ಪಾರ್ಶ್ವವಾಯು ಪೀಡಿತ ವೃದ್ಧರೊಬ್ಬರು ಸುಮಾರು ನಾಲ್ಕು ಗಂಟೆಗಳ ಕಾಲ ತಮ್ಮ ಕೈಗೆ ಸುತ್ತಿಕೊಂಡಿದ್ದ ವಿಷಕಾರಿ ಹಾವಿನೊಂದಿಗೆ ಸಾವಿನ ಮನೆಯಲ್ಲಿದ್ದರು. ಪಾರ್ಶ್ವವಾಯುವಿನಿಂದಾಗಿ ನಿಶ್ಚಲರಾಗಿದ್ದೇ ಅವರ ಪ್ರಾಣ ಉಳಿಯಿತೇ, ಇಲ್ಲವೇ ಎಂಬುದನ್ನು ನೀವೇ ಓದಿ.

ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗದು. ಆದರೆ, ಸಾವು ಕಣ್ಣೆದುರೇ ಇದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆಗಳು ವಿರಳ. ಅಂತಹದ್ದೇ ಒಂದು ಅಸಾಮಾನ್ಯ ಮತ್ತು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಪಾರ್ಶ್ವವಾಯು ಪೀಡಿತ ವೃದ್ಧರೊಬ್ಬರು ಸುಮಾರು ನಾಲ್ಕು ಗಂಟೆಗಳ ಕಾಲ ವಿಷಕಾರಿ ಹಾವಿನೊಂದಿಗೆ ಸಾವಿನ ಮನೆಯ ಬಾಗಿಲಲ್ಲಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಿಟಕಿ ಮೂಲಕ ನುಗ್ಗಿದ ಸಾವು:

ಒಡಿಶಾದ ಬೌಧ್ ಜಿಲ್ಲೆಯ ಅಡೇನಿಗಡ್ ಗ್ರಾಮದ ಕೃಷ್ಣ ಚಂದ್ರ ಸಾಹು ಎಂಬ ವೃದ್ಧರು ಕಳೆದ ರಾತ್ರಿ ತಮ್ಮ ಕೋಣೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಕೋಣೆಯ ಕಿಟಕಿ ತೆರೆದಿದ್ದರಿಂದ ಅದರ ಮೂಲಕ ನುಗ್ಗಿದ ವಿಷಕಾರಿ ಹಾವೊಂದು ನೇರವಾಗಿ ಸಾಹು ಅವರ ಹಾಸಿಗೆಗೆ ಬಂದಿದೆ. ನಿದ್ದೆಯಲ್ಲಿದ್ದ ಅವರಿಗೆ ತಮ್ಮ ದೇಹದ ಮೇಲೆ ಯಾವುದೋ ವಸ್ತು ಹರಿದಾಡಿದ ಅನುಭವವಾಗಿದೆ. ಕಣ್ಣು ಬಿಟ್ಟು ನೋಡಿದಾಗ ಕಂಡ ದೃಶ್ಯ ಅವರ ಎದೆಯನ್ನು ನಡುಗಿಸಿದೆ.

ಚಲಿಸಲಾಗದ ಅಸಹಾಯಕತೆ, ಕೈಗೆ ಸುತ್ತಿದ ಹಾವು:

ಕೃಷ್ಣ ಚಂದ್ರ ಅವರಿಗೆ ಕೆಲ ಕಾಲದ ಹಿಂದೆ ಪಾರ್ಶ್ವವಾಯು (Paralysis) ತಗುಲಿದ್ದರಿಂದ ಅವರಿಗೆ ಸರಿಯಾಗಿ ಕೈಕಾಲು ಅಲುಗಾಡಿಸಲು ಅಥವಾ ಸಹಾಯಕ್ಕಾಗಿ ಜೋರಾಗಿ ಕೂಗಲು ಸಾಧ್ಯವಾಗಲಿಲ್ಲ. ಅವರು ಭಯದಿಂದ ಸ್ವಲ್ಪ ಪಕ್ಕಕ್ಕೆ ಸರಿಯಲು ಯತ್ನಿಸಿದಾಗ, ಹಾವು ಅವರ ಒಂದು ಕೈಗೆ ಬಿಗಿಯಾಗಿ ಸುತ್ತಿಕೊಂಡಿದೆ. ಹಾವಿನ ಉಳಿದ ಭಾಗ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಇತ್ತು. ಒಂದು ವೇಳೆ ಅವರು ಜೋರಾಗಿ ಅಲುಗಾಡಿದ್ದರೆ ಅಥವಾ ಕೂಗಿದ್ದರೆ ಹಾವು ಕಚ್ಚುವುದು ಖಚಿತವಾಗಿತ್ತು. ಆದರೆ ಸಾಹು ಅವರು ಸಾವನ್ನು ಹತ್ತಿರದಿಂದ ಕಂಡರೂ ಧೈರ್ಯಗುಂದದೆ, ಉಸಿರು ಬಿಗಿಹಿಡಿದು ನಾಲ್ಕು ಗಂಟೆಗಳ ಕಾಲ ಮೂರ್ತಿಯಂತೆ ನಿಶ್ಚಲವಾಗಿ ಮಲಗಿದ್ದರು.

ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ದ ಮನೆಯವರು:

ಬೆಳಗ್ಗೆ ಮನೆಯವರು ಕೋಣೆಗೆ ಬಂದಾಗ ಕಂಡ ದೃಶ್ಯ ಅವರನ್ನು ದಂಗಾಗಿಸಿದೆ. ಸಾಹು ಅವರ ಕೈಗೆ ಮತ್ತು ಕುರ್ಚಿಗೆ ಹಾವು ಸುತ್ತಿಕೊಂಡಿರುವುದನ್ನು ಕಂಡು ಅವರು ಕಿರುಚುವ ಬದಲು ಸಂಯಮದಿಂದ ವರ್ತಿಸಿದರು. ಹಾವನ್ನು ಕೆಣಕಿದರೆ ಸಾಹು ಅವರಿಗೆ ಕಚ್ಚಬಹುದು ಎಂದು ಅರಿತ ಮನೆಯವರು, ಅತ್ಯಂತ ಜಾಗರೂಕತೆಯಿಂದ ಹಾವಿಗೆ ಯಾವುದೇ ತೊಂದರೆಯಾಗದಂತೆ ಅದನ್ನು ಸಾಹು ಅವರಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಒಂದೇ ಒಂದು ಕಡಿತವಿಲ್ಲದೆ ಪ್ರಾಣಾಪಾಯದಿಂದ ಮುಕ್ತಿ:

ಗಂಟೆಗಟ್ಟಲೆ ವಿಷಕಾರಿ ಹಾವಿನ ಹಿಡಿತದಲ್ಲಿದ್ದರೂ, ವೃದ್ಧರಿಗೆ ಒಂದೇ ಒಂದು ಕಡಿತವೂ ಆಗಿಲ್ಲ ಎಂಬುದು ವೈದ್ಯಲೋಕವನ್ನೇ ಬೆರಗುಗೊಳಿಸಿದೆ. ಸಾಮಾನ್ಯವಾಗಿ ಹಾವುಗಳು ಅಲುಗಾಡುವ ವಸ್ತುಗಳ ಮೇಲೆ ಆಕ್ರಮಣ ಮಾಡುತ್ತವೆ. ಆದರೆ ಸಾಹು ಅವರು ಪಾರ್ಶ್ವವಾಯುವಿನಿಂದಾಗಿ ನಿಶ್ಚಲವಾಗಿದ್ದೇ ಅವರ ಪ್ರಾಣ ಉಳಿಸಲು ಕಾರಣವಾಯಿತು ಎಂದು ಶಂಕಿಸಲಾಗಿದೆ. ಸದ್ಯ ಸಾಹು ಅವರು ದೈಹಿಕವಾಗಿ ಆರೋಗ್ಯವಾಗಿದ್ದರೂ, ಕಳೆದ ಆ ನಾಲ್ಕು ಗಂಟೆಗಳ ಭಯಾನಕ ನೆನಪಿನಿಂದ ಇನ್ನೂ ಹೊರಬಂದಿಲ್ಲ. ಈ ಪವಾಡದ ಘಟನೆ ಈಗ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.