ಉತ್ತರ ಪ್ರದೇಶದಲ್ಲಿ ಬೆಕ್ಕಿನ ಸಾವಿನಿಂದ ನೊಂದ 32 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಚ್ಛೇದನದ ನಂತರ ಬೆಕ್ಕಿನೊಂದಿಗೆ ಒಡನಾಟ ಹೊಂದಿದ್ದ ಆಕೆ, ಬೆಕ್ಕಿನ ಅಗಲಿಕೆಯನ್ನು ತಡೆಯಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ತಾವು ಪ್ರೀತಿಸುವ ಮನುಷ್ಯರ ಸಾವುಗಳಿಂದ ಸಾಕುಪ್ರಾಣಿಗಳು ಹೇಗೆ ದುಃಖಕ್ಕೀಡಾಗಿ ಆಹಾರವನ್ನು ತ್ಯಜಿಸಿ ಖಿನ್ನತೆಗೆ ಜಾರುತ್ತವೆಯೋ ಹಾಗೆಯೇ ಮನುಷ್ಯರಿಗೂ ಕೂಡ ಸಾಕು ಪ್ರಾಣಿಗಳ ಸಾವನ್ನು ಅರಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ಸಾಕು ನಾಯಿಯ ಸಾವಿನಿಂದ ನೊಂದು ಯುವಕನೋರ್ವ ಸಾವಿಗೆ ಶರಣಾದ ಘಟನೆ ನಡೆದಿತ್ತು. ಈಗ ಈ ಘಟನೆ ನೆನಪಿನಾಳದಿಂದ ಮಾಸುವ ಮೊದಲೇ ಉತ್ತರ ಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿ 32 ವರ್ಷದ ಮಹಿಳೆಯೊಬ್ಬರು ಸಾಕು ಬೆಕ್ಕಿನ ಸಾವಿನ ಆಘಾತದಿಂದ ಹೊರಬರಲಾಗದೇ ತಮ್ಮ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ.
ಹೀಗೆ ಸಾವಿಗೆ ಶರಣಾದ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದೆ. ತನ್ನ ಸಾಕು ಬೆಕ್ಕಿನ ಸಾವಿನ ಆಘಾತದಿಂದ ಹೊರಬರಲಾಗದ ಆಕೆ ಈ ರೀತಿ ಆಘಾತಕಾರಿ ನಿರ್ಧಾರ ಮಾಡಿದ್ದಾರೆ. ಬೆಕ್ಕು ಸಾವಿಗೀಡಾದ ನಂತರ ಅವರು ಈ ಬೆಕ್ಕಿನ ಜೀವ ಮರಳಬಹುದು ಎಂಬ ಭ್ರಮೆಯಲ್ಲಿ ಬೆಕ್ಕಿನ ಶವವನ್ನು ತನ್ನ ಬಳಿಯೇ ಇರಿಸಿಕೊಂಡಿದ್ದರು. ಆದರೆ ಮೂರನೇ ದಿನ ಅವರು ತಮ್ಮ ಜೀವವನ್ನೇ ಅಂತ್ಯ ಮಾಡಿದ್ದಾರೆ.
ವಿಚ್ಚೇದನದ ನಂತರ ಬೆಕ್ಕಿನೊಂದಿಗೆ ಬಾಂಧವ್ಯ
ಪೂಜಾ ಆರು ವರ್ಷದ ಹಿಂದೆ ವಿಚ್ಚೇದನ ಪಡೆದಿದ್ದು, ಡಿವೋರ್ಸ್ ನಂತರ ತನ್ನ ತಾಯಿ ಗಜ್ರಾದೇವಿ ಅವರ ಜೊತೆ ವಾಸ ಮಾಡುತ್ತಿದ್ದರು. ಮದುವೆ ಮುರಿದು ವಿಚ್ಚೇದನವೂ ಆದ ನಂತರ ಪೂಜಾ ಬಹಳ ಒಂಟಿತನ ಅನುಭವಿಸುತ್ತಿದ್ದರು. ನಂತರ ಸುಧಾರಿಸಿಕೊಂಡ ಪೂಜಾ ಬೆಕ್ಕಿನೊಂದಿಗೆ ಒಡನಾಟ ನಡೆಸಿಕೊಂಡು ಅದರ ಲಾಲನೆ ಪಾಲನೆ ಮಾಡುತ್ತಾ ಒಂಟಿತನದಿಂದ ಹೊರಬಂದಿದ್ದರು. ಆದರೆ ಕಳೆದ ಗುರುವಾರ ಆಕೆಯ ಪ್ರೀತಿಯ ಬೆಕ್ಕು ಕೂಡ ಆಕೆಯನ್ನು ಬಿಟ್ಟು ಹೊರಟಿದೆ. ಇದು ಅವರನ್ನು ಮತ್ತಷ್ಟು ಆಘಾತಕ್ಕೀಡಾಗುವಂತೆ ಮಾಡಿದೆ.
ಮಹಾ ಕುಂಭಮೇಳದಲ್ಲಿ ನಾಯಿ ಪವಿತ್ರ ಸ್ನಾನ ಮಾಡಿಸಿದ ಮಾಲೀಕ! ವಿಡಿಯೋ ವೈರಲ್
ಬೆಕ್ಕಿನ ಶವ ಮಣ್ಣು ಮಾಡಲು ಬಿಡದ ಪೂಜಾ
ಬೆಕ್ಕಿನ ಸಾವಿನ ನಂತರ ಕುಟುಂಬದವರು ಎಷ್ಟು ಹೇಳಿದರು ಪೂಜಾ ಅದನ್ನು ಮಣ್ಣು ಮಾಡಲು ಬಿಟ್ಟಿರಲಿಲ್ಲ, ಬದಲಾಗಿ ಅದು ಮರಳಿ ಬದುಕುವುದು ಎಂದೇ ಹೇಳಿಕೊಂಡಿದ್ದಳು. ಮೃತ ಬೆಕ್ಕನ್ನು ಕಳುಹಿಸಿಕೊಡಲು ಇಷ್ಟವಿಲ್ಲದೇ ಬೆಕ್ಕಿನ ನಿರ್ಜೀವ ದೇಹಕ್ಕೆ ಅಂಟಿಕೊಂಡೆ ಎರಡು ದಿನ ಕಳೆದಿದ್ದಳು. ಆಕೆಯ ತಾಯಿ ಹಾಗೂ ಬಂಧುಗಳು ಆಕೆಯನ್ನು ಸಮಾಧಾನ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಆಕೆ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದಳು.
ಇದಾದ ನಂತರ ಶನಿವಾರ ಮಧ್ಯಾಹ್ನದ ನಂತರ ಪೂಜಾ ತನ್ನ ಮನೆಯ ಮೂರನೇ ಮಹಡಿಯಲ್ಲಿದ್ದ ಬೆಡ್ರೂಮ್ನಲ್ಲಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾಳೆ. ರಾತ್ರಿ 8 ಗಂಟೆಯ ವೇಳೆಗೆ ಆಕೆಯ ತಾಯಿ ಆಕೆ ಏನು ಮಾಡುತ್ತಿದ್ದಾಳೆ ಎಂದು ಗಮನಿಸಲು ಹೋದಾಗ ಆಕೆ ಸಾವನ್ನಪ್ಪಿರುವುದು ಕಂಡು ಬಂದಿದೆ. ಆಕೆ ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದರೆ, ಆಗಲೂ ಪಕ್ಕದಲ್ಲೇ ಬೆಕ್ಕಿನ ಶವವನ್ನು ಇರಿಸಿಕೊಂಡಿದ್ದಳು. ಇದರಿಂದ ಆಘಾತಗೊಂಡ ಗಜ್ರಾದೇವಿ ಜೋರಾಗಿ ಬೊಬ್ಬೆ ಹೊಡೆದಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಶ್ವಾನದ ಅದ್ದೂರಿ ಹುಟ್ಟುಹಬ್ಬ: ಪಾರ್ಟಿಗೆ 5 ಲಕ್ಷ ವೆಚ್ಚ ಮಾಡಿದ ಮಹಿಳೆ
