗದಲ್ಲಿ ಉಪನಗರ ರೈಲು ಸಂಚಾರ ಮತ್ತು ಕೆಳಭಾಗದಲ್ಲಿ ರಸ್ತೆ ಫ್ಲೈಓವರ್ ಸೇವೆ ಒದಗಿಸುವ ರೀತಿಯಲ್ಲಿ ಈ ವಿನ್ಯಾಸ ಮಾಡಲಾಗಿದೆ ಎಂದು ಕೆ-ರೈಡ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಲಿನಲ್ಲಿವೆ ಮತ್ತಷ್ಟು ಕಾಮಗಾರಿಗಳ ಟೆಂಡರ್
ಕಾರಿಡಾರ್-4 (ಕನಕ ಲೈನ್): ಬೆನ್ನಿಗಾನಹಳ್ಳಿ ಮತ್ತು ಜಕ್ಕೂರು ನಡುವಿನ 6.2 ಕಿ.ಮೀ ಸಾಮಾನ್ಯ ರಸ್ತೆ ಮಾರ್ಗ ಮತ್ತು 3.6 ಕಿ.ಮೀ ಮೇಲ್ಸೇತುವೆ ನಿರ್ಮಾಣದ ಪ್ಯಾಕೇಜ್-1 ಗೆ 'RNS-GPL JV' ಸಂಸ್ಥೆಯು 342 ಕೋಟಿ ರೂ. ಬಿಡ್ ಸಲ್ಲಿಸಿ ಏಕೈಕ ಸ್ಪರ್ಧಿಯಾಗಿದೆ. ಇವರ ದರಗಳು ಸಮಂಜಸವಾಗಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆ-ರೈಡ್ ಹೇಳಿದೆ.
ಹೀಲಲಿಗೆ - ರಾಜಾನುಕುಂಟೆ: ಕನಕ ಲೈನ್ನ ಹೀಲಲಿಗೆ ಮತ್ತು ಬೆಳ್ಳಂದೂರು ನಡುವಿನ 12.6 ಕಿ.ಮೀ ಪ್ಯಾಕೇಜ್-2 ಟೆಂಡರ್ ಅನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ.
ಕೋಚ್ ಮತ್ತು ಡಿಪೋ: ಸೋಲದೇವನಹಳ್ಳಿಯಲ್ಲಿ ರೈಲುಗಳ ನಿರ್ವಹಣಾ ಡಿಪೋ ಮತ್ತು ರೋಲಿಂಗ್ ಸ್ಟಾಕ್ಗಾಗಿ 200 ಕೋಟಿ ರೂ. ಮೌಲ್ಯದ ಗುತ್ತಿಗೆಯನ್ನು ಅಂತಿಮಗೊಳಿಸಲಾಗುತ್ತಿದೆ.
ಲೆವೆಲ್ ಕ್ರಾಸಿಂಗ್ ತೆರವು: ಕನಕ ಲೈನ್ ವ್ಯಾಪ್ತಿಯಲ್ಲಿ ರೈಲ್ವೆ ಗೇಟ್ಗಳನ್ನು (Level Crossings) ತೆರವುಗೊಳಿಸಲು ಕ್ರಮವಾಗಿ 59.61 ಕೋಟಿ ರೂ. ಹಾಗೂ 49.55 ಕೋಟಿ ರೂ. ಮೌಲ್ಯದ ಎರಡು ಪ್ಯಾಕೇಜ್ಗಳು ಅಂತಿಮ ಹಂತದಲ್ಲಿವೆ.
ಇತರ ನೀಡಲಾದ ಪ್ರಮುಖ ಕಾಮಗಾರಿಗಳು
ಮಲ್ಲಿಗೆ ಲೈನ್ನ ಯಶವಂತಪುರ - ಚಿಕ್ಕಬಾಣಾವರ ಕಾಮಗಾರಿಯನ್ನು 'PJB ಇಂಜಿನಿಯರ್ಸ್' ಸಂಸ್ಥೆಗೆ 106 ಕೋಟಿ ರೂ. ಗೆ, ಬೈಯಪ್ಪನಹಳ್ಳಿ - ಹೆಬ್ಬಾಳ ಕಾಮಗಾರಿಯನ್ನು 'PJB ಇಂಜಿನಿಯರ್ಸ್ ಮತ್ತು CVCC' ಒಕ್ಕೂಟಕ್ಕೆ 263 ಕೋಟಿ ರೂ. ಗೆ ವಹಿಸಲಾಗಿದೆ. ಇನ್ನು 8 ನಿಲ್ದಾಣಗಳನ್ನು ಒಳಗೊಂಡ ಪ್ಯಾಕೇಜ್ ಸಿ2ಎ ಅನ್ನು 'ಎನ್ಸಿಸಿ ಲಿಮಿಟೆಡ್' (NCC Ltd) ಸಂಸ್ಥೆಗೆ 501.25 ಕೋಟಿ ರೂ. ಗೆ ನೀಡಲಾಗಿದೆ. ಯಶವಂತಪುರ, ಶೆಟ್ಟಿಹಳ್ಳಿ, ಮ್ಯಾದರಹಳ್ಳಿ ಹಾಗೂ ಚಿಕ್ಕಬಾಣಾವರ ನಿಲ್ದಾಣಗಳು ಸೇರಿ 500 ಮೀಟರ್ ಮೇಲ್ಸೇತುವೆ ಒಳಗೊಂಡ ಕೋರಿಡಾರ್-2ಬಿ ಪ್ಯಾಕೇಜ್ ಅನ್ನು 'ಐಟಿಡಿ ಸಿಮೆಂಟೇಷನ್ ಇಂಡಿಯಾ'ಗೆ ಈಗಾಗಲೇ 525.52 ಕೋಟಿ ರೂ. ಗೆ ವಹಿಸಲಾಗಿತ್ತು.


