'ಸರ್ಕಾರಿ ಶಾಲೆ ಹೆಚ್-8' ಸಿನಿಮಾದ ಪ್ರಚಾರಕ್ಕೆ ಗೈರಾದ ಕಾರಣ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ನಿಯಮ ಉಲ್ಲಂಘನೆಗೆ ಚಿತ್ರರಂಗದಿಂದ ಬ್ಯಾನ್ ಮಾಡಿದಲ್ಲಿ ನಿರ್ದೇಶಕನಾಗುವ ಕನಸಿಗೆ ಕುತತು ಬರಲಿದೆ.

ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲಾಗಿದೆ. ಸರ್ಕಾರಿ ಶಾಲೆ ಹೆಚ್-8 ಸಿನಿಮಾದ ನಿರ್ಮಾಪಕ ಗುಣ ಹರಿಯಬ್ಬೆ ಅವರು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಗಿಲ್ಲಿ ನಟ ಅವರು ಸಿನಿಮಾದ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲ. ಗಿಲ್ಲಿ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದಾರೆ. ಅವರಿಗೆ ನಾವು ಸಿನಿಮಾ ನಟನೆಗಾಗಿ ಕೇಳಿದಷ್ಟು ಹಣವನ್ನು ಕೊಟ್ಟರೂ ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಚಿತ್ರದ ಒಂದು ಸಣ್ಣ ಪೋಸ್ಟ್ ಅನ್ನು ಕೂಡ ಗಿಲ್ಲಿ ನಟ ಮಾಡಿಲ್ಲ. ಗಿಲ್ಲಿ ನಟ ಬಿಗ್ ಬಾಸ್ ಸೀಸನ್ 12ರ ರಿಯಾಲಿಟಿ ಶೋಗೆ ಹೋಗುವ ಮುನ್ನವೇ ಪೂರ್ಣ ಪ್ರಮಾಣದಲ್ಲಿ ಹಣವನ್ನು ನಾವು ಕೊಟ್ಟಿದ್ದೇವೆ. ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ಬರುವಂತೆ ನಾವು ಕೇಳಿಕೊಂಡರೂ ಬರುತ್ತಿಲ್ಲ. ಇನ್ನು ಸಿನಿಮಾ ಪ್ರಚಾರಕ್ಕೆ ಬರುವಂತೆ ಕರೆ ಮಾಡಿದರೂ ನಮ್ಮ ಕರೆಗಳನ್ನು ಸ್ವೀಕಾರ ಮಾಡುತ್ತಿಲ್ಲ. ನಮ್ಮ ಸಿನಿಮಾದ ಒಂದೇ ಒಂದು ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.

8 ಪ್ರೀಮಿಯರ್ ಶೋ ಮಾಡಿದರೂ ಬಂದಿಲ್ಲ

ನಮ್ಮ ಸಿನಿಮಾದ ಕುರಿತಾಗಿ 8 ಪ್ರೀಮಿಯರ್ ಶೋಗಳನ್ನು ಮಾಡಿದ್ದೇವೆ, ಇದಕ್ಕೂ ಗಿಲ್ಲಿನಟ ಬಂದಿಲ್ಲ. ನಮ್ಮ ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದರೂ ಯಾಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ನಿರ್ಮಾಪಕರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಬೇಕು, ಕನ್ನಡ ಭಾಷೆಯನ್ನು ಬೆಳೆಸಬೇಕು ಎಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಹೆಚ್-8 ಸಿನಿಮಾವನ್ನು ನಾವು ಮಾಡಿದ್ದೇವೆ. ಈ ಸಿನಿಮಾ ಇದೀಗ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಿನ್ನೆ 8 ಕಡೆ ಹೌಸ್‌ಫುಲ್ ಪ್ರೀಮಿಯರ್ ಶೋ ಮಾಡಿದ್ದೇವೆ. ಪ್ರತಿಯೊಬ್ಬರೂ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಗಿಲ್ಲಿನಟ ಅವರು ಪ್ರಮುಖ ಪಾತ್ರಧಾರಿಯಾಗಿದ್ದರೂ, ಒಂದೇ ಒಂದು ಪೋಸ್ಟ್ ಅನ್ನು ಹಂಚಿಕೊಂಡಿಲ್ಲ. ಇದರಿಂದ ಸಿನಿಮಾಗೆ ಪ್ರಚಾರ ಕಾರ್ಯಕ್ಕೆ ಅವರೇ ಅಡ್ಡಿಯಾಗಿದ್ದಾರೆ ಎಂದು ಚಿತ್ರತಂಡದವರು ಆರೋಪಿಸಿದ್ದಾರೆ.

ಸೈಲೆಂಟಾಗಿ ಬಾರ್ಬಿ ಡಾಲ್‌ ನಿವೇದಿತಾ ಗೌಡಗೆ ಟಕ್ಕರ್‌ ಕೊಟ್ಟ ಪಳಾರ್‌ ಗಿಲ್ಲಿ!

ನಿರ್ದೇಶಕನಾಗುವ ಕನಸು ಕಮರಿ ಹೋಗುತ್ತಾ?

ಇನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕೆಲವು ನಟ-ನಟಿಯರು ಹಾಗೂ ಸಂಗೀತಕ ಕಲಾವಿದರು ಸೇರಿದಂತೆ ಹಲವರ ವಿರುದ್ಧ ಸಿನಿಮಾದಿಂದ ಬ್ಯಾನ್ ಮಾಡಲಾಗಿದೆ. ಆದರೆ, ಇದೀಗ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗದ ಗಿಲ್ಲಿನಟನ ವಿರುದ್ಧವೂ ದೂರು ದಾಖಲಾಗಿದ್ದು, ಈ ಕುರಿತಾಗಿ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಫಿಲ್ಮ್ ಚೇಂಬರ್‌ನಿಂದ ಗಿಲ್ಲಿಗೆ ನೋಟೀಸ್ ಜಾರಿ ಮಾಡಿ ಅವರಿಂದ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗದಿರಲು ಸ್ಪಷ್ಟೀಕರಣ ಪಡೆಯಬಹುದು. ಸೂಕ್ತ ಸ್ಪಷ್ಟೀಕರಣ ನೀಡದಿದ್ದರೆ ಗಿಲ್ಲಿಯ ಮೇಲೆ ಕ್ರಮವನ್ನೂ ಕೈಗೊಳ್ಳಬಹುದು. ಆಗ, ನಾನು ಕನ್ನಡ ಸಿನಿಮಾ ನಿರ್ದೇಶಕನಾಗಬೇಕು ಎಂದು ಗಾಂಧಿನಗರಕ್ಕೆ ಬಂದ ಗಿಲ್ಲಿ ನಟನ ಕನಸು ಆರಂಭದಲ್ಲಿಯೇ ಕಮರಿ ಹೋಗುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಗ್ ಬಾಸ್ ಸೀಸನ್ 12 ಟ್ರೋಫಿ ಗೆದ್ದ ನಂತರ ಹಲವು ಸಂದರ್ಶನಗಳು, ರಾಜಕೀಯ ವ್ಯಕ್ತಿಗಳ ಉತ್ಸವಗಳು, ಮಳಿಗೆ ಉದ್ಘಾಟನೆಗಳಲ್ಲಿ ಭಾಗಿಯಾಗಿದ್ದಾರೆ. ಇನ್ನು ರಾಜಕೀಯ ವ್ಯಕ್ತಿಗಳ ಮನೆಗೆ, ಕಚೇರಿಗಳಿಗೆ ಹೋಗಿ ಭೇಟಿ ಮಾಡುತ್ತಿದ್ದಾರೆ. ಜೊತೆಗೆ, ಹಿರಿಯ ನಟರ ಸಮಾಧಿಗಳಿಗೆ ಭೇಟಿ ನೀಡಿ, ಅಲ್ಲಿ ಬಿಗ್ ಬಾಸ್ ಟ್ರೋಫಿ ಕಪ್‌ ಅನ್ನು ಪ್ರದರ್ಶನ ಮಾಡಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ, ಅವರೇ ನಟನೆ ಮಾಡಿದ ಸಿನಿಮಾ ಪ್ರಚಾರಕ್ಕೆ ಹೋಗುತ್ತಿಲ್ಲ ಎಂಬ ವಿಚಾರ ಸಿನಿಮಾ ತಂಡದವರಿಗೆ ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಬೇಸರ ಉಂಟುಮಾಡಿದೆ.

ಅಭಿಮಾನಿಗಳ ಕೈಗೂ ಸಿಗದ ಗಿಲ್ಲಿ ನಟ

ಬಿಗ್ ಬಾಸ್ ಮನೆಯಲ್ಲಿ ಪ್ರತಿ ಮಾತುಗಳಿಂದಲೂ ಜನರನ್ನು ರಂಜಿಸುತ್ತಿದ್ದ ಗಿಲ್ಲಿ ನಟ, ಮನೆಯ ಹೊರಗೆ ಬಂದ ನಂತರ, ಒಂದೆರಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಬೇರೆಲ್ಲೂ ಕಾಣಸಿಗುತ್ತಿಲ್ಲ. ಮನೆಯವರೊಂದಿಗೆ ಸಮಯ ಕಳೆಯುತ್ತಿದ್ದಾರೆಂದರೆ ಅಲ್ಲಿಯೂ ಸಿಗುತ್ತಿಲ್ಲ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಭಾರೀ ಪ್ರಚಾರ ಮಾಡಿ ಗೆಲ್ಲಿಸಿದ ಅಭಿಮಾನಿಗಳನ್ನೂ ಭೇಟಿ ಮಾಡುತ್ತಿಲ್ಲ. ಹೀಗಾಗಿ, ಗಿಲ್ಲಿ ನಟ ಎಲ್ಲಿದ್ದಾರೆ ಎಂಬುದೇ ನಿಗೂಢವಾಗಿದೆ ಎಂದು ಅಭಿಮಾನಿಗಳ ಮಾತಾಗಿದೆ. ಆಗಾಗ್ಗೆ ಟಿವಿ ಚಾನೆಲ್‌ಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಜನರೆದುರೇ ಬಂದು ಹೇಳುವಂತೆ ನೆಟ್ಟಿಗರು ಆಗ್ರಹ ಮಾಡಿದ್ದಾರೆ.