Asianet Suvarna News Asianet Suvarna News

ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸ್ಫೋಟ: ಇಬ್ಬರ ಬಲಿ

ತಾಲಿಬಾನಿ ಉಗ್ರರು ಆಡಳಿತದ ಚುಕ್ಕಾಣಿ ಹಿಡಿದ ನಂತರ ಸಂಪೂರ್ಣ ಅವ್ಯವಸ್ಥೆಗೀಡಾಗಿರುವ ಅಫ್ಘಾನಿಸ್ತಾನದಲ್ಲಿ ಈಗ ಬಾಂಬ್ ಸ್ಫೋಟವಾಗಿದೆ. ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರವೊಂದರಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. 

blasts in Kabul Gurdwara 2 dead MEA monitoring situation akb
Author
Kabul, First Published Jun 18, 2022, 2:42 PM IST

ಕಾಬೂಲ್‌: ತಾಲಿಬಾನಿ ಉಗ್ರರು ಆಡಳಿತದ ಚುಕ್ಕಾಣಿ ಹಿಡಿದ ನಂತರ ಸಂಪೂರ್ಣ ಅವ್ಯವಸ್ಥೆಗೀಡಾಗಿರುವ ಅಫ್ಘಾನಿಸ್ತಾನದಲ್ಲಿ ಈಗ ಬಾಂಬ್ ಸ್ಫೋಟವಾಗಿದೆ. ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರವೊಂದರಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿ ಕರ್ತೆ ಪರ್ವಾನ್‌ ಗುರುದ್ವಾರದ (Gurdwara Karte Parwan) ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹಿಂದೆ  ಐಸಿಸ್ ಖೊರಾಸನ್ (ISIS Khorasan)ಕೈವಾಡವಿದೆ ಎಂದು ಶಂಕಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ಮೂಲಗಳ ಪ್ರಕಾರ ಗುರುದ್ವಾರದ ಸಂಪೂರ್ಣ ಆವರಣಕ್ಕೆ ಬೆಂಕಿ ಹಚ್ಚಲಾಗಿದೆ.

ದಾಳಿ ಕಾಬೂಲ್ ಕಾಲಮಾನ ಬೆಳಗ್ಗೆ 7:15ಕ್ಕೆ (ಭಾರತದ ಕಾಲಮಾನ 8.30ಕ್ಕೆ) ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ 60 ವರ್ಷದ ಸಾವಿಂದರ್ ಸಿಂಗ್ ಎಂಬ ವ್ಯಕ್ತಿ ಹಾಗೂ ಗುರುದ್ವಾರದ ಗಾರ್ಡ್‌ ಓರ್ವರು ಸಾವನ್ನಪ್ಪಿದ್ದಾರೆ. ಜೊತೆಗೆ ಮೂವರು ತಾಲಿಬಾನ್ ಸೈನಿಕರು ಗಾಯಗೊಂಡಿದ್ದಾರೆ. ಇಬ್ಬರು ಉಗ್ರರನ್ನು ತಾಲಿಬಾನಿ ಸೈನಿಕರು ಹೊಡೆದಟ್ಟಿದ್ದಾರೆ. ಗುರುದ್ವಾರದ ಒಳಗೆ 7 ರಿಂದ 8 ಜನ ಸಿಲುಕಿರುವ ಸಾಧ್ಯತೆ ಇದೆ . ಆದರೆ ಎಷ್ಟು ಜನ ಒಳಗಿದ್ದಾರೆ ಎಂಬ ಬಗ್ಗೆ ಖಚಿತತೆ ಇಲ್ಲ. ನಾನು ಗುರುದ್ವಾರದಿಂದ ಬಂದೂಕಿನ ಗುಂಡುಗಳು ಮತ್ತು ಸ್ಫೋಟಗಳನ್ನು ಕೇಳಿದೆ ಎಂದು ಸಿಖ್ ಸಮುದಾಯದ ನಾಯಕ ಗುರ್ನಾಮ್ ಸಿಂಗ್ (Gurnam Singh) ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದರು.

ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ: ನಾಲ್ವರು ಮೃತಪಟ್ಟಿರುವ ಸಾಧ್ಯತೆ

ವರದಿಗಳ ಪ್ರಕಾರ, 25 ರಿಂದ 30 ಅಫ್ಘಾನ್ ಹಿಂದೂಗಳು ಮತ್ತು ಸಿಖ್ಖರು ಗುರುದ್ವಾರದಲ್ಲಿ ಬೆಳಗಿನ ಪ್ರಾರ್ಥನೆಗೆ ಹಾಜರಾಗಿದ್ದರು. ಈ ವೇಳೆ ದಾಳಿಕೋರರು ಆವರಣವನ್ನು ಪ್ರವೇಶಿಸುತ್ತಿದ್ದಂತೆ 10 ರಿಂದ 15 ಜನರು ಅಲ್ಲಿಂದ ಓಡಿಹೋಗುವಲ್ಲಿ ಯಶಸ್ವಿಯಾದರು. ಉಳಿದವರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಅಥವಾ ಸತ್ತಿರಲುಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ (MLA Manjinder Singh Sirsa) ಅವರು ಗುರುದ್ವಾರ ಕರ್ತೆ ಪರ್ವಾನ್ ಅಧ್ಯಕ್ಷ ಗುರ್ನಾಮ್ ಸಿಂಗ್ (Gurnam Singh) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ಅಫ್ಘಾನಿಸ್ತಾನದಲ್ಲಿರುವ ಸಿಖ್ಖರಿಗೆ ಜಾಗತಿಕ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ. 

 

ಏತನ್ಮಧ್ಯೆ, ಘಟನೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆ ಬಿಡುಗಡೆ ಮಾಡಿದೆ. 'ಕಾಬೂಲ್‌ ನಗರದಲ್ಲಿರು ಪವಿತ್ರ ಗುರುದ್ವಾರದ ಮೇಲೆ ದಾಳಿಯ ಕುರಿತು ಹೊರಹೊಮ್ಮಿರುವ ವರದಿಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ನಾವು ಈ ಬಗ್ಗೆ ಬರುತ್ತಿರುವ ಬೆಳವಣಿಗೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಕಾಯುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ (Dr S Jaishankar) ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.

Ahmedabad Bomb Attack: 21 ಬಾಂಬ್.. 38 ಜನರಿಗೆ ಗಲ್ಲು..  ಯಾಸೀನ್ ಭಟ್ಕಳ ಜನ್ಮ ಜಾತಕ!

ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಕೂಡ ಘಟನೆಯ ಬಗ್ಗೆ ಪರಿಶೀಲಿಸುವಂತೆ ಎಂಇಎಗೆ ಒತ್ತಾಯಿಸಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಸಾಹಿಬ್‌ನಲ್ಲಿ ನಡೆದ ದಾಳಿಯ ಸುದ್ದಿಯನ್ನು ಕೇಳಿ ತೀವ್ರ ಕಳವಳಗೊಂಡಿದ್ದೇವೆ. ಆವರಣದೊಳಗೆ ಸಿಲುಕಿರುವ ಎಲ್ಲಾ ಭಕ್ತರು ಮತ್ತು ನಾಗರಿಕರ ಸುರಕ್ಷತೆಗಾಗಿ ವಹೆಗುರು ಜಿ ಅವರನ್ನು ಪ್ರಾರ್ಥಿಸುತ್ತೇನೆ. ಈ ವಿಷಯವನ್ನು ಪರಿಶೀಲಿಸಲು ಎಂಇಎಗೆ ಒತ್ತಾಯಿಸುತ್ತಿದ್ದೇನೆ. ಎಲ್ಲಾ ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ. 

ಇಂಡಿಯನ್ ವರ್ಲ್ಡ್ ಫೋರಂ ಮುಖ್ಯಸ್ಥ ಪುನೀತ್ ಸಿಂಗ್ ಚಾಂಧೋಕ್ (Puneet Singh Chandhok)ನಾನು ಗುರುದ್ವಾರ ಕಾರ್ತೆ ಪರ್ವಾನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಅವರೊಂದಿಗೆ ಮಾತನಾಡಿದಾಗ ಅವರು ಅಳುತ್ತಿದ್ದರು ಎಂದರು. ಯಾವುದೇ ವಿಳಂಬ ಮಾಡದೆ ತಕ್ಷಣವೇ ಆಫ್ಘನ್ ಅಲ್ಪಸಂಖ್ಯಾತರನ್ನು ಅಲ್ಲಿಂದ ಭಾರತಕ್ಕೆ ಕರೆಸಿಕೊಳ್ಳುವಂತೆ ಪುನೀತ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ಇ-ವೀಸಾಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಪುನೀತ್ ಹೇಳಿದರು. ಉಗ್ರರು ಬಹುಶಃ ಐಸಿಸ್‌ಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
 

Follow Us:
Download App:
  • android
  • ios