Karna Kannada Serial Update: ಕರ್ಣ ಧಾರಾವಾಹಿಯಲ್ಲಿ ಕರ್ಣ ಇಷ್ಟುದಿನ ಪುಣ್ಯಕೋಟಿ ಗೋವಿನ ಥರ ಇದ್ದನು. ಆದರೆ ಈಗ ಅವನು ಇನ್ನೊಂದು ಮುಖ ತೋರಿಸಿದ್ದಾನೆ. 

‌ಕರ್ಣ ಅನಾಥ ಮಗು. ತೊಟ್ಟಿಯಲ್ಲಿ ಬಿದ್ದಿದ್ದ ಕರ್ಣನನ್ನು ಸೂರ್ಯಪ್ರಕಾಶ್ ಅವರು ಎತ್ತಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದರು. ಕರ್ಣನನ್ನು ಅವರು ಸ್ವಂತ ಮೊಮ್ಮಗ ಎನ್ನುವಂತೆ ಸಾಕಿದರು. ತಾತ, ಅಜ್ಜಿ, ತಾಯಿ ಬಿಟ್ಟು ಉಳಿದವರೆಲ್ಲರೂ ಕರ್ಣನನ್ನು ಅನಾಥ ಎನ್ನುವಂತೆ ನೋಡುತ್ತಾರೆ. ಅವನು ಮದುವೆ ಆಗಬಾರದು ಅಂತ ರಮೇಶ್‌ ಡೀಲ್‌ ಮಾಡಿಕೊಂಡಿದ್ದನು. ಈಗ ಅವನೇ ಕರ್ಣನಿಗೆ ಹುಡುಗಿ ನೋಡಿದ್ದಾನೆ.

Add Asianetnews Kannada as a Preferred SourcegooglePreferred

ಕರ್ಣನನ್ನು ನೋಡೋಕೆ ಬಂದ ಹೆಣ್ಣಿನ ಕಡೆಯವರು!

ಇನ್ನೊಂದು ಕಡೆ ಕರ್ಣ ಮದುವೆ ಆಗಬೇಕು ಅಂತ ಅಜ್ಜಿ, ತಾಯಿ ಇಬ್ಬರೂ ಅವನಿಗೆ ಒತ್ತಾಯ ಮಾಡಿದ್ದರು. ಹೀಗಾಗಿ ಅವನು ಕೂಡ ಹುಡುಗಿ ನೋಡೋಕೆ ಒಪ್ಪಿದ್ದನು. ಕರ್ಣನಿಗೆ ಹುಡುಗಿ ನೋಡೋಕೆ ಬಂದಿದ್ದಾರೆ. ಡಾಕ್ಟರ್‌ ಕರ್ಣ ಬುದ್ಧಿವಂತ, ಸದ್ಗುಣ ಇದೆ ಎಂದು ಹುಡುಗಿ ಕಡೆಯವರು ಒಪ್ಪಿದ್ದಾರೆ. ಕರ್ಣನನ್ನು ನೋಡೋಕೆ ಹುಡುಗಿ ಕಡೆಯವರು ಬಂದಿದ್ದಾರೆ ಅಂತ ನಿಧಿ ಗುಟ್ಟಾಗಿ ಅವನ ಮನೆಗೆ ಬಂದಿದ್ದಾಳೆ. ಅತ್ತ ನಿಧಿ ಕಂಡರೆ ಕರ್ಣನಿಗೂ ಇಷ್ಟ. ಜವಾಬ್ದಾರಿ ಇದೆ, ತಂದೆಗೆ ನಾನು ಮದುವೆ ಆಗೋದು ಇಷ್ಟವಿಲ್ಲ ಎಂದು ಅವನು ಇದುವರೆಗೂ ನಿಧಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡಿಲ್ಲ.

ಇನ್ನೂ ನಿಧಿ ಪ್ರೀತಿಯನ್ನು ಒಪ್ಪದ ಕರ್ಣ

ಕರ್ಣನ ಮೆಡಿಕಲ್‌ ಕಾಲೇಜಿನಲ್ಲಿ ನಿಧಿ ಜ್ಯೂನಿಯರ್.‌ ನಿಧಿಗೆ ಕರ್ಣನನ್ನು ಕಂಡರೆ ತುಂಬ ಇಷ್ಟ. ಕರ್ಣನ ಅಜ್ಜಿ, ನಿಧಿ ಅಜ್ಜಿ ಇಬ್ಬರೂ ಬೆಸ್ಟ್‌ ಫ್ರೆಂಡ್ಸ್.‌ ಹೀಗಾಗಿ ಕರ್ಣ, ನಿಧಿ ನಡುವೆ ಇನ್ನೊಂದಿಷ್ಟು ಆತ್ಮೀಯತೆ ಇದೆ. ನಿಧಿ ಅಕ್ಕ ನಿತ್ಯಾ ಮದುವೆಗೆ ಕರ್ಣ ತುಂಬ ಸಹಾಯ ಕೂಡ ಮಾಡುತ್ತಿದ್ದಾನೆ. ನಿಧಿ ಕಂಡರೆ ಕರ್ಣನಿಗೆ ಇಷ್ಟ, ಆದರೆ ಇನ್ನೂ ಅವಳ ಪ್ರೀತಿಯನ್ನು ಅವನು ಒಪ್ಪಿಲ್ಲ.

ಹುಡುಗಿ ಕಡೆಯವರು ಬಂದಾಗ ಕರ್ಣ ಹಾಗೂ ರಮೇಶ್‌ ನಡುವೆ ಮಾತುಕತೆ ನಡೆದಿದೆ.

ರಮೇಶ್:‌ ಹಣ, ಅಂತಸ್ತು ಇದೆ ಅಂತ ಹುಡುಗಿ ಕೊಡೋಕಾಗತ್ತಾ? ಈಗಿನ ಕಾಲದವರಿಗೆ ನೆಟ್ಟಗೆ ಹುಟ್ಟಿದವರಿಗೆ ಮರ್ಯಾದೆ ಸಿಗೋದಿಲ್ಲ. ಯಾರಿಗೆ ಯಾವಾಗ, ಹೇಗೆ, ಎಲ್ಲಿ ಹುಟ್ಟಿದ ಅಂತ ಗೊತ್ತಿಲ್ಲದವರಿಗೆ ಹುಡುಗಿ ಕೊಡಬೇಕಲ್ಲ.

ಕರ್ಣ: ನನ್ನ ಬಗ್ಗೆ ಸಾವಿರ ಮಾತನಾಡಿ, ನಾನು ಸುಮ್ಮನೆ ಇರ್ತೀನಿ. ನನ್ನ ತಾಯಿ ಅವಮಾನಿಸಿದ್ರೆ ಸುಮ್ಮನೆ ಇರೋದಿಲ್ಲ.

ರಮೇಶ್:‌ ನಿನ್ನ ತಾಯಿ ಪತಿವ್ರತೆಯಾಗಿದ್ರೆ ಭಿಕ್ಷೆ ಬೇಡಿ ಸಾಕಿರುತ್ತಿದ್ದಳು.

ಕರ್ಣನ ಇನ್ನೊಂದು ಮುಖ ರಿವೀಲ್‌ ಆಯ್ತು!

ರಮೇಶ್‌ ತನ್ನ ಹೆತ್ತ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದಳು ಅಂತ ಕರ್ಣನಿಗೆ ಸಿಟ್ಟು ಬಂದಿದೆ. ಇಷ್ಟುದಿನ ಸೈಲೆಂಟ್‌ ಆಗಿದ್ದ ಕರ್ಣ, ತನ್ನ ತಾಯಿ ಬಗ್ಗೆ ಮಾತನಾಡಿದ್ದಕ್ಕೆ ಸಿಡಿದೆದ್ದಿದ್ದಾನೆ. ಅವನು ರಮೇಶ್‌ಗೆ ಚಾಕು ಹಾಕಲು ರೆಡಿ ಆಗಿದ್ದಾನೆ. ಮೂಕಪ್ರಾಣಿ ಎನ್ನೋ ಥರ ಇದ್ದ ಕರ್ಣ ಈ ರೀತಿ ಆಗಿದ್ದು ನೋಡಿ ಎಲ್ಲರಿಗೂ ಶಾಕ್‌ ಆಗಿದೆ. ಚಿಕ್ಕ ವಯಸ್ಸಿನಿಂದಲೂ ನನ್ನ ಆಸ್ತಿ ಹೊಡೆಯೋಕೆ ಬಂದ, ನನ್ನ ಸ್ವಂತ ಮಗನಿಗಿಂತ ಇವನು ಎಲ್ಲದರಲ್ಲೂ ಮೇಲು ಅಂತ ರಮೇಶ್‌ಗೆ ಅಸೂಯೆ, ದ್ವೇಷ. ಹೀಗಾಗಿ ಅವನು ಅವಕಾಶ ಸಿಕ್ಕಾಗೆಲ್ಲ ಕರ್ಣನಿಗೆ ನಿಂದಿಸುತ್ತಿರುತ್ತಾನೆ. ರಮೇಶ್‌ ಏನೇ ಹೇಳಿದರೂ, ನಿಂದಿಸಿದರೂ ಕೂಡ ಇಷ್ಟುದಿನಗಳಿಂದ ಕರ್ಣ ಸುಮ್ಮನೆ ಇದ್ದ. ಈಗ ಅವನು ತಿರುಗುಬಿದ್ದಿರೋದು ಎಲ್ಲರಿಗೂ ಆಶ್ಚರ್ಯ ತಂದಿದೆ. ಸದ್ಯ ರಮೇಶ್‌ಗೆ ಚಾಕು ಹಾಕಲು ಕರ್ಣ ರೆಡಿಯಾಗಿರೋ ಪ್ರೋಮೋ ರಿಲೀಸ್‌ ಆಗಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.