Asianet Suvarna News Asianet Suvarna News

ರಾಮ-ಸೀತೆ ಪಾತ್ರಧಾರಿಗೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಆಫರ್!

ಕೆಲವು ಮ್ಯಾಗಜಿನ್‌ನವರು, ಕೆಲವು ಕಾಂಡೋಮ್ ಕಂಪನಿಯವರು ರಾಮಾಯಣ ಪಾತ್ರಧಾರಿಗಳನ್ನು ಸಂಪರ್ಕಿಸಿ, ಇಂಥ ದೃಶ್ಯಗಳ ಫೋಟೋಶೂಟ್ ಮಾಡ್ತೀವಿ ಬನ್ನಿ ಎಂದು ಕರೆದರಂತೆ. ದೊಡ್ಡ ಮೊತ್ತದ ಹಣದ ಆಮಿಷವನ್ನೂ ಒಡ್ಡಿದರಂತೆ. ಇವರ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡುವ ಐಡಿಯಾ. ಆದರೆ ರಾಮ ಮತ್ತು ಸೀತೆ ಪಾತ್ರಧಾರಿಗಳು ಇದಕ್ಕೆ ಒಪ್ಪಲಿಲ್ಲ.

Ramayan actors get sensuous photo shoot offers
Author
Bengaluru, First Published Mar 7, 2020, 3:43 PM IST

ರಾಮಾಯಣ ಸೀರಿಯಲ್ ನೀವೆಲ್ಲ ನೋಡಿರುತ್ತೀರಿ. ಅದರಲ್ಲಿ ಬರುವ ರಾಮ, ಸೀತೆ ಮೊದಲಾದವರು ಭಕ್ತಿ ಭಾವ ಉಕ್ಕಿಸುವಂತೆ ಇದ್ದರಲ್ಲವೇ. 1987ರಲ್ಲಿ, ಈ ಧಾರಾವಾಹಿ ಮೊದಲು ಪ್ರಸಾರವಾದ ಕಾಲದಲ್ಲಿ, ತುಂಬಾ ಆಸ್ತಿಕ ಮನೋಭಾವ ಇರುವವರು ಟವಿಯಲ್ಲಿ ಭಾನುವಾರ ಬೆಳಗ್ಗೆ ರಾಮಾಯಣ ಪ್ರದರ್ಶನ ಆಗುವ ಕಾಲಕ್ಕೆ ಸರಿಯಾಗಿ ಪೂಜೆ, ಸಾಮಗ್ರಿಗಳನ್ನು ಇಟ್ಟುಕೊಂಡು ಕೂರುತ್ತಿದ್ದರು, ರಾಮ ಸೀತೆ ಪ್ರತ್ಯಕ್ಷ ಆದ ಕೂಡಲೇ ಆರತಿ ಎತ್ತಿ ಕೈ ಮುಗಿದು ಪೂಜೆ ಮಾಡುತ್ತಿದ್ದರು. 

ಇಂಥ ದೇವತಾ ಪಾತ್ರಧಾರಿಗಳಿಂದ ಹಸಿಬಿಸಿ ದೃಶ್ಯಗಳನ್ನು ಮಾಡಿಸುವ ಪ್ರಯತ್ನವೂ ನಡೆದಿತ್ತಂತೆ. ಕೆಲವು ಮ್ಯಾಗಜಿನ್‌ನವರು, ಕೆಲವು ಕಾಂಡೋಮ್ ಕಂಪನಿಯವರು ರಾಮಾಯಣ ಪಾತ್ರಧಾರಿಗಳನ್ನು ಸಂಪರ್ಕಿಸಿ, ಇಂಥ ದೃಶ್ಯಗಳ ಫೋಟೋಶೂಟ್ ಮಾಡ್ತೀವಿ ಬನ್ನಿ ಎಂದು ಕರೆದರಂತೆ. ದೊಡ್ಡ ಮೊತ್ತದ ಹಣದ ಆಮಿಷವನ್ನೂ ಒಡ್ಡಿದರಂತೆ. ಇವರ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡುವ ಐಡಿಯಾ. ಆದರೆ ರಾಮ ಮತ್ತು ಸೀತೆ ಪಾತ್ರಧಾರಿಗಳು ಇದಕ್ಕೆ ಒಪ್ಪಲಿಲ್ಲ. ತೆರೆಯ ಮೇಲೆ ಧಾರಾವಾಹಿಯಲ್ಲಿ ರಾಮ ಸೀತೆಯರಾಗಿ ಕಾಣಿಸಿಕೊಳ್ಳುವವರು, ಮರುಕ್ಷಣದಲ್ಲೇ ಜಾಹೀರಾತಿನಲ್ಲಿ ಕಾಂಡೋಮ್ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ಭಾರತೀಯ ಮನಸ್ಸು ಹೇಗೆ ಬೆಚ್ಚಿ ಬಿದ್ದೀತು ಊಹಿಸಿಕೊಳ್ಳಿ. ರಾಮಾಯಣದ ಘನತೆ ಉಳಿಸಿಕೊಳ್ಳಲು ಇವರು ಅಂಥ ಆಫರ್‌ಗೆ ಒಪ್ಪಲಿಲ್ಲ.

ಈ ವಿಚಾರವನ್ನು ಜನಪ್ರಿಯ ಕಪಿಲ್ ಶರ್ಮಾ ಶೋನಲ್ಲಿ, ಅಂದಿನ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಹಾಗೂ ಸೀತೆಯ ಪಾತ್ರಧಾರಿ ದೀಪಿಕಾ ಚಿಕಾಲಿಯಾ ಬಿಚ್ಚಿಟ್ಟಿದ್ದಾರೆ.

33 ವರ್ಷಗಳ ಬಳಿಕ ಹೀಗಿದ್ದಾರೆ ಟೀವಿಯ ರಾಮ, ಸೀತೆ, ಲಕ್ಷ್ಮಣ! 

ಈಗ 71 ವರ್ಷದವರಾಗಿರುವ ಅರುಣ್ ಗೋವಿಲ್ ಅವರನ್ನು ಮಾತಾಡಿಸಿದರೆ ಇಂಥ ಹಲವು ಸ್ವಾರಸ್ಯಕರ ವಿಷಯಗಳು ಹೊರ ಬೀಳುತ್ತವೆ. ಉದಾಹರಣೆಗೆ ಇನ್ನೊಂದು. ರಾಮಾಯಣ ಧಾರಾವಾಹಿಯ ನಂತರ ಅರುಣ್ ಗೋವಿಲ್‌ಗೆ ಹಲವು ವರ್ಷ ಯಾವ ಪಾತ್ರದ ಆಫರ್ ಕೂಡ ಬರಲೇ ಇಲ್ಲವಂತೆ! ಯಾಕೆಂದರೆ ರಾಮನ ಇಮೇಜ್ ಅವರ ವ್ಯಕ್ತಿತ್ವಕ್ಕೆ ಗಾಢವಾಗಿ ಅಂಟಿಕೊಂಡುಬಿಟ್ಟಿತ್ತು. ಎಲ್ಲೇ ಹೋದರೂ ಅವರನ್ನು ಗುರುತಿಸುತ್ತಿದ್ದದ್ದು ರಾಮನ ಪಾತ್ರಧಾರಿ ಎಂದೇ. ಸಿನಿಮಾಗಳಲ್ಲಿ ಅವರು ಹೀರೋ ಅಥವಾ ವಿಲನ್ ಪಾತ್ರ ಮಾಡುವಂತೆಯೇ ಇರಲಿಲ್ಲ. ಜನ ಅವರನ್ನು ಆ ಪಾತ್ರದಲ್ಲಿ ಸ್ವೀಕರಿಸಲಾರರು ಎಂದು ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ಸ್ವತಃ ತಾವೇ ತೀರ್ಮಾನ ಮಾಡಿಬಿಟ್ಟಿದ್ದರು. ಅದನ್ನು ಪರೀಕ್ಷಿಸಿ ನೋಡುವ ಧೈರ್ಯವನ್ನೂ ಯಾರೂ ಮಾಡಲಿಲ್ಲ. ಹೀಗಾಗಿ ಅನೇಕ ವರ್ಷಗಳ ಕಾಲ ಪಾತ್ರಗಳಿಲ್ಲದೆ ಬರಿಗೈಯಲ್ಲಿ ಬದುಕಬೇಕಾಯಿತು ಅನ್ನುತ್ತಾರೆ ಗೋವಿಲ್.

ಸೀತೆಯ ಪಾತ್ರ ಮಾಡಿದ ದೀಪಿಕಾ ಆದರೂ ಅಷ್ಟೇ. ಆಕೆಗೂ ಬಹಳ ಕಾಲ ಸೀತೆಯ ವ್ಯಕ್ತಿತ್ವದಿಂದ ಆಚೆ ಬರಲು ಆಗಲಿಲ್ಲ. ಎಲ್ಲೇ ಹೋದರೂ ಆಕೆಯನ್ನು ಕೈ ಮುಗಿದು, ಬಲು ಗೌರವದಿಂದ ಮಾತಾಡಿಸುತ್ತಿದ್ದರಂತೆ. ಕೆಲವು ಗ್ರಾಮೀಣ ಪ್ರದೇಶದ ಮಹಿಳೆಯರು ಇವರನ್ನು ಕಂಡರೆ ಕಾಲಿಗೆ ಬೀಳುತ್ತಿದ್ದರಂತೆ. ದೀಪಿಕಾ ಮೈ ಮುಚ್ಚುವ ಸೀರೆ ಹೊರತುಪಡಿಸಿ ಬೇರೆ ಡ್ರೆಸ್ ಹಾಕಿದರೆ ಜನ ವಿಚಿತ್ರವಾಗಿ ನೋಡುತ್ತಿದ್ದರಂತೆ. ಒಂದು ಪಾರ್ಟಿಗೆ ಹೀಗೆ ಹೋದಾಗ ಅಲ್ಲಿದ್ದ ಒಬ್ಬ ಅಜ್ಜಿ, ನೀನು ಲಕ್ಷಣವಾಗಿ ಸೀರೆ ಉಟ್ಟುಕೊಂಡು ಬಾರಮ್ಮ ಎಂದು ನೇರವಾಗಿ ಹೇಳಿಯೇ ಬಿಟ್ಟರಂತೆ! ಅರುಣ್‌ ಗೋವಿಲ್‌ ಅವರ ಕಾಲಿಗೂ ಬೀಳುತ್ತಿದ್ದರಂತೆ ಕೆಲವರು.

ರಾಮಾಯಣ ಖ್ಯಾತಿ ರಮಾನಂದ ಸಾಗರ್ ಮೊಮ್ಮಗಳೀಕೆ! 

ಇದೇ ದೀಪಿಕಾ ಮುಂದೆ ಟಿವಿ ನಟನೆಯನ್ನು ತೊರೆದು ಒಬ್ಬ ಬ್ಯುಸಿನೆಸ್ ಮ್ಯಾನ್‌ನನ್ನು ಮದುವೆಯಾಗಿ, ಗೃಹಿಣಿಯಾಗಿ ಗಂಡನ ಬ್ಯುಸಿನೆಸ್ ನೋಡಿಕೊಂಡರು. ಟಿಪ್ಪು ಸುಲ್ತಾನನ ಖಡ್ಗ ಮತ್ತಿತರ ಒಂದೆರಡು ಧಾರಾವಾಹಿಯಲ್ಲಿ ನಟಿಸಿದ್ದುಂಟು. ವಡೋದರಾದಿಂದ ಲೋಕಸಭೆ ಚುನಾವಣೆಗೆ ನಿಂತು ಒಂದು ಅವಧಿಗೆ ಸಂಸತ್ ಸದಸ್ಯೆಯೂ ಆಗಿದ್ದರು.

ಇದೇ ರಾಮಾಯಣದಲ್ಲಿ ಹನುಮಾನ್ ಪಾತ್ರ ಮಾಡಿದ ದಾರಾ ಸಿಂಗ್ ಕೂಡ ಸಂಸತ್ ಸದಸ್ಯ ಆಗಿದ್ದ ಎಂಬುದನ್ನು ನೆನಪಿಸಿಕೊಳ್ಳಬಹುದು. ಆದರೆ ರಾಮ ಪಾತ್ರಧಾರಿ ಅರುಣ್ ಗೋವಿಲ್ ಮಾತ್ರ ರಾಜಕೀಯಕ್ಕೆ ಇಳಿಯಲಿಲ್ಲ.

Follow Us:
Download App:
  • android
  • ios