ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಹೆಡ್ ನಿರುಪಮಾಗೆ ಅಂತಾರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ!
ಇಂಟರ್ನ್ಯಾಷನಲ್ ವುಮೆನ್ ಅಚೀವರ್ಸ್ ಮತ್ತು ಯಂಗ್ ಸ್ಟಾರ್ ಅಚೀವರ್ಸ್ ಅವಾರ್ಡ್- 2023 ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಹೆಡ್ ನಿರುಪಮಾ ಭಾಜನರಾಗಿದ್ದಾರೆ. ಇಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಮತ್ತು ಕಬ್ಬನ್ ಪಾರ್ಕ್ ವಾಕರ್ಸ್ ಪೋರಂ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಂಗಳೂರು (ಅ.8) : ಇಂಟರ್ನ್ಯಾಷನಲ್ ವುಮೆನ್ ಅಚೀವರ್ಸ್ ಮತ್ತು ಯಂಗ್ ಸ್ಟಾರ್ ಅಚೀವರ್ಸ್ ಅವಾರ್ಡ್- 2023 ಪ್ರಶಸ್ತಿಗೆ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಹೆಡ್ ನಿರುಪಮಾ ಭಾಜನರಾಗಿದ್ದಾರೆ. ಇಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್(Cubbon Park Walkers Association) ಮತ್ತು ಕಬ್ಬನ್ ಪಾರ್ಕ್ ವಾಕರ್ಸ್ ಪೋರಂ(Cubbon Park Walkers Forum) ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕಿಯರಿಗೆ ಪ್ರಶಸ್ತಿ ವಿತರಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾಧಕಿಯರಿಗೆ ಪ್ರಶಸ್ತಿ ವಿತರಿಸಿದರು.
ಕಳೆದ ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಹೆಡ್ ನಿರುಪಮಾ ಕೆಎಸ್ ಮಾತನಾಡಿ, ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನೇ ಕೊಡೋಣ ಎಂದರು.
ಡಿಜಿಟಲ್ ಮಾಧ್ಯಮದವರು ಅಂದ್ರೆನೇ ಜನರು ಒಂದು ರೀತಿ ನೋಡುವ ಕಾಲವೊಂದಿತ್ತು. ಇತ್ತೀಚಿನ ದಿನಗಳಲ್ಲಿ ಈ ದೃಷ್ಟಿ ಬದಲಾಗಿದೆ. ಕಳೆದ 20 ವರ್ಷಗಳಿಂದ ನಾನು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ಸುದೀರ್ಘ ಅವಧಿ ಮಾಧ್ಯಮ ಕ್ಷೇತ್ರದಲ್ಲಿದ್ದರೂ ಬಹಳಷ್ಟು ಜನರಿಗೆ ಡೆಸ್ಕ್ನಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುವ ನಾನು ಯಾರು ಎನ್ನುವುದೇ ಗೊತ್ತಿಲ್ಲ. ನಾವಾಯಿತು, ನಮ್ಮ ಕೆಲಸವಾಯಿತು ಎನ್ನುವ ಹಾಗೆ ಕೆಲಸ ಮಾಡೋ ನಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಎಲ್ಲರೂ ತಮ್ಮದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಪಿಎಚ್ಡಿ ಪಡೆದಿರುವ ಸಾಧಕಿ ಭಾರತಿ ಅವರ ಜೊತೆ ಸ್ಟೇಜ್ ಹಂಚಿಕೊಂಡಿದ್ದು ತುಂಬಾ ಖುಷಿ ಕೊಟ್ಟ ಸಂಗತಿ ಎಂದರು.
Mothers Day 2023: ಬದುಕಿಗೆ ಸ್ಫೂರ್ತಿದಾಯಕ, ಭಾರತೀಯ ಈ ತಾಯಂದಿರು
ವಿವಿಧ ಕ್ಷೇತ್ರದಲ್ಲಿನ ಸಾಧಕಿಯರು ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಪ್ರಶಸ್ತಿ ಪಡೆದ ಇಥರ ಮಹಿಳಾ ಸಾಧಕಿಯರ ಹೆಸರು ಇಲ್ಲಿದೆ.
ಪ್ರಶಸ್ತಿ ಪಡೆದ ಮಹಿಳಾ ಸಾಧಕಿಯರು:
ಗಾಯಕಿ ಸಂಗೀತ ಕಟ್ಟಿ, ವೈದ್ಯೆ ಸುಜಾತ ರಾಥೋಡ್, ಪತ್ರಕರ್ತೆ ಪದ್ಮ ಶಿವಮೊಗ್ಗ, ಡಿಜಿಟಲ್ ಕ್ಷೇತ್ರದಿಂದ ಏಷ್ಯಾನೆಟ್ ಸುವರ್ಣನ್ಯೂಸ್ ನ ಡಿಜಿಟಲ್ ಹೆಡ್ ನಿರುಪಮಾ ಕೆ.ಎಸ್, ನಿರೂಪಕಿ ದಿವ್ಯ ಆಲೂರು, ಏಷ್ಯನ್ ಗೇಮ್ಸ್ ನಲ್ಲಿ ಹಾಕಿ ಆಟಗಾರ್ತಿ ಅಂಕಿತ, ಶಿಕ್ಷಣ ಕ್ಷೇತದಲ್ಲಿ ಆಂದ್ರಪ್ರದೇಶದಲ್ಲಿ ಪಿಹೆಚ್ಡಿ ಪಡೆದ ಕೂಲಿ ಕಾರ್ಮಿಕೆ ಭಾರತಿ, ನೃತ್ಯ ಕ್ಷೇತ್ರದಲ್ಲಿ ಲಾಸ್ಯ ಅವರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.
ಜಗತ್ತೇ ಗೌರವಿಸುವ ಭಾರತದ ಮಹಿಳಾ ಸಾಧಕಿಯರಿವರು
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಮಾಡಿದ್ದು ಖುಷಿ ನೀಡಿದೆ. ಸಾಧಕಿಯರನ್ನು ಹುಡುಕಿ ಸನ್ಮಾನ ಮಾಡಿದಕ್ಕೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಎಸ್ ಉಮೇಶ್ ಅವರಿಗೂ ಧನ್ಯವಾದಗಳು. ಪ್ರಶಸ್ತಿ ಪಡೆದ ಎಲ್ಲರೂ ನಿಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಪ್ರಶಸ್ತಿ ಪಡೆಯುವಂತಾಗಲಿ ಶುಭ ಹಾರೈಸಿದರು.