Ketan Agarwal murder case: ಸಾಕ್ಷ್ಯ ಸಂಗ್ರಹಕ್ಕಾಗಿ ಪುಣೆ ಪೊಲೀಸರು, ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಸಿಯಾ ಗೋಯಲ್ಳನ್ನು ಆಕೆಯ ನಿವಾಸಕ್ಕೆ ಕರೆದೊಯ್ದಿದ್ದಾಗ, ಅಲ್ಲಿ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳತ್ತ ಸಿಯಾ ಮಧ್ಯದ ಬೆರಳು (Middle Finger) ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾಳೆ.
ಭಾವಿ ಪತಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಸಿಯಾ ಗೋಯಲ್ ಈಗ ಪತ್ರಕರ್ತರ ಮುಂದೆ ಅಸಭ್ಯವಾಗಿ ನಡೆದುಕೊಳ್ಳುವ ಮೂಲಕ ಮತ್ತೆ ತನ್ನ ಸೊಕ್ಕನ್ನು ಮುಂದುವರಿಸಿದ್ದಾಳೆ. ಪುಣೆ ಗ್ರಾಮಾಂತರ ಪೊಲೀಸರು ಆಕೆಯನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಆಕೆಯ ನಿವಾಸಕ್ಕೆ ಕರೆದೊಯ್ದಾಗ, ಅಲ್ಲಿ ಕಾದಿದ್ದ ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ಸಿಯಾ ಗೋಯಲ್ ಮಧ್ಯದ ಬೆರಳು (Middle Finger) ತೋರಿಸಿ ವಿಕೃತವಾಗಿ ವರ್ತಿಸಿದ್ದು, ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.
ಮನೆಯಲ್ಲಿ ಸಾಕ್ಷ್ಯ ಸಂಗ್ರಹ ಮತ್ತು ಸಿಯಾ ವರ್ತನೆ
ಗುರುವಾರದಂದು ಪುಣೆ ಗ್ರಾಮಾಂತರ ಪೊಲೀಸರು ಸಿಯಾ ಗೋಯಲ್ ಪತ್ತೆ ಹಚ್ಚಿದ್ದ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲು ಆಕೆಯನ್ನು ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿರುವ ಆಕೆಯ ನಿವಾಸಕ್ಕೆ ಕರೆದೊಯ್ದಿದ್ದರು. ತನಿಖೆಯ ವೇಳೆ, ಕೇತನ್ ಸಾವನ್ನಪ್ಪಿದ ದಿನ ಸಿಯಾ ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯ ಶೋಧನೆ ಮುಗಿಸಿ ಪೊಲೀಸರು ಆಕೆಯನ್ನು ಹೊರಗೆ ಕರೆತರುತ್ತಿದ್ದಾಗ, ಮನೆಯ ಮುಂದೆ ಕಾದಿದ್ದ ಪತ್ರಕರ್ತರಿಗೆ ಸಿಯಾ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ಆಗುತ್ತಿವೆ ಸಾಲು ಸಾಲು ವಿಡಿಯೋಗಳು
ಸಿಯಾ ಬಂಧನವಾದಾಗಿನಿಂದ ಆಕೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹೊರಬರುತ್ತಿವೆ.
ಪಬ್ ವಿಡಿಯೋ: ನೈಟ್ ಕ್ಲಬ್ ಒಂದರಲ್ಲಿ ಬಿಯರ್ ಹಿಡಿದು ಫೋನ್ನಲ್ಲಿ ಜಗಳವಾಡುತ್ತಾ, "ಮೊದಲು ಚೀಟ್ ಮಾಡ್ತಾನೆ, ಆಮೇಲೆ ಕಾಲ್ ಮಾಡ್ತಾನೆ" ಎಂದು ಕಿರುಚುತ್ತಿರುವ ಹಳೆಯ ವಿಡಿಯೋ ವೈರಲ್ ಆಗಿದೆ.
ಕೆಫೆ ಭೇಟಿ: ಕೇತನ್ ಅಗರ್ವಾಲ್ ಸಾವಿಗೂ ಕೆಲವು ದಿನಗಳ ಮೊದಲು ಸಿಯಾ ತನ್ನ ಪ್ರಿಯಕರ ಹಾಗೂ ಈ ಪ್ರಕರಣದ ಸಹ ಆರೋಪಿ ಚೇತನ್ ಚೌಧರಿಯನ್ನು ಕೆಫೆಯೊಂದರಲ್ಲಿ ತಡರಾತ್ರಿ ಭೇಟಿಯಾಗಿದ್ದ ವಿಡಿಯೋ ಕೂಡ ಲಭ್ಯವಾಗಿದೆ.
ಕ್ರಿಕೆಟ್ ಪಂದ್ಯ: ಘಟನೆಗೂ ಮೊದಲು ಸಿಯಾ ಮತ್ತು ಚೇತನ್ ಕ್ರಿಕೆಟ್ ಪಂದ್ಯವೊಂದನ್ನು ಒಟ್ಟಾಗಿ ವೀಕ್ಷಿಸುತ್ತಾ ಕುಳಿತಿರುವ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಹಿನ್ನೆಲೆ
26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಜೂನ್ 18 ರಂದು ಲೋಹಗಢ ಕೋಟೆಯ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಅಪಘಾತವೆಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ಆಳವಾದ ತನಿಖೆಯ ನಂತರ ಇದೊಂದು ವ್ಯವಸ್ಥಿತ ಕೊಲೆ ಎಂದು ಬಯಲಿಗೆ ಬಂದಿದೆ. ಕೇತನ್ನ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ನನ್ನು ಸಾಯಿಸಲು ಸಂಚು ರೂಪಿಸಿದ್ದರು. ಈ ಇಬ್ಬರು ಆರೋಪಿಗಳು ಕೇತನ್ನನ್ನು ಪ್ರಪಾತಕ್ಕೆ ತಳ್ಳುವ ಮುನ್ನ ಮತ್ತೊಂದು ಬೆಟ್ಟದ ಮೇಲೆ ಹೇಗೆ ತಳ್ಳಬೇಕು ಎಂಬುದರ ಬಗ್ಗೆ ರಿಹರ್ಸಲ್ (ಅಭ್ಯಾಸ) ಕೂಡ ನಡೆಸಿದ್ದರು ಎಂಬ ಆಘಾತಕಾರಿ ಸತ್ಯ ಹೊರಬಂದಿದೆ.
ಪ್ರಸ್ತುತ ಪೊಲೀಸರು ಆರೋಪಿಗಳ ಫೋನ್ ಕರೆಗಳ ದಾಖಲೆ, ಡಿಲೀಟ್ ಆಗಿರುವ ಚಾಟ್ಗಳು ಮತ್ತು ಲೊಕೇಶನ್ ಡೇಟಾಗಳನ್ನು ಕಲೆಹಾಕುತ್ತಿದ್ದಾರೆ. ಘಟನೆಯ ಸಮಯದಲ್ಲಿ ಯಾರೂ ಪ್ರತ್ಯಕ್ಷದರ್ಶಿಗಳು ಇಲ್ಲದ ಕಾರಣ, ಕೊಲೆ ಮಾಡಿದ್ದು ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ಆರೋಪಿಗಳಿಗೆ ಸುಳ್ಳು ಪತ್ತೆ ಪರೀಕ್ಷೆ (Polygraph Test) ಮತ್ತು ಗೈಟ್ ಅನಾಲಿಸಿಸ್ ನಡೆಸಲು ಅನುಮತಿ ಕೋರಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ

