ಗೆಲ್ಲೋದಕ್ಕೋಸ್ಕರ ಏನ್ ಮಾಡಕ್ಕೂ ರೆಡಿ ಅನ್ನೋ ಪ್ರಶಾಂತ ಸಂಬರಗಿಗೆ ಜನ ಓಟ್ ಮಾಡ್ತಾರಾ?
ಪ್ರಶಾಂತ್ ಸಂಬರಗಿ ಎಂಥ ವ್ಯಕ್ತಿ ಎಂಬುದು ಬಿಗ್ ಬಾಸ್ನ ಎರಡೇ ದಿನಕ್ಕೆ ಜನಕ್ಕೆ ಗೊತ್ತಾಗ್ತಿದೆ. ದಿವ್ಯಾ ಅನ್ನೋ ಹುಡುಗೀನ ಎತ್ತಿಕೊಂಡು ಕುಣಿದ ಈ ಸಂಬರಗಿಗೆ ಓಟು ಸಿಗುತ್ತಾ?
ಪ್ರಶಾಂತ ಸಂಬರಗಿ ಡೇ 1ನಿಂದಲೂ ಬಿಗ್ಬಾಸ್ ಮನೆಯಲ್ಲಿ ಸುದ್ದೀಲಿರೋ ಬುದ್ಧಿವಂತ. ತಾನು ರಾಷ್ಟ್ರೀಯವಾದಿ ಎನ್ನುವ ಇವರು ದಿವ್ಯಾ ಉರುಡುಗ ಜೊತೆಗೆ ವ್ಯವಹರಿಸಿದ ರೀತಿ ಜನರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ.
ವಿವಾಹಿತನೊಬ್ಬ ಪರಸ್ತ್ರೀಯನ್ನು ಕಣ್ಣೆತ್ತಿಯೂ ನೋಡಬಾರದು ಅನ್ನುತ್ತೆ ಹಿಂದೂ ಧರ್ಮದ ಮೌಲ್ಯ. ಧರ್ಮ, ರಾಷ್ಟ್ರೀಯವಾದದ ಬಗ್ಗೆ ಮಾತನಾಡುತ್ತ ಬುದ್ಧಿ ಹೇಳುವ ಸ್ಥಾನದಲ್ಲಿರುವ ಸಂಬರಗಿಗೆ ಹೆಗಲೆತ್ತರಕ್ಕೆ ಬೆಳೆದ ಮಗನಿದ್ದಾನೆ. ಈ ಅಂಕಲ್ 29 ರ ಹರೆಯದ ಹುಡುಗಿ ದಿವ್ಯಾ ಉರುಡುಗ ಜೊತೆಗೆ ಹಾಗೆಲ್ಲ ಬಿಹೇವ್ ಮಾಡಬಹುದಾ ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ರು.
ಸುದೀಪ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ ಬಿಗ್ ಬಾಸ್ ಸ್ಪರ್ಧಿ! ...
ಮೊದಲ ದಿನ ದಿವ್ಯಾಗೆ ತೀರಾ ಸನಿಹದಲ್ಲಿ ಕೂತು ಅವರ ಕೈ ಹಿಡಿದು ಭವಿಷ್ಯ ಹೇಳ್ತೀನಿ ಅಂದ ಸಂಬರಗಿ, ಆಮೇಲೆ ದಿವ್ಯ ಅವರನ್ನು ಎತ್ತಿಕೊಂಡು ಹೋದದ್ದು ಸಹ ಹೊರಗಿರುವ ಜನ ಮನೆಯೊಳಗಿನವ್ರೇ ವಿಚಿತ್ರವಾಗಿ ನೋಡೋ ಥರ ಆಯ್ತು. ಹಾಗಂತ ಸಂಬರಗಿ ಮನಃಪೂರ್ವಕವಾಗಿ ದಿವ್ಯಾ ಜೊತೆಗೆ ಅಂಥಾ ಆತ್ಮೀಯತೆ ಇಟ್ಕೊಂಡಿದ್ದಾರಾ ಅನ್ನೋದು ಅನುಮಾನ. ಏಕೆಂದರೆ, ಗೇಮ್ ವಿನ್ ಆಗೋದು ಮುಖ್ಯ. ಅದಕ್ಕೋಸ್ಕರ ಏನ್ ಮಾಡ್ಬೇಕೋ ಮಾಡ್ಬೇಕು ಅನ್ನುವ ಅವರ ಮನಸ್ಥಿತಿಯೂ ನಿಧಿ ಹಾಗೂ ಇತರರ ಜೊತೆಗೆ ಅವರಾಡಿದ್ದ ಮಾತಿನ ಮೂಲಕ ಹೊರಬಂದಿದೆ.
ಇಲ್ಲಿ ಗೆಲ್ಲೋದೇ ನಮ್ಮ ಗುರಿ. ನಾನ್ ಗೆಲ್ಲಬೇಕು ಅಂದರೆ ಎದುರಾಳಿ ಸೋಲಬೇಕು. ಎದುರಿರುವಾತ ದುರ್ಬಲನಾಗಿದ್ದಷ್ಟು ನನಗೇ ಲಾಭ ಎನ್ನುತ್ತಾ, ಬಿಗ್ ಬಾಸ್ ಮನೆಯ ಅತೀ ಕಿರಿಯ ಸದಸ್ಯ, ಚಿಕ್ಕ ಹುಡುಗ ವಿಶ್ವನಾಥ್ ನನ್ನೇ ನಾಮಿನೇಟ್ ಮಾಡಲು ಹೋದರು. ತನ್ನ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣವನ್ನೂ ಕೊಟ್ಟರು. ಈ ಟೀಮ್ ನ ದುರ್ಬಲ ಕ್ಯಾಂಡಿಡೇಟ್ ವಿಶ್ವನಾಥ್ ಅವರನ್ನ ನಾಮಿನೇಟ್ ಮಾಡುತ್ತೇನೆ ಅಂದರು. ಅಲ್ಲಿಗೆ ವಿಶ್ವನಾಥ್ ನ ಆತ್ಮವಿಶ್ವಾಸವೂ ಕೊಂಚ ಕಡಿಮೆಯಾಯ್ತು. ಆತನಿಗೆ ತನ್ನನ್ನು ಸಂಬರಗಿ ದುರ್ಬಲ ಅಂದಿದ್ದು ಮನಸ್ಸಿಗೆ ಗಾಯ ಮಾಡಿದಂತಿತ್ತು. ಆದರೂ ಏನೂ ಹೇಳದೇ ಪೆಚ್ಚು ಮೋರೆ ಹಾಕಿ ಕೂತುಬಿಟ್ಟ.
Biggboss 8: ಶುಭಾ ಪೂಂಜಗೆ ಟಾಯ್ಲೆಟ್ ಚಿಂತೇನಾ? ಯಾರೂ ಇಂಥ ಪ್ರಶ್ನೆ ಕೇಳಿರಲಿಲ್ಲ ಅಂದ್ರು ಸುದೀಪ್! ...
ಈ ಸನ್ನಿವೇಶವನ್ನು ನೋಡಿದ ಜನ ಸಂಬರಗಿ ಗೆಲ್ಲೋಕ್ಕೋಸ್ಕರ ಮಾನವೀಯತೆಯನ್ನೂ ಬಿಡೋದಕ್ಕೆ ಸಿದ್ಧರಿದ್ದಾರಾ, ಹಾಗೆ ಮಾಡಿದ್ರೆ ತಕ್ಷಣಕ್ಕೆ ಸೇಪ್ ಆಗಬಹುದು. ಆದರೆ ಮುಂದೆ ಜನರ ಓಟು ಬೀಳುತ್ತಾ ಅಂತೆಲ್ಲ ಮಾತನಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿಯ ಮುಖವಾಡ ಕಳಚಿ ರಿಯಲ್ ಮುಖ ಕಾಣೋದಕ್ಕೆ ಹೆಚ್ಚು ಟೈಮ್ ಬೇಡ.
ಆದರೆ ಕಳೆದ ಹಲವು ಸೀಸನ್ಗಳಲ್ಲಿ ನೋಡಿದ್ರೆ ಇಲ್ಲಿ ಬುದ್ಧಿವಂತರಿಗಿಂತ ಹೃದಯವಂತರೇ ಗೆಲ್ಲುತ್ತಾ ಬಂದಿದ್ದಾರೆ. ಮಾನವೀಯವಾಗಿ ವರ್ತಿಸುವ, ಒಳ್ಳೆಯತನವಿರುವ ಸ್ಪರ್ಧಿಗಳನ್ನೇ ಜನ ಕೈ ಹಿಡಿದು ಮೇಲೆತ್ತಿದ್ದಾರೆ. ಕೆಲವು ಸೀಸನ್ ಹಿಂದಿನ ಸ್ಪರ್ಧಿ ನಿವೇದಿತಾ ಗೌಡ ಮೇಲೆ ಎಷ್ಟೇ ನೆಗೆಟಿವ್ ಕಮೆಂಟ್ಗಳಿದ್ದರೂ, ಆಕೆ ಇನ್ನೊಬ್ಬ ಸ್ಪರ್ಧಿಗಾಗಿ ಮಾಡಿದ ಒಳ್ಳೆಯತನ, ಹೃದಯವಂತಿಕೆಯನ್ನು ಜನ ಕೊಂಡಾಡಿದ್ದರು. ಆಟದಲ್ಲಿ ಕೊಂಚ ದುರ್ಬಲನಾಗಿ ಕಂಡ ವ್ಯಕ್ತಿ ತನ್ನ ಹೃದಯವಂತಿಕೆಯಿಂದಲೇ ಮುಂದೆ ಬರುವ ಅವಕಾಶವೂ ಇಲ್ಲಿದೆ.
ಬಿಗ್ಬಾಸ್ಗೆ ಹೋದೋರೆಲ್ಲ ಹೆಸರು ಕೆಡಿಸ್ಕೊಳ್ತಾರಾ? ಚಾನೆಲ್ನವ್ರು ಏನಂತಾರೆ? ...
ಆದರೆ ಏನು ಅತಿ ಮಾಡಲು ಹೋದರೂ ಈ ಮನೆಯಲ್ಲಿ ಉಳಿಯೋದು ಕಷ್ಟ. ಇದಕ್ಕೆ ಸದ್ಯಕ್ಕೆ ಸಾಕ್ಷಿ ಆಗಿರೋದು ನಿರ್ಮಲಾ ಚೆನ್ನಪ್ಪ. ಆಕೆಯ ಅತಿ ಒಳ್ಳೆತನವೇ ಆಕೆಯನ್ನು ನಾಮಿನೇಟ್ ಆಗುವಂತೆ ಮಾಡಿದೆ. ಇನ್ನು ಸಂಬರಗಿ ಸೋಷಿಯಲ್ ಇಶ್ಯೂವನ್ನು ಎತ್ತಿಕೊಂಡು ಚರ್ಚಿಸಿದ್ದು ಅವರಿಗೆ ಕೊಂಚ ಪಾಸಿಟಿವ್ ಆದ ಹಾಗಿದೆ. ನಾಯಿ ಮಾಲಕರು ಬೀದಿ ಬದಿ ನಾಯಿಗಳಿಂದ ಗಲೀಜು ಮಾಡಿಸಿ ಅದನ್ನು ಕ್ಲೀನ್ ಮಾಡದೇ ಮುಂದೆ ಹೋಗೋದರಿಂದ ಎಲ್ಲ ಪಾದಚಾರಿಗಳಿಗೂ ಸಮಸ್ಯೆ ಆಗುತ್ತೆ ಅಂತ ಅವರು ಹೇಳಿದ್ದು ಕರೆಕ್ಟ್ ಅನ್ನುವ ಮಾತೂ ಬಂದಿದೆ. ಒಟ್ಟಾರೆ ಸಂಬರಗಿ ಚರ್ಚೆಯಲ್ಲಂತೂ ಇದ್ದಾರೆ. ಆದರೆ ಅವರ ಅತಿ ಬುದ್ಧಿವಂತಿಕೆಯೇ ಅವರ ವಿಲನ್ ಆಗಬಹುದಾ ಅನ್ನುವ ರೀತಿಯ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿವೆ.