ಮಧ್ಯ ಪ್ರಾಚ್ಯದ ಸಂಘರ್ಷವು ಇದೀಗ 'ಜಲಯುದ್ಧ'ವಾಗಿ ಮಾರ್ಪಟ್ಟಿದ್ದು, ಇರಾನ್ ಮತ್ತು ಅಮೆರಿಕಾ ಪರಸ್ಪರರ ನೀರು ಶುದ್ದೀಕರಣ ಘಟಕಗಳ ಮೇಲೆ ದಾಳಿ ನಡೆಸಿವೆ. ಈ ನಡುವೆ ಸೌದಿ ಅರೇಬಿಯಾದಲ್ಲಿ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಸಾವನ್ನಪ್ಪಿದ್ದಾನೆ.

ದುಬೈ: ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯ ಪ್ರಾಚ್ಯದ ಯುದ್ದವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್ - ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ.

Add Asianetnews Kannada as a Preferred SourcegooglePreferred

ಭಾನುವಾರ ಬಹ್ರೇನ್‌ನಲ್ಲಿರುವ ನೀರು ಶುದ್ದೀಕರಣ ಘಟಕವನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ಮತ್ತೊಂದೆಡೆ ಖೇಶಮ್ ದ್ವೀಪದಲ್ಲಿರುವ ತನ್ನ ನೀರು ಶುದ್ದೀ ಕರಣ ಘಟಕವನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ ಎಂದು ಇರಾನ್ ಪ್ರತ್ಯಾರೋಪ ಮಾಡಿದೆ. ಮರುಭೂಮಿಯ ನಾಡಲ್ಲಿ ಸಮುದ್ರದ ನೀರನ್ನೇ ವಿಶೇಷ ಘಟಕಗಳ ಮೂಲಕ ಶುದ್ದೀಕರಿಸಿ ಜನರಿಗೆ, ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ. ಆದರೆ ಇವುಗಳ ಮೇಲೇ ಈಗ ದಾಳಿ ನಡೆಸುತ್ತಿರುವುದು ಜನರ ಶುದ್ದ ಕುಡಿಯುವ ನೀರಿನ ಹಕ್ಕನ್ನೇ ಮೊಟಕುಗೊಳಿಸಿದಂತಾಗಲಿದೆ.

ಇಸ್ರೇಲ್‌ಗೆ 20000 ಅಮೆರಿಕ ಬಾಂಬ್

ವಾಷಿಂಗ್ಟನ್: ಇರಾನ್ ಜತೆಗಿನ ಸಂಘರ್ಷ 3 ತಿಂಗಳಾದರೂ ನಡೆಯುತ್ತದೆ ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಇದೀಗ ಇಸ್ರೇಲ್‌ಗೆ 6000 ಕೋಟಿ ರು. ಮೌಲ್ಯದ 20,000 ಬಾಂಬ್‌ಗಳನ್ನು ರವಾನಿಸುವಂತೆ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಮೆರಿಕದ ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯಡಿ ವಿದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲು ಸಂಸತ್ತು ಅನುಮತಿಸುವುದು ಅಗತ್ಯವಾದರೂ ಟ್ರಂಪ್ ಸಂಸತ್ತಿನ ಗಮನಕ್ಕೇ ತರದೆ ಸ್ಫೋಟಕಗಳ ರವಾನೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕ್ರಮವು ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಹೇಳಿದ್ದಾರೆ. ಈ ವ್ಯವಹಾರದ ಹಿಂದೆ, ಇಸ್ರೇಲ್ ನೆಲದಿಂದ ಇರಾನ್ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಲೆಕ್ಕಾಚಾರ ಇರುವುದು ಅತ್ಯಂತ ಸ್ಪಷ್ಟವಾಗಿದೆ.

ಇರಾನ್ ದಾಳಿಗೆ ಭಾರತೀಯ ಬಲಿ

ರಿಯಾದ್ ಸೌದಿ ಅರೇಬಿಯಾದ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಭಾರತೀಯ ಸೇರಿ ಇಬ್ಬರು ಸಾವನ್ನಪಿದಾರೆ ಎಂದು ಸೌದಿ ಸರ್ಕಾರ ಮಾಹಿತಿ ನೀಡಿದೆ. ರಾಜಧಾನಿ ರಿಯಾದ್‌ನಿಂದ 80 ಕಿ.ಮೀ ದೂರದ ಅಲ್ ಖರ್ಜ್ ಪ್ರದೇಶದ ಜನವಸತಿ ಪ್ರದೇಶವೊಂದರ ಮೇಲೆ ನಡೆದ ದಾಳಿ ವೇಳೆ ಓರ್ವಭಾರತೀಯ, ಓರ್ವ ಬಾಂಗ್ಲಾದೇಶಿ ನಾಗರಿಕ ಸಾವನ್ನಪ್ಪಿದ್ದಾರೆ. ಇತರೆ 12 ಬಾಂಗ್ಲಾದೇಶಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ ಮಧ್ಯಪ್ರಾಚ್ಯ ಯುದ್ಧಕ್ಕೆ ಬಲಿಯಾದ ಭಾರತೀಯರ ಸಂಖ್ಯೆ 4ಕ್ಕೆ ಏರಿದಂತಾಗಿದೆ. ಇದಕ್ಕೂ ಮೊದಲು ಇರಾನ್‌ ಹೋರ್ಮುಜ್ ಜಲಸಂಧಿ ಬಳಿ ತೈಲ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದರು.

ಇದನ್ನೂ ಓದಿ: ಸುಖೋಯ್ ದುರಂತ: ಹಸೆಮಣೆ ಏರಬೇಕಿದ್ದ ಅನುಜ್ ವಸಿಷ್ಠ: ಭಾವಿ ಪತಿಯಾಗಬೇಕಿದ್ದವನ ಕಣ್ಣೀರಿಡುತ್ತಲೇ ಕಳುಹಿಸಿಕೊಟ್ಟ IAF ಮಹಿಳಾ ಪೈಲಟ್

ದಾಳಿಯ ಫೋಟೊ ತೆಗೀಬೇಡಿ, ಯುಎಇ ಭಾರತೀಯರಿಗೆ ಸಲಹೆ

ಅಬುಧಾಬಿ: ಮಧ್ಯಪ್ರಾಚ್ಯ ಯುದ್ಧದ ಕುರಿತು ಫೋಟೋ, ವಿಡಿಯೋ ಸೆರೆಹಿಡಿಯದಂತೆ ಮತ್ತು ಅವುಗಳನ್ನು ಜಾಲತಾಣದಲ್ಲಿ ಹಾಕದಂತೆ ಯುಎಇನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಭಾರತೀಯರಿಗೆ ಸೂಚಿಸಿದೆ. ಅಲ್ಲದೆ ಯಾರಾದರೂ ಈ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ 'ಅನುಮಾನಾಸ್ಪದ ವಸ್ತುಗಳು ಕಂಡರೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಂತಹ ಸ್ಥಳಗಳಿಂದ ದೂರವಿರಿ. ಫೋಟೋ ತೆಗೆಯಲು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬೇಡಿ' ಎಂದು ಅದು ಸೂಚಿಸಿದೆ.

ಇದನ್ನೂ ಓದಿ: ಮದುವೆಯಾಗುವಂತೆ ಒತ್ತಡ ತಡೆಯಲಾಗದೇ ತಲೆ ಬೋಳಿಸಿಕೊಂಡ ಯುವತಿ ಹೇಳಿದ್ದೇನು?