ಪೋಲೆಂಡ್ನ ವಾರ್ಸಾದಲ್ಲಿ, ಎಡ್ವರ್ಡ್ ವಾರ್ಚೋಕಿ ಎಂಬ ಮಾನವ ರೂಪದ ರೋಬೋಟ್ ನಗರಕ್ಕೆ ಬಂದ ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಕೃಷಿ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಹೊಸ ಭರವಸೆಯನ್ನು ಮೂಡಿಸಿದೆ.
ಕಾಡು ಹಂದಿಗಳ ಬೆವರಿಳಿಸಿದ ಹ್ಯೂಮನಾಯ್ಡ್ ರೋಬೋಟ್
ಇತ್ತೀಚೆಗೆಲ್ಲಾ ರೋಬೋಟ್ಗಳದ್ದೇ ದರ್ಬಾರ್, ಹಲವು ಸ್ಥಳಗಳಲ್ಲಿ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿವೆ. ಮನೆ ಕೆಲಸಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಹೊಟೇಲ್ಗಳಲ್ಲಿ ರೋಬೋಟ್ಗಳು ಇರುವುದನ್ನು ನೀವು ನೋಡಬಹುದಾಗಿದೆ. ಅವುಗಳು ನಿಮ್ಮ ಜೊತೆ ಮಾತನಾಡುವ ಓಡಾಡುವ ನಡೆದಾಡುವ ಜೊತೆಗೆ ಮಾನವರಂತೆ ಕೆಲಸ ಮಾಡುತ್ತವೆ. ಆದರೆ ಇಲ್ಲೊಂದು ಕಡೆ ಮಾನವ ರೂಪದ ರೋಬೋಟ್ ಒಂದು ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಕೃಷಿ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ನೀಡಿದೆ.
ಕೃಷಿ ಲೋಕಕ್ಕೆ ವರದಾನವಾಗುತ್ತಾನಾ ಈ 'ಎಡ್ವರ್ಡ್
ಸಾಮಾನ್ಯವಾಗಿ ವಿಜ್ಞಾನ ಕಾದಂಬರಿ ಆಧರಿತ ಸಿರೀಸ್ ಸಿನಿಮಾಗಳಲ್ಲಿ ಈ ದೃಶ್ಯವನ್ನು ನೋಡಬಹುದಾಗಿದೆ. ಆದರೆ ಪೋಲೆಂಡ್ನಲ್ಲಿ ಈ ಘಟನೆ ನಿಜವಾಗಿದೆ. ಮಾನವನನ್ನು ಹೋಲುವ ರೋಬೋಟ್ನನ್ನು ನೋಡಿ ಹಂದಿಗಳು ಓಡಿ ಹೋಗುತ್ತಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಪೋಲೆಂಡ್ನ ರಾಜಧಾನಿ ವಾರ್ಸಾದಲ್ಲಿ ಈ ಘಟನೆ ನಡೆದಿದ್ದು, ನಗರಕ್ಕೆ ದಾಂಗುಡಿ ಇಟ್ಟ ಕಾಡು ಹಂದಿಗಳನ್ನು ರೋಬೋಟ್ ಓಡಿಸುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.
ಇಂಟರ್ನೆಟ್ ಸ್ಟಾರ್ ಆದ 'ಎಡ್ವರ್ಡ್ ವಾರ್ಚೋಕಿ'.
ಪೋಲೆಂಡ್ನ ರಾಜಧಾನಿ ವಾರ್ಸಾದಲ್ಲಿ ಈ ಘಟನೆ ನಡೆದಿದ್ದು, ನಗರದಿಂದ ಕಾಡು ಹಂದಿಗಳನ್ನು ಕಾಡಿಗಟ್ಟಿದ ರೋಬೋಟ್ ಹೆಸರು ಎಡ್ವರ್ಡ್ ವಾರ್ಚೋಕಿ. ಇದರ ಹೆಸರಲ್ಲಿ ಇನ್ಸ್ಟಾಗ್ರಾಮ್ ಖಾತೆಯೂ ಕೂಡ ಇದ್ದು, ಕಾಡುಹಂದಿಯನ್ನು ಅದು ಓಡಿಸುತ್ತಿರುವ ವೀಡಿಯೋ ವೈರಲ್ ಆಗ್ತಿದ್ದಂತೆ ಪೋಲೆಂಡ್ ದೇಶಾದ್ಯಂತ ಈ ರೋಬೋಟ್ ಇಂಟರ್ನೆಟ್ ಸ್ಟಾರ್ ಎನಿಸಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯ ದರ್ಬಾರ್: ಟೀಚರ್ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ: ವೀಡಿಯೋ ವೈರಲ್
ಈ ಎಡ್ವರ್ಡ್ ವಾರ್ಚೋಕಿ ಹೆಸರಿನ ಈ ಟೋಬೋಟ್ ಹೋದಲೆಲ್ಲಾ ಜನರ ನಗಿಸುತ್ತದೆ. ಬ್ಯುಸಿಯಾದ ರಸ್ತೆಗಳಲ್ಲಿ ಓಡಾಡುವ ಇದು ಜನರ ಜೊತೆ ಮಾತು ಕೂಡ ಆಡುತ್ತದೆ. ಈ ರೋಬೋಟ್ನ ಸಹ ರಚನೆಕಾರ ಆಗಿರುವ ರಾಡೋಸ್ಲಾ ಗ್ರ್ಜೆಲಾಕ್ಸಿಕ್ ಈ ಬಗ್ಗೆ ಟಿವಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದು ಹಂದಿಗಳನ್ನು ಓಡಿಸೊದ್ರಲ್ಲಿ ನಂಗೇನು ಅಚ್ಚರಿ ಕಾಣಿಸ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಲಾಲಿ ಹಾಡಿ ಮಲಗಿಸಿದವಳ ಚಿರನಿದ್ರೆಗೆ ಜಾರಿಸಿದ ಮಗ: 4ನೇ ಮಹಡಿಯಿಂದ ಕೆಳಗೆಸೆದು ಮಗನಿಂದಲೇ ಅಮ್ಮನ ಹತ್ಯೆ
ಈ ವೀಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗ್ತಿದ್ದು, ಜನ ಸಿಕ್ಕಾಪಟ್ಟೆ ಕಾಮೆಂಟ್ ಮಾಡ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಮಾತ್ರವಲ್ಲದೇ ಅನೇಕ ಕಾಡು ಪ್ರಾಣಿಗಳು ರೈತರ ಬೆಳಗಳನ್ನು ಹಾಳು ಮಾಡುತ್ತವೆ. ಆದರೆ ಕಡಿಮೆ ಮೌಲ್ಯದಲ್ಲಿ ಇಂತಹದೊಂದು ರೋಬೋಟ್ ರೈತರಿಗೆ ಸಿಗುವಂತಾದರೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಸ್ವಲ್ಪ ನಿರಾಳತೆ ಉಂಟಾಗಬಹುದು. ಕೆಲವೇ ದಿನಗಳಲ್ಲಿ ಇವು ಮನುಷ್ಯರನ್ನು ಬೆನ್ನಟ್ಟಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


