ಸ್ವಿಜರ್ಲೆಂಡ್‌ನಲ್ಲಿ ಅದಾನಿ ನಂಟಿನ ವ್ಯಕ್ತಿಯೊಬ್ಬರ ₹2575 ಕೋಟಿ ಹಣವನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಪ್ತಿ ಮಾಡಲಾಗಿದೆ ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಅದಾನಿ ಸಮೂಹ ತಳ್ಳಿಹಾಕಿದೆ.

ನವದೆಹಲಿ: ‘ಭಾರತದ ಖ್ಯಾತ ಉದ್ಯಮಿ ಗೌತಮ್‌ ಅದಾನಿ ಸಮೂಹದ ನಂಟು ಹೊಂದಿರುವ ವ್ಯಕ್ತಿಯೊಬ್ಬರ ಅಂದಾಜು 2575 ಕೋಟಿ ರು. ಹಣವನ್ನು ಸ್ವಿಜರ್ಲೆಂಡ್‌ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅದಾನಿ ಮೇಲಿನ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಈ ಹಣ ಜಪ್ತಿ ಮಾಡಲಾಗಿದೆ’ ಎಂದು ಅಮೆರಿಕದ ಮೂಲದ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಅದಾನಿ ಸಮೂಹ ಸಾರಾಸಗಟಾಗಿ ತಿರಸ್ಕರಿಸಿದೆ.

Add Asianetnews Kannada as a Preferred SourcegooglePreferred

ಈ ಹಿಂದೆ ಅದಾನಿ ಕಂಪನಿ ಷೇರುಪೇಟೆಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದ ಹಿಂಡನ್‌ಬರ್ಗ್‌ ಶುಕ್ರವಾರ ಸರಣಿ ಟ್ವೀಟ್‌ ಮಾಡಿದೆ. ಅದರಲ್ಲಿ, ‘ಇತ್ತೀಚೆಗೆ ಬಿಡುಗಡೆಯಾದ ಸ್ವಿಜರ್ಲೆಂಡ್‌ನ ಕ್ರಿಮಿನಲ್‌ ದಾಖಲೆಗಳ ಕುರಿತು ಸ್ವಿಜರ್ಲೆಂಡ್‌ನ ಮಾಧ್ಯಮಗಳು ವರದಿ ಪ್ರಕಟಿಸಿವೆ. ಅದರನ್ವಯ ಅದಾನಿ ನಂಟಿನ ವ್ಯಕ್ತಿಯೊಬ್ಬರಿಗೆ ಸೇರಿದ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಇದ್ದ 2575 ಕೋಟಿ ರು. ಹಣವನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ಮತ್ತು ನಕಲಿ ದಾಖಲೆ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2021ರಿಂದಲೂ ಕೇಳಿಬಂದ ಆರೋಪ ಸಂಬಂಧ ಈ ಕ್ರಮ ಜರುಗಿಸಲಾಗಿದೆ’ ಎಂದಿದೆ.

‘ಈ ವ್ಯಕ್ತಿ ಅದಾನಿ ಸಮೂಹಕ್ಕೆ ನಂಟು ಹೊಂದಿದ್ದಾರೆ. ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌/ ಮಾರಿಷಸ್‌ ಮತ್ತು ಬರ್ಮುಡಾದ ಫಂಡ್‌ಗಳ ಮೂಲಕ ಅದಾನಿ ಸಮೂಹದ ಕಂಪನಿಗಳಲ್ಲಿ ಬೇನಾಮಿಯಾಗಿ ಭಾರೀ ಹೂಡಿಕೆ ಮಾಡಿದ್ದರು’ ಎಂದು ವರದಿ ಕುರಿತು ಹಿಂಡನ್‌ಬರ್ಗ್‌ ಉಲ್ಲೇಖ ಮಾಡಿದೆ.

ವರದಿಯಲ್ಲಿ ಏನಿದೆ?:

ಸ್ವಿಸ್‌ ಪತ್ರಿಕೆಯ ವರದಿ ಅನ್ವಯ, ‘ಹಿಂಡನ್‌ಬರ್ಗ್‌ ಸಂಸ್ಥೆ ಮೊದಲ ಬಾರಿಗೆ ಅದಾನಿ ಸಮೂಹದ ಮೇಲೆ ಅಕ್ರಮ ಆರೋಪ ಮಾಡುವುದಕ್ಕೂ ಮೊದಲೇ ಅದಾನಿ ಸಮೂಹದ ಅಕ್ರಮದ ಬಗ್ಗೆ ಸ್ವಿಜರ್ಲೆಂಡ್‌ನ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಗೌತಮ್‌ ಅದಾನಿ ನಂಟಿನ ವ್ಯಕ್ತಿಯ 5 ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿನ 2575 ಕೋಟಿ ರು. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ’ ಎಂದು ವರದಿ ಮಾಡಿದೆ.

ಅಡ್ಮಿಷನ್ ನಿರಾಕರಿಸಿದ ಕಾಲೇಜಿನಲ್ಲೇ ಶಿಕ್ಷಕರ ದಿನಾಚರಣೆಗೆ ಉಪನ್ಯಾಸ ನೀಡಿದ್ದ ಗೌತಮ್ ಅದಾನಿ!

ತನಿಖೆಗೆ ಕಾಂಗ್ರೆಸ್‌ ಆಗ್ರಹ:

ಈ ವರದಿ ಬೆನ್ನಲ್ಲೇ ಅದಾನಿ ಆಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಹಾಗೂ ಜಂಟಿ ಸದನ ಸಮಿತಿ (ಜೆಪಿಸಿ) ವಿಚಾರಣೆ ಆಗಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಇದು ಸುಳ್ಳು- ಅದಾನಿ:

ಆದರೆ ಹಿಂಡನ್‌ಬರ್ಗ್‌ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅದಾನಿ ಸಮೂಹ, ‘ಸ್ವಿಜರ್ಲೆಂಡ್‌ ಕೋರ್ಟ್‌ನ ಯಾವುದೇ ಪ್ರಕರಣಗಳಲ್ಲಿ ನಮ್ಮ ನಂಟಿಲ್ಲ. ಈ ಆರೋಪಗಳನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ನಮ್ಮ ಕಂಪನಿಯ ಲೆಕ್ಕಪತ್ರಗಳು ಯಾವುದೇ ಅಧಿಕಾರಿಗಳಿಂದ ತನಿಖೆಗೆ ಒಳಪಟ್ಟಿಲ್ಲ. ಆರೋಪ ಮಾಡಲಾದ ನ್ಯಾಯಾಲಯದ ವರದಿಯಲ್ಲೂ ಎಲ್ಲೂ ನಮ್ಮ ಸಂಸ್ಥೆಯ ಹೆಸರನ್ನು ಪ್ರಸ್ತಾಪ ಮಾಡಿಲ್ಲ ಮತ್ತು ಆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮಿಂದ ಯಾವುದೇ ಸ್ಪಷ್ಟನೆಯನ್ನೂ ಯಾರೂ ಕೇಳಿಲ್ಲ. ನಮ್ಮ ಎಲ್ಲಾ ಹೂಡಿಕೆಗಳು ಪಾರದರ್ಶಕವಾಗಿದೆ ಮತ್ತು ಕಾನೂನು ಬದ್ಧವಾಗಿದೆ ಎಂದು ನಾವು ಪುನರುಚ್ಚಾರ ಮಾಡುತ್ತೇವೆ’ ಎಂದು ಹೇಳಿದೆ.

ಕೆಲ ವರ್ಷದಲ್ಲಿ ಮಸ್ಕ್ ವಿಶ್ವದ ಮೊದಲ ಟ್ರಿಲೇನಿಯರ್, ಗೌತಮ್ ಅದಾನಿಗೆ 2ನೇ ಸ್ಥಾನ: ಅಧ್ಯಯನ ವರದಿ!