ಬಿಗ್ ಬಾಸ್ ಕನ್ನಡ ಫಿನಾಲೆ ಹತ್ತಿರವಾಗುತ್ತಿದ್ದಂತೆ ಆಟದ ಲೆಕ್ಕಾಚಾರಗಳು ಸಂಪೂರ್ಣ ಬದಲಾಗಿವೆ. ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿದ್ದ ಗಿಲ್ಲಿ ನಟ ತಮ್ಮ ಆಟದಿಂದ ಹಿಂದೆ ಬಿದ್ದಿದ್ದರೆ, ನೆಗೆಟಿವಿಟಿಯಿಂದ ಆರಂಭಿಸಿದ ಅಶ್ವಿನಿ ಗೌಡ ಇದೀಗ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಬೆಂಗಳೂರು (ಜ.10): ಬಿಗ್ ಬಾಸ್ ಕನ್ನಡದ ಈ ಸೀಸನ್ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ನೂರು ದಿನಗಳ ಸುದೀರ್ಘ ಪಯಣದಲ್ಲಿ ಅನೇಕ ಸ್ಪರ್ಧಿಗಳು ಬಂದರು, ಹೋದರು. ಆದರೆ ಆರಂಭದಿಂದಲೂ ಸದ್ದು ಮಾಡುತ್ತಾ, ಅತಿ ಹೆಚ್ಚು ಪ್ರೋಮೋಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದವರು ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ. ಇದೀಗ ಫಿನಾಲೆ ಹತ್ತಿರವಾಗುತ್ತಿರುವಾಗ, ಯಾರ ಕೈಗೆ ಕಪ್ ಸಿಗಬಹುದು ಎಂಬ ಚರ್ಚೆ ಜೋರಾಗಿದೆ. ಲೇಖಕ ದಿನೇಶ್ ಕುಮಾರ್ ಎಸ್.ಸಿ. ವಿಶ್ಲೇಷಣೆಯ ಪ್ರಕಾರ, ಈ ಸೀಸನ್‌ನ ಆಟದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ.

ಗಿಲ್ಲಿ ನಟ: ಸಿದ್ಧ ಮಾದರಿಯ ಪ್ರೇರಣೆ ಮತ್ತು ವಾಸ್ತವದ ಎಡವಟ್ಟು

ಗಿಲ್ಲಿ ನಟ ಈ ಸೀಸನ್‌ನ ಪ್ರಬಲ ಸ್ಪರ್ಧಿ ಎಂಬುದು ಸುಳ್ಳಲ್ಲ. ಅವರು ಕಿಚ್ಚ ಸುದೀಪ್ ಅವರ ಮುಂದೆ ತಾನು ಹನುಮಂತ ಮತ್ತು ಪ್ರಥಮ್ ಅವರ ಗೆಲುವಿನಿಂದ ಪ್ರೇರಣೆ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಬಿಗ್ ಬಾಸ್ ಇತಿಹಾಸದಲ್ಲಿ ಪ್ರತಿಯೊಂದು ಸೀಸನ್‌ನ ಲಕ್ಷಣಗಳೇ ಬೇರೆ ಇರುತ್ತವೆ ಎಂಬುದು ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಮೊದಲ ಸೀಸನ್‌ನಲ್ಲಿ ಅಪ್ರತಿಮ ಪ್ರತಿಭಾವಂತ ಅರುಣ್ ಸಾಗರ್ ಅವರು ರನ್ನರ್ ಅಪ್ ಆಗಿ ಉಳಿಯಲು ಒಂದು 'ಲವ್ ಟ್ರಾಕ್' ಕಾರಣವಾಗಿತ್ತು. ಇಂದು ಗಿಲ್ಲಿ ಕೂಡ ಅದೇ ಹಾದಿಯಲ್ಲಿದ್ದಾರೆ.

ಕಾವ್ಯ ಜೊತೆಗಿನ ಸ್ನೇಹ ಅಥವಾ ಪ್ರೀತಿಯನ್ನು ನಿಭಾಯಿಸಲು ಅವರಿಗೆ ಹೊರಗಡೆ ಸಾಕಷ್ಟು ಸಮಯವಿತ್ತು. ಆದರೆ ಮನೆಯ ಒಳಗಡೆ ಹುಡುಗಿಯ ಬೆನ್ನು ಬೀಳುವುದು, ತನ್ನ ವ್ಯಕ್ತಿತ್ವ ಮತ್ತು ಆಟವನ್ನು ಬದಿಗೊತ್ತಿ ಅಂಗಲಾಚುವುದು ಅವರ ಅಭಿಮಾನಿಗಳಿಗೂ ಪಥ್ಯವಾಗುತ್ತಿಲ್ಲ. ಹಾಸ್ಯ ಮತ್ತು ಅಪಹಾಸ್ಯದ ನಡುವಿನ ಗೆರೆಯನ್ನು ಅರಿತು ಆಡದಿದ್ದರೆ ಅನಾಹುತ ತಪ್ಪಿದ್ದಲ್ಲ. ಕುರಿ ಪ್ರತಾಪ್, ಮಂಜು ಪಾವಗಡ ಅಂತಹವರು ಇನ್ನೊಬ್ಬರನ್ನು ಲೇವಡಿ ಮಾಡದೆಯೂ ನಗೆ ಉಕ್ಕಿಸಬಹುದು ಎಂದು ತೋರಿಸಿಕೊಟ್ಟಿದ್ದರು. ಆದರೆ ಗಿಲ್ಲಿಗೆ ಇತ್ತೀಚಿನ ದಿನಗಳಲ್ಲಿ 'ಸ್ಪೈನಲ್ ಕಾರ್ಡ್' ಇಲ್ಲ ಎಂಬ ಟೀಕೆ ನಿಜವೆನಿಸುವಂತೆ ಅವರು ಬೆಡ್‌ಶೀಟ್ ಹೊದ್ದು ಮಲಗುತ್ತಾ ಫೂಟೇಜ್ ಪಡೆಯುತ್ತಿದ್ದಾರೆ.

ರಕ್ಷಿತಾ ಶೆಟ್ಟಿ: ಈ ಸೀಸನ್‌ನ ಎನರ್ಜಿ ಬಾಂಬ್

ರಕ್ಷಿತಾ ಶೆಟ್ಟಿ ಈ ಸೀಸನ್‌ನ 'ಸರ್ಪ್ರೈಸ್ ಪ್ಯಾಕೇಜ್'. ಅವರ ಎನರ್ಜಿಯನ್ನು ಮ್ಯಾಚ್ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಮುಗ್ಧೆಯಂತೆ ಕಂಡರೂ ಒಮ್ಮೊಮ್ಮೆ ಅವರು ತೋರುವ ಪ್ರಬುದ್ಧತೆ ಅದ್ಭುತ. ಕಂಫರ್ಟ್ ಜೋನ್‌ನಿಂದ ಆಚೆ ಬಂದು ಎದುರಾಳಿಗಳ ಜೊತೆ ಮಾತನಾಡುವ ಧೈರ್ಯ ಅವರಿಗಿದೆ. ಇತ್ತೀಚೆಗೆ ಗಿಲ್ಲಿಗೆ 'ಮೀಟರ್ ಬೇಕು' ಎಂದು ಅವರು ಸವಾಲು ಹಾಕಿದ್ದು ಅವರ ಆತ್ಮವಿಶ್ವಾಸಕ್ಕೆ ಸಾಕ್ಷಿ.

ಅಶ್ವಿನಿ ಗೌಡ: ನೆಗೆಟಿವಿಟಿಯಿಂದ ಗೆಲುವಿನ ಹೊಸ್ತಿಲವರೆಗೆ

ಆರಂಭದ ದಿನಗಳಲ್ಲಿ ಅಶ್ವಿನಿ ಗೌಡ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ನೆಗೆಟಿವಿಟಿ ಇತ್ತು. ಆದರೆ ಇಂದು ಅವರು ಬಿಗ್ ಬಾಸ್ ಗೆಲ್ಲುವ ದಟ್ಟ ಸಾಧ್ಯತೆ ಹೊಂದಿದ್ದಾರೆ. ಇದಕ್ಕೆ ಕಾರಣ 'ಸಾರ್ವಜನಿಕ ಅನುಕಂಪ' ಮತ್ತು ಅವರ ಒಳಗಿನ 'ತಾಯ್ತನ'. ಮನೆಯವರೆಲ್ಲರೂ ಸೇರಿ ಒಬ್ಬರನ್ನು ಐಸೊಲೇಟ್ ಮಾಡಿದರೆ, ಹೊರಗಿರುವ ಜನರು ಅವರ ಪರ ನಿಲ್ಲುತ್ತಾರೆ ಎಂಬ ತತ್ವ ಅಶ್ವಿನಿ ವಿಷಯದಲ್ಲಿ ನಿಜವಾಗಿದೆ.

ಅಶ್ವಿನಿ ಅವರ ದೊಡ್ಡ ಶಕ್ತಿ ಅವರ ತಾಯ್ತನ. ಗಿಲ್ಲಿ ನಟನ ಅಶಿಸ್ತಿನ ಬಗ್ಗೆ (ಸ್ನಾನ ಮಾಡಲ್ಲ, ನೀರು ಹಾಕಲ್ಲ) ಮಾತನಾಡುವಾಗ "ನನ್ನ ಮಗ ಅಂದುಕೊಂಡು ಮಾಡ್ತೀನಿ ಬಿಡು" ಎಂದು ಅವರು ನೀಡಿದ ಕೌಂಟರ್ ಅದ್ಭುತವಾಗಿತ್ತು. ಟಾಸ್ಕ್ ವೇಳೆ ರಕ್ಷಿತಾ ಬಿದ್ದಾಗಲೂ ಅಶ್ವಿನಿ ಅವರಲ್ಲಿನ ಕಾಳಜಿ ಎದ್ದು ಕಂಡಿತ್ತು. ಸೂರಜ್ ಮತ್ತು ಅಭಿಷೇಕ್ ಕೂಡ ಮನೆಯಿಂದ ಹೊರಬಂದ ಮೇಲೆ ಅಶ್ವಿನಿ ಅವರ ಈ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತಿಮ ಘಟ್ಟದ ಲೆಕ್ಕಾಚಾರ

ಸದ್ಯದ ಪರಿಸ್ಥಿತಿಯಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಮತ್ತು ಧ್ರುವಂತ್ ಟಾಪ್ ಫೋರ್‌ನಲ್ಲಿ ಇರುವ ಸಾಧ್ಯತೆ ಇದೆ. ಉಳಿದಂತೆ ಕಾವ್ಯ ಗೊಂದಲದಲ್ಲಿದ್ದರೆ, ಧನುಷ್ ಬರಿ ಟಾಸ್ಕ್‌ಗೆ ಸೀಮಿತವಾಗಿದ್ದಾರೆ. ರಾಶಿಕಾ ಮತ್ತು ರಘು ಅವರಲ್ಲಿ ಗೆಲ್ಲುವ ಫೈರ್ ಕಾಣುತ್ತಿಲ್ಲ. ಜಾನ್ಹವಿ ಅವರಂತಹ ಒಳ್ಳೆಯ ಕಂಟೆಸ್ಟೆಂಟ್ ಹೊರಹೋದದ್ದು ದುರದೃಷ್ಟಕರ.

ಒಟ್ಟಾರೆಯಾಗಿ ಹೇಳುವುದಾದರೆ, ಅಶ್ವಿನಿ ಗೌಡ ಅವರು ನೂರು ದಿನಗಳ ಕಾಲ ಆಡಿದ ರೀತಿ, ತಮ್ಮ ತಪ್ಪುಗಳಿಗೆ ರಿಗ್ರೆಟ್ ಇಟ್ಟುಕೊಂಡು ಸಾರಿ ಕೇಳಿದ ರೀತಿ ಅವರನ್ನು ಜನರ ಹತ್ತಿರವಾಗಿಸಿದೆ. ಸುಲಭವಾಗಿ ಗೆಲ್ಲಬಹುದಾಗಿದ್ದ ಗಿಲ್ಲಿ, ಈಗ ತನ್ನ ಅತಿಯಾದ ಆತ್ಮವಿಶ್ವಾಸ ಮತ್ತು ಉಡಾಫೆಯಿಂದ ಕಷ್ಟ ಪಟ್ಟು ಗೆಲ್ಲಬೇಕಾದ ಹಂತಕ್ಕೆ ಬಂದಿದ್ದಾರೆ. ಈ ಬಾರಿ ಅಶ್ವಿನಿ ಗೌಡ ಅವರೇ ಗೆಲ್ಲಲಿ ಎಂಬುದು ಅನೇಕರ ಆಸೆಯಾಗಿದೆ.