ʼಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಶುರುವಾದರೆ ಮೂರು ಧಾರಾವಾಹಿಗಳು ಅಂತ್ಯ ಆಗಬೇಕು. ಹಾಗಾದರೆ ಆ ಸೀರಿಯಲ್ಗಳು ಯಾವುವು?
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋವನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡೋದು ಪಕ್ಕಾ ಆಗಿದೆ. ಆದರೆ ಈ ಶೋ ಯಾವಾಗ ಶುರು ಆಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಎಂದಿನಂತೆ ಈ ಬಾರಿಯೂ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ʼಬಿಗ್ ಬಾಸ್ʼ ಶೋ ಶುರು ಆಗಬಹುದು. ಈಗಾಗಲೇ ಸ್ಪರ್ಧಿಗಳ ಆಯ್ಕೆ ತಯಾರಿ ನಡೆಯುತ್ತಿದೆ. ಈ ಶೋ ಪ್ರಸಾರ ಆಗಬೇಕು ಎಂದರೆ ಮೂರು ಧಾರಾವಾಹಿಗಳು ಅಂತ್ಯ ಆಗಬೇಕಿದೆ.
ಮೂರು ಧಾರಾವಾಹಿಗಳು ಅಂತ್ಯ!
ಈ ಹಿಂದಿನಿಂದಲೂ ಬಿಗ್ ಬಾಸ್ ಶೋಗೋಸ್ಕರ ಮೂರು ಧಾರಾವಾಹಿಗಳು ಅಂತ್ಯ ಆಗಿವೆ. ಇನ್ನು ಕೆಲ ಧಾರಾವಾಹಿಗಳ ಟೈಮಿಂಗ್ ಬದಲಾಯಿಸಲಾಗಿತ್ತು. ಸಾಮಾನ್ಯವಾಗಿ ಟಿಆರ್ಪಿಯಲ್ಲಿ ಕಡಿಮೆ ಇರುವ ಧಾರಾವಾಹಿಗಳನ್ನೋ ಅಥವಾ ಲೀಡ್ ಕಲಾವಿದರು ಧಾರಾವಾಹಿಯಲ್ಲಿ ಮುಂದುವರೆಯಲು ರೆಡಿ ಇಲ್ಲ ಅಂದ್ರೆ ಸೀರಿಯಲ್ಗೆ ಇತಿಶ್ರೀ ಹಾಡಲಾಗುವುದು.
ಯಾವ ಸೀರಿಯಲ್ಗಳು ಅಂತ್ಯವಾಗತ್ತೆ?
ಹಾಗಾದರೆ ಈ ಬಾರಿ ಯಾವ ಧಾರಾವಾಹಿಗಳು ಅಂತ್ಯ ಆಗಬಹುದು ಎಂಬ ಕುತೂಹಲ ನಿಮಗೂ ಇರಬಹುದು. ಅಂದಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಧಾರಾವಾಹಿಗಳಲ್ಲಿ ರಾಮಾಚಾರಿ ಧಾರಾವಾಹಿ, ಕರಿಮಣಿ ಧಾರಾವಾಹಿ, ದೃಷ್ಟಿಬೊಟ್ಟು ಧಾರಾವಾಹಿಯ ಟಿಆರ್ಪಿ ಕಡಿಮೆ ಇದೆ. ಹೀಗಾಗಿ ಈ ಮೂರು ಸೀರಿಯಲ್ಗಳು ಎಂಡ್ ಆಗಬಹುದು.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಧಾರಾವಾಹಿಯು ಕಳೆದ ಮೂರು ವಾರಗಳಿಂದ ಕ್ರಮವಾಗಿ 2.3, 2.5, 2,3 TVR ಪಡೆಯುತ್ತಲಿದೆ. ರಿತ್ವಿಕ್ ಕೃಪಾಕರ್, ಮೌನ ಗುಡ್ಡೇಮನೆ ಅವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡ ಈ ಧಾರಾವಾಹಿಯು ಆರಂಭವಾಗಿ ಮೂರು ವರ್ಷಗಳಾಯ್ತು. ಇವರಿಬ್ಬರು ಸಿನಿಮಾದಲ್ಲಿ ಭವಿಷ್ಯ ಕಾಣುವ ಆಸೆ ಹೊಂದಿದ್ದಾರೆ. ಹೀಗಾಗಿ ಈ ಧಾರಾವಾಹಿ ಅಂತ್ಯ ಆಗಲೂಬಹುದು.
ಕರಿಮಣಿ ಧಾರಾವಾಹಿ
2024ರಲ್ಲಿ ಆರಂಭವಾದ ಈ ಧಾರಾವಾಹಿಯು ಕಳೆದ ಮೂರು ವಾರಗಳಲ್ಲಿ ಕ್ರಮವಾಗಿ 1.9, 2.3,2.5 TVR ಪಡೆದಿದೆ. ಸ್ಪಂದನಾ ಸೋಮಣ್ಣ, ಅಶ್ವಿನ್ ಎಚ್ ನಟನೆಯ ಈ ಧಾರಾವಾಹಿಯಲ್ಲಿ ದೊಡ್ಡ ಧಾರಾವಾಹಿ ಬಳಗವೇ ಇದೆ. ಈ ಧಾರಾವಾಹಿ ಅಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆಯದ ಕಾರಣ ಈ ಸೀರಿಯಲ್ ಅಂತ್ಯ ಆದರೂ ಆಶ್ಚರ್ಯವಿಲ್ಲ.
ದೃಷ್ಟಿಬೊಟ್ಟು ಧಾರಾವಾಹಿ
ದೃಷ್ಟಿಬೊಟ್ಟು ಧಾರಾವಾಹಿಗೆ ಕಳೆದ ಮೂರು ವಾರಗಳಿಂದ ಕ್ರಮವಾಗಿ 2.8, 3.3, 3.1 tvr ಸಿಕ್ಕಿದೆ. ವಿಜಯ್ ಸೂರ್ಯ, ಅರ್ಪಿತಾ ಮೋಹಿತೆ ನಟನೆಯ ಈ ಧಾರಾವಾಹಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ವೀಕ್ಷಣೆ ಪಡೆದಿಲ್ಲ. ಹೀಗಾಗಿ ಈ ಧಾರಾವಾಹಿ ಅಂತ್ಯವಾದರೂ ಆಶ್ಚರ್ಯವಿಲ್ಲ.
ಬಿಗ್ ಬಾಸ್ ಕಥೆ ಏನು?
ಬಿಗ್ ಬಾಸ್ ಶೋ ನಿರೂಪಣೆ ಮಾಡೋದಿಲ್ಲ ಎಂದು ಹೇಳಿ, ಆಮೇಲೆ ಬಿಗ್ ಬಾಸ್ ಶೋ ನಿರೂಪಣೆ ಮಾಡ್ತೀನಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಹೀಗಾಗಿ ಈ ಬಾರಿ ಶೋನಲ್ಲಿ ಏನಾದರೂ ವಿಶೇಷತೆ ಇರಬಹುದಾ ಎಂಬ ಪ್ರಶ್ನೆ ಎದ್ದಿದೆ.
