ವೈರಲ್ ಆಗುವ ಹಂಬಲದಿಂದ, ಉದ್ಯಮಿ ಕೇತನ್ ಸಾವನ್ನು ಸಂಭ್ರಮಿಸಿ ವಿಕೃತವಾಗಿ ನಕ್ಕಿದ್ದ ಮಧ್ಯಪ್ರದೇಶದ ವೈದ್ಯೆ ಡಾ. ಮುಸ್ಕಾನ್ ಸೋನಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ವೈರಲ್ ಆಗಿ ಭಾರಿ ಟೀಕೆಗೆ ಗುರಿಯಾದ ಬೆನ್ನಲ್ಲೇ, ದಂತ ವೈದ್ಯರ ಸಂಘ ಆಕೆಯನ್ನು ಅಮಾನತುಗೊಳಿಸಿದ್ದು, ಸರ್ಕಾರ ಲೈಸೆನ್ಸ್ ಕೂಡ ಅಮಾನತು ಮಾಡಿದೆ.

ಕೆಲವರು ಟ್ರೋಲ್​ನಿಂದಾಗಿ ವೈರಲ್​ ಆಗಿ ಫೇಮಸ್​ ಆಗುವ ಹಂಬಲದಿಂದ ಹುಚ್ಚಾಪಟ್ಟೆ ಆಡುವುದು ಉಂಟು. ನೆಗೆಟಿವ್​ ಕಮೆಂಟ್ಸ್​, ನೆಗೆಟಿವ್​ ರೀಲ್ಸ್​ಗಳು ರಾತ್ರೋರಾತ್ರಿ ವೈರಲ್​ ಆಗಿ, ಅದರಿಂದ ಅದನ್ನು ಪೋಸ್ಟ್​ ಮಾಡಿದವರು ಕುಖ್ಯಾತಿ ಗಳಿಸುವ ಮೂಲಕ ಆದರೂ ಫೇಮಸ್​ ಆಗುವುದು ಉಂಟು. ಇದೇ ಕಾರಣಕ್ಕೆ ದೇಶದ ಗಮನ ಸೆಳೆದಿರುವ ಘಟನೆಗಳನ್ನು ಎತ್ತಿಕೊಂಡು ಅಪಹಾಸ್ಯ ಮಾಡುವುದು, ವಿರುದ್ಧ ಮಾತನಾಡುವ ಖಯಾಲಿ ಕೆಲವರಿಗೆ. ಕೆಲವೊಂದು ಘಟನೆಗಳಲ್ಲಿ ವಿಕೃತ ಮನಸ್ಥಿತಿಗಳ ಹಾಗೆ ಕಮೆಂಟ್​ ಮಾಡುವುದೂ ಇದೆ. ಇದೀಗ ಅಂಥದ್ದೇ ಒಂದು ಪೋಸ್ಟ್​ ಹಾಕಿರುವ ವೈದ್ಯೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಕೇತನ್​ ಸಾವಿನ ಸಂಭ್ರಮ

ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಹತ್ಯೆಗೆ ಒಳಗಾಗಿದ್ದಾನೆ ಎನ್ನಲಾದ ಉದ್ಯಮಿ ಕೇತನ್​ ಸಾವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅಪರಾಧಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ಆಗಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಈಚೆಗೆ ಓರ್ವಳು ಕೊಲೆ ಮಾಡಿರುವ ಆರೋಪ ಹೊತ್ತ ಸಿಯಾಳ ಪರವಾಗಿ ಕಮೆಂಟ್​ಮಾಡಿದ್ದಳು. ಅವಳು ಅಂದುಕೊಂಡಂತೆ ರಾತ್ರೋರಾತ್ರಿ ಫೇಮಸ್​ ಕೂಡ ಆದಳು. ಅದನ್ನೇ ಫಾಲೋ ಮಾಡಿ, ತನ್ನ ಹುದ್ದೆಯನ್ನೂ ಮರೆತ ಮಧ್ಯಪ್ರದೇಶದ ಡಾ. ಮುಸ್ಕಾನ್ ಸೋನಿ ಎಂಬ ವೈದ್ಯೆ, ಕೇತನ್​ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಕುಹಕವಾಡಿ ವಿಡಿಯೋ ಮಾಡಿದ್ದಳು. ಕೆಲವರು ಪುರುಷರನ್ನು ದ್ವೇಷಿಸುವುದೇ ಮಹಿಳಾವಾದ ಅಂದುಕೊಂಡಿದ್ದಾರೆ. ಮದುವೆಯಾಗಿ, ಮಕ್ಕಳಿದ್ದವರೂ ತಮಗೆ ಪುರುಷರನ್ನು ಕಂಡರೆ ಆಗುವುದಿಲ್ಲ ಎನ್ನುವ ಮಹಿಳಾವಾದಿಗಳು ನಮ್ಮ ನಡುವೆಯೇ ಸಾಕಷ್ಟು ಇದ್ದಾರೆ. ಅದೇ ರೀತಿ ಈ ಮುಸ್ಕಾನ್ ಕೂಡ ನನಗೆ ಪುರುಷರು ಎಂದರೆ ಆಗಲ್ಲ ಎಂದು ಕೇತನ್​ ಸಾವಿನ ಫೋಟೋ ಹಾಕಿ ವಿಡಿಯೋದಲ್ಲಿ ಗಹಗಹಿಸಿ ಅಸಹ್ಯಕರವಾಗಿ ನಕ್ಕಿದ್ದಳು.

ಅವಳ ಉದ್ದೇಶ ತಾನು ರಾತ್ರೋರಾತ್ರಿ ಫೇಮಸ್​ ಆಗ್ತೇನೆ ಎಂದಾಗಿತ್ತು. ತನ್ನ ಪರವಾಗಿ ಸೋ ಕಾಲ್ಡ್​ ಮಹಿಳಾವಾದಿಗಳು ನಿಲ್ಲಬಹುದು ಎಂದುಕೊಂಡಿದ್ದಳೋ ಏನೋ. ಆದರೆ ಅದು ಉಲ್ಟಾ ಆಗಿದೆ. ಫೇಮಸ್​ ಅಂತೂ ಆಗಿದ್ದಾಳೆ. ಆದರೆ, ಇವಳ ಈ ವಿಕೃತನಕ್ಕೆ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ (AIDSA) ಡಾ. ಮುಸ್ಕಾನ್ ಸೋನಿಯನ್ನು ಐದು ವರ್ಷಗಳ ಕಾಲ ಸಂಘದ ಸ್ಥಾನ ಮತ್ತು ಸದಸ್ಯತ್ವದಿಂದ ಅಮಾನತುಗೊಳಿಸಿದೆ.

"ಐ ಹೇಟ್ ಮ್ಯಾನ್"

"ಐ ಹೇಟ್ ಮ್ಯಾನ್" ಎಂಬ ಹ್ಯಾಶ್‌ಟ್ಯಾಗ್ ಬಳಸಿ ಈಕೆ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಕೊಲೆಗಾತಿಯ ಆರೋಪ ಹೊತ್ತ ಸಿಯಾ ಗೋಯಲ್ ಪರವಾಗಿ ಬರೆದುಕೊಂಡಿದ್ದಳು. ಸಾಲದು ಎನ್ನುವುದಕ್ಕೆ ಕೇತನ್​ ಸಾವಿನ ಬಗ್ಗೆ ವಿಕೃತವಾಗಿ ನಕ್ಕಿದ್ದಳು. ಇದು ಭಾರಿ ವೈರಲ್​ ಆಗಿ ಟೀಕೆಗೆ ಒಳಗಾಗುತ್ತಲೇ ಒಳಗೊಳಗೆ ತಾನು ಫೇಮಸ್​ ಆದೆ ಎಂದು ಖುಷಿಪಟ್ಟಿದ್ದ ಈಕೆ, ಕ್ಷಮೆಯಾಚಿಸಿದ್ದಳು. ಆದರೆ ಅದು ಮಧ್ಯಪ್ರದೇಶದ ಸರ್ಕಾರ ಆಗಿದ್ದರಿಂದ ಇಷ್ಟಕ್ಕೇ ನಿಲ್ಲಿಸದೇ ಲೈಸೆನ್ಸ್​ ಅಮಾನತು ಮಾಡಿದೆ.