Ketan Agarwal murder: ಪಬ್ವೊಂದರಲ್ಲಿ ಕುಳಿತು ಯಾರಿಗೋ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, 'ಮೊದಲು ನನಗೆ ವಂಚಿಸುತ್ತಾನೆ, ಆಮೇಲೆ ಫೋನ್ ಮಾಡುತ್ತಾನೆ' ಎಂದು ಸಿಯಾ ಆಕ್ರೋಶ ಹೊರಹಾಕುತ್ತಿರುವ ದೃಶ್ಯ ಈ ಕೊಲೆ ಪ್ರಕರಣಕ್ಕೆ ಈಗ ಹೊಸ ಆಯಾಮ ನೀಡಿದೆ.
ಭಾವಿ ಪತಿ ಕೇತನ್ ಅಗರ್ವಾಲ್ ಹ*ತ್ಯೆ ಪ್ರಕರಣದ ಮುಖ್ಯ ಆರೋಪಿ ಸಿಯಾ ಗೋಯಲ್ ಅವರ ಹಳೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಬ್ವೊಂದರಲ್ಲಿ ಬಿಯರ್ ಬಾಟಲಿ ಹಿಡಿದು ಆಕ್ರೋಶದಿಂದ ಫೋನ್ನಲ್ಲಿ ಮಾತನಾಡುತ್ತಿರುವ ಸಿಯಾಳ ಈ ದೃಶ್ಯವು ತನಿಖೆಗೆ ಹೊಸ ತಿರುವು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿಡಿಯೋದಲ್ಲೇನಿದೆ?
ಕೇವಲ 15 ಸೆಕೆಂಡುಗಳ ಈ ಹಳೆಯ ವಿಡಿಯೋ ಕ್ಲಿಪ್ನಲ್ಲಿ, ಸಿಯಾ ಪಬ್ನ ಜೋರಾದ ಸಂಗೀತದ ನಡುವೆ ಫೋನ್ ಕರೆಯನ್ನು ಸ್ವೀಕರಿಸುವುದು ಕಂಡುಬರುತ್ತದೆ. ಫೋನ್ನಲ್ಲಿ ಮಾತನಾಡುತ್ತಾ ಅವಳು ಅತಿ ಹೆಚ್ಚು ಆಕ್ರೋಶ ವ್ಯಕ್ತಪಡಿಸುತ್ತಾಳೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾಳೆ. ವಿಡಿಯೋದಲ್ಲಿ ಅವಳು, "ಮೊದಲು ವಂಚಿಸುತ್ತಾನೆ (Cheat), ಆಮೇಲೆ ನನಗೆ ಫೋನ್ ಮಾಡುತ್ತಾನೆ" ಎಂದು ಕಿರುಚುತ್ತಿರುವುದು ಕೇಳಿಸುತ್ತದೆ. ಸಿಯಾ ಯಾರ ಬಗ್ಗೆ ಈ ಮಾತುಗಳನ್ನು ಹೇಳುತ್ತಿದ್ದಳು ಎಂಬುದು ಈಗ ತನಿಖೆಯ ಪ್ರಮುಖ ವಿಷಯವಾಗಿದೆ.
ಪ್ರಕರಣದ ಹಿನ್ನೆಲೆ
ಜೂನ್ 18 ರಂದು ಪುಣೆಯ ಲೋಹಗಢ ಕೋಟೆಯ ಪ್ರಪಾತಕ್ಕೆ ಕೇತನ್ ಅಗರ್ವಾಲ್ನನ್ನು ತಳ್ಳಿ ಕೊಲೆ ಮಾಡಿದ ಆರೋಪ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಮೇಲಿದೆ. 26 ವರ್ಷದ ಕೇತನ್ ಮತ್ತು ಸಿಯಾಳ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ಈ ವರ್ಷದ ನವೆಂಬರ್ನಲ್ಲಿ ಜೈಪುರದ ಅರಮನೆಯೊಂದರಲ್ಲಿ 17 ಕೋಟಿ ರೂಪಾಯಿ ವೆಚ್ಚದ ಅದ್ಧೂರಿ ವಿವಾಹ ನಿಶ್ಚಯವಾಗಿತ್ತು. ಮದುವೆಗೆ ಅತಿಥಿಗಳನ್ನು ಕರೆದೊಯ್ಯಲು ಎರಡು ಖಾಸಗಿ ವಿಮಾನಗಳನ್ನೂ ಬುಕ್ ಮಾಡಲಾಗಿತ್ತು.
ಹ*ತ್ಯೆಯ ರಿಹರ್ಸಲ್ ಮಾಡಿದ್ದ ಆರೋಪಿಗಳು
ಪೊಲೀಸ್ ತನಿಖೆಯ ವೇಳೆ ಬೆಚ್ಚಿಬೀಳಿಸುವ ಸತ್ಯವೊಂದು ಹೊರಬಂದಿದೆ. ಸಿಯಾ ಮತ್ತು ಚೇತನ್ ಚೌಧರಿ, ಕೇತನ್ನನ್ನು ಪ್ರಪಾತಕ್ಕೆ ತಳ್ಳುವುದು ಹೇಗೆ ಎಂಬುದನ್ನು ಪುಣೆಯ ಲುಲ್ಲಾ ನಗರದ ಬಳಿಯ ಬಯಲು ಪ್ರದೇಶದಲ್ಲಿ ಮೊದಲೇ ರಿಹರ್ಸಲ್ (ಅಭ್ಯಾಸ) ಮಾಡಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಸಿಯಾಳನ್ನು ಆ ಜಾಗಕ್ಕೆ ಕರೆದೊಯ್ದು ಗುರುತು ಪತ್ತೆ ಹಚ್ಚಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆಗೆ ಸಿದ್ಧ
ಪ್ರಸ್ತುತ ತನಿಖೆಯ ಭಾಗವಾಗಿ ಸಿಯಾ ಗೋಯಲ್ ಸುಳ್ಳು ಪತ್ತೆ ಪರೀಕ್ಷೆಗೆ (Polygraph Test) ಸಮ್ಮತಿಸಿದ್ದಾಳೆ. ಘಟನೆಯ ಸಮಯದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ ಮತ್ತು ಇಬ್ಬರು ಆರೋಪಿಗಳು ಕೊಲೆಯ ಜವಾಬ್ದಾರಿಯನ್ನು ಪರಸ್ಪರರ ಮೇಲೆ ಹೊರಿಸುತ್ತಿದ್ದಾರೆ. ಆದ್ದರಿಂದ, ನಿಜವಾಗಿ ಕೇತನ್ನನ್ನು ಪ್ರಪಾತಕ್ಕೆ ತಳ್ಳಿದ್ದು ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ಈ ಪರೀಕ್ಷೆ ನಡೆಸಲಿದ್ದಾರೆ.
ಮತ್ತೊಂದೆಡೆ, ಸಿಯಾ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಿಯರ್ ಕೇಳಿದ್ದಳು ಎಂಬ ವರದಿಗಳನ್ನು ಆಕೆಯ ತಾಯಿ ಪೂಜಾ ಗೋಯಲ್ ನಿರಾಕರಿಸಿದ್ದಾರೆ, ಇವು ಕೇವಲ ಮಾಧ್ಯಮಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ಅವರು ಕಿಡಿಕಾರಿದ್ದಾರೆ.

