ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ರಕ್ಷಿತಾ ಪ್ರೇಮ್ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾದರು. ಈ ವೇಳೆ ನಟ ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ ನೋಡಿ.

ಬೆಂಗಳೂರು (ಜು.21): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ (Darshan) ಅವರನ್ನು ಭೇಟಿ ಮಾಡಲು ಮಂಗಳವಾರ ಪತ್ನಿ ವಿಜಯಲಕ್ಷ್ಮೀ ದರ್ಶನ್ (Vijayalakshmi Darshan) ಹಾಗೂ ಆಪ್ತ ಗೆಳತಿ, ನಟಿ ರಕ್ಷಿತಾ ಪ್ರೇಮ್ (Rakshita Prem) ಆಗಮಿಸಿದ್ದರು.

ಜೈಲಿನಲ್ಲಿ ಸುಮಾರು ಒಂದು ಗಂಟೆ ಕಾಲ ದರ್ಶನ್ ಭೇಟಿಯಾದ ನಂತರ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಜೈಲಿನಿಂದ ಒಟ್ಟಿಗೆ ಹೊರಬಂದರು. ಈ ವೇಳೆ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೆ ಅಲ್ಲಿಂದ ನಿರ್ಗಮಿಸಿದರು.

ಪ್ರತ್ಯೇಕವಾಗಿ ಬಂದರೂ ಒಟ್ಟಿಗೆ ಹೊರಬಂದರು :

ಇಂದು ಮಧ್ಯಾಹ್ನ ದರ್ಶನ್ ಅವರನ್ನು ಭೇಟಿ ಮಾಡಲು ನಟಿ ರಕ್ಷಿತಾ ಪ್ರೇಮ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರು ಪ್ರತ್ಯೇಕವಾಗಿ ಜೈಲಿಗೆ ಆಗಮಿಸಿದ್ದರು. ದರ್ಶನ್ ಬಂಧನಕ್ಕೊಳಗಾದ ನಂತರ ರಕ್ಷಿತಾ ಅವರು ತಮ್ಮ ಗೆಳೆಯನನ್ನು ನೋಡಲು ಎರಡನೇ ಬಾರಿ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಸುಮಾರು ಸಮಯ ದರ್ಶನ್ ಅವರೊಂದಿಗೆ ಮಾತನಾಡಿ, ಅವರ ಆರೋಗ್ಯ (Health) ಮತ್ತು ಕುಶಲೋಪರಿ ವಿಚಾರಿಸಿದ ನಂತರ, ವಿಜಯಲಕ್ಷ್ಮಿ ಮತ್ತು ರಕ್ಷಿತಾ ಇಬ್ಬರೂ ಒಟ್ಟಿಗೆ ಜೈಲಿನಿಂದ ಹೊರಬಂದರು.

ದರ್ಶನ್ ಆರಾಮಾಗಿದ್ದಾರಾ?

ಜೈಲಿನ ಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು (Media Personnel) ರಕ್ಷಿತಾ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡದ ರಕ್ಷಿತಾ ಮೌನವಾಗಿಯೇ ಕಾರಿನತ್ತ ಹೆಜ್ಜೆ ಹಾಕಿದರು. ಈ ವೇಳೆ ಪತ್ರಕರ್ತರೊಬ್ಬರು 'ದರ್ಶನ್ ಅವರು ಆರಾಮಾಗಿದ್ದಾರಾ?' ಎಂದು ಕೇಳಿದ ಪ್ರಶ್ನೆಗೆ, ರಕ್ಷಿತಾ ಅವರು ಹೌದು ಎನ್ನುವಂತೆ ತಲೆಯಾಡಿಸಿ (Nodded) ಅಲ್ಲಿಂದ ತೆರಳಿದರು.

ಗೆಳೆಯನ ಸ್ಥಿತಿ ಕಂಡು ಭಾವುಕ :

ಕಳೆದ ಹಲವು ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಅವರ ಪರಿಸ್ಥಿತಿ ಕಂಡು ರಕ್ಷಿತಾ ಅವರು ಭಾವುಕರಾಗಿದ್ದರು ಎನ್ನಲಾಗಿದೆ. ದರ್ಶನ್ ಅವರ ಕಾನೂನು ಹೋರಾಟ ಮತ್ತು ಜೈಲಿನಲ್ಲಿ ಅವರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ರಕ್ಷಿತಾ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದರ್ಶನ್ ಭೇಟಿಗೆ ಸಿನಿ ಗಣ್ಯರು ಆಗಾಗ ಆಗಮಿಸುತ್ತಿರುತ್ತಾರೆ.