Bhagyalakshmi Serial: ಸೌಟು ಹಿಡಿದೋಳು ಅಂದ್ರೆ ಸುಮ್ನೇನಾ? ತಾಂಡವ್ ಎದೆ ಮೇಲೆಯೇ ಕಾಲಿಟ್ಟಳಲ್ಲ ಭಾಗ್ಯ!

Synopsis
ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು, ಅಡುಗೆ ಮನೆಯಲ್ಲಿ ಸೌಟು ಆಡಿಸುವವಳು ಅದೇ ಸೌಟಿನಿಂದ ಸಂಸಾರವನ್ನೂ ನಿಭಾಯಿಸಬಲ್ಲಳು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ ಭಾಗ್ಯ
ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಕೆಲವು ಪುರುಷರ ಅಹಂ ಹೇಳುವುದು ಉಂಟು. ಅಡುಗೆ ಮನೆಯಲ್ಲಿ ಸೌಟು ಹಿಡಿದವಳು ಸಂಸಾರ ನಡೆಸಲು ಸಾಧ್ಯವಿಲ್ಲ, ಸಂಸಾರ ನಡೆಸಲು ಹಣ ಬೇಕು, ಹಣ ಬೇಕು ಎಂದರೆ ಗಂಡಸು ಬೇಕು... ಹೀಗೆ ಏನೇನೋ ಕಲ್ಪನೆಗಳಿರುವ ಗಂಡಸರಿಗೋನೂ ಕೊರತೆ ಇಲ್ಲ. ನಿಜ ಜೀವನದಲ್ಲಿ ಆಗೋದನ್ನೇ ಅಷ್ಟಕ್ಕೂ ಸೀರಿಯಲ್ಗಳಲ್ಲಿ ತೋರಿಸೋದು ಅಲ್ವಾ? ಇದೇ ಇದೇ ಡೈಲಾಗ್ ಹೇಳಿದ ತಾಂಡವ್ ಎದೆ ಮೇಲೆಯೇ ಭಾಗ್ಯ ಕಾಲಿಟ್ಟುಬಿಟ್ಟಿದ್ದಾಳೆ. ಹಾಗಂತ ನೇರವಾಗಿ ಗಂಡನ ಎದೆ ಮೇಲೆ ಕಾಲಿಟ್ಟಿದ್ದಾಳೆ ಎನ್ನುವ ಅರ್ಥವಲ್ಲ, ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದಿರುವ ತಾಂಡವ್ ಮಾತಿಗೆ ತಿರುಗೇಟು ಕೊಟ್ಟು ಆತನ ಕಚೇರಿಯಲ್ಲಿಯೇ ಕ್ಯಾಂಟೀನ್ ನಡೆಸುವ ಅವಕಾಶ ಪಡೆದುಕೊಂಡಿದ್ದಾಳೆ ಎಂದಷ್ಟೇ ಇದರ ಅರ್ಥ.
ಅಷ್ಟಕ್ಕೂ, ಸ್ವಲ್ಪ ಅತಿಯೇ ಎನ್ನಿಸುವಷ್ಟು ತಾಂಡವ್ ಮತ್ತು ಶ್ರೇಷ್ಠಾ ಹೆಜ್ಜೆ ಹೆಜ್ಜೆಗೂ ಭಾಗ್ಯಳನ್ನು ಸೋಲಿಸಲು ಪ್ಲ್ಯಾನ್ ಮಾಡುತ್ತಲೇ ಇರುವವರು. ತನ್ನ ಲವರ್ ಅನ್ನು ತನಗೆ ಬಿಟ್ಟುಕೊಟ್ಟರೂ ತಾಂಡವ್ಗೆ ಸಮಾಧಾನ ಇಲ್ಲ. ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯ ಪುರುಷರಿಗೆ ಸಾಕ್ಷಿಯಾಗಿ ನಿಂತಿದ್ದಾನೆ ಈ ತಾಂಡವ್ ಪಾತ್ರಧಾರಿ. ಆದರೆ ಭಾಗ್ಯಳಂಥ ಹೆಣ್ಣು ಕೂಡ ಇದೇ ಭೂಮಿಯ ಮೇಲೆ ಸಾಕಷ್ಟು ಮಂದಿ ಇದ್ದಾರೆ ಎನ್ನುವ ಸತ್ಯ ಆತನಿಗೆ ಅರ್ಥವಾಗುತ್ತಿಲ್ಲವಷ್ಟೇ. ಸೀರಿಯಲ್ ನೋಡಿದಾಗಲೆಲ್ಲಾ ಭಾಗ್ಯಳ ಗೋಳು ನೋಡಲಾಗದೇ ಸೀರಿಯಲ್ ಮುಗಿಸಿ ಎಂದು ಕೆಟ್ಟ ಕೆಟ್ಟ ಕಮೆಂಟ್ ಹಾಕುವವರೇ ಹೆಚ್ಚು. ಆದರೆ ನಿಜ ಜೀವನದಲ್ಲಿಯೂ ತಾಂಡವ್ನಂಥ ಪುರುಷರು, ಭಾಗ್ಯಳಂಥ ಮಹಿಳೆಯರು ಇರುವುದು ಅಷ್ಟೇ ಸತ್ಯ. ಸೀರಿಯಲ್ಗಳಲ್ಲಿ ಟಿಆರ್ಪಿಗಾಗಿ ಸ್ವಲ್ಪ ಅತಿಯಾಗಿ ತೋರಿಸುವುದು ಕೆಲವೊಮ್ಮೆ ಸತ್ಯವಾದರೂ, ಭಾಗ್ಯಳನ್ನೇ ಮಾದರಿಯಾಗಿಟ್ಟುಕೊಂಡು ಹಲವು ಮಹಿಳೆಯರು ನಿಜ ಜೀವನದಲ್ಲಿಯೂ ಸಾಧನೆ ಮಾಡಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಪುಟ್ಟಕ್ಕನನ್ನು ನೋಡಿ, ಈ ಸೀರಿಯಲ್ನಲ್ಲಿ ಭಾಗ್ಯಳನ್ನು ನೋಡಿ ತಮ್ಮ ಜೀವನ ಬದಲಾಗಿದೆ ಎಂದಿರುವ ಮಹಿಳೆಯರೂ ಇದ್ದಾರೆ ಎನ್ನುವುದೇ ಇದಕ್ಕೆ ಸಾಕ್ಷಿಯಾಗಿದೆ.
ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ
ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಭಾಗ್ಯಳ ಊಟವನ್ನು ತಿಂದು ತಾಂಡವ್ ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡಿದ್ದ. ಆದರೆ ಪಾಪ, ಆತನಿಗೆ ತಾನು ತಿನ್ನುತ್ತಿರುವ ಊಟ ಭಾಗ್ಯಳೇ ಮಾಡಿದ್ದು ಎನ್ನುವುದು ತಿಳಿದಿರಲಿಲ್ಲ. ಶ್ರೇಷ್ಠಾಳಿಗೆ ಈ ವಿಷಯ ತಿಳಿದಿದ್ದರೂ, ಈ ಅಡುಗೆ ಮಾಡುತ್ತಿರುವವಳನ್ನು ತಾಂಡವ್ ಹೊಗಳುವುದನ್ನು ನೋಡಿ ಆಕೆಗೆ ಸತ್ಯ ಹೇಳುವುದು ಹೇಗೆ ಎಂದು ತಿಳಿದಿರಲಿಲ್ಲ. ಸತ್ಯ ತಿಳಿದಿದ್ದರೂ ಶ್ರೇಷ್ಠಾ ಬಾಯಿ ಮುಚ್ಚಿಕೊಂಡಿರುವುದಕ್ಕೆ ತಾಂಡವ್ ರೇಗಿದ್ದಾನೆ. ಆದರೆ ಏನೂ ಮಾಡುವ ಹಾಕಿಲ್ಲವಾಗಿದೆ.
ಅಷ್ಟಕ್ಕೂ, ಭಾಗ್ಯಳಿಗೆ ಇಂಥದ್ದೊಂದು ಅಡುಗೆ ಐಡಿಯಾ ಕೊಟ್ಟಿದ್ದೂ ತಾಂಡವ್ನೇ. ಭಾಗ್ಯ ಮಾಡುವ ಎಲ್ಲಾ ಕೆಲಸಕ್ಕೂ ಆತ ಕಲ್ಲು ಹಾಕಿದ್ದ. ಕೊನೆಗೆ ಗೆದ್ದು ಬೀಗಿದ್ದ ಆತ, ಮುಂದಿನ ತಿಂಗಳ ಇಎಂಐ ಹೇಗೆ ಕಟ್ಟುತ್ತಿಯಾ? ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದಿದ್ದ. ಇದನ್ನು ಕೇಳುತ್ತಿದ್ದಂತೆಯೇ ಭಾಗ್ಯಳಿಗೆ ಹೊಸ ಜೀವವೇ ಬಂದಂತಾಗಿತ್ತು. ಅದೇ ವೇಳೆ ಹಾಸ್ಟೆಲ್ ಹುಡುಗರು ತನ್ನ ಅಡುಗೆಯನ್ನು ಹೊಗಳಿದ್ದು ನೆನಪಿಗೆ ಬಂತು. ಅಡುಗೆ ಮನೆಯಲ್ಲಿ ಸೌಟು ಆಡಿಸಿ, ಬದುಕನ್ನು ಕಟ್ಟಿಕೊಳ್ಳಬಹುದಲ್ಲ ಎನ್ನುವ ಯೋಚನೆ ಬಂದಿದೆ. ಈ ಕೆಲಸವನ್ನಂತೂ ತಾಂಡವ್ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲ. ಇದೇ ತನಗೆ ವರದಾನ ಆಗಬಹುದು ಎಂದುಕೊಂಡು ಅದನ್ನು ಮಾಡುವ ಯೋಚನೆ ಮಾಡಿ, ಈ ಹಂತಕ್ಕೆ ತಲುಪಿದ್ದಾಳೆ. ಅಷ್ಟಕ್ಕೂ ಅಡುಗೆ ಮಾಡಿಯೇ ಬದುಕು ಕಟ್ಟಿಕೊಳ್ಳುತ್ತಿರುವ ಸಹಸ್ರಾರು ಮಂದಿ ಇದ್ದಾರೆ ಎನ್ನುವುದೂ ಅಷ್ಟೇ ನಿಜ.
ಕೂದಲಿಗೆ ಶ್ಯಾಂಪೂ, ಮುಖಕ್ಕೆ ಬ್ಯೂಟಿ ಕ್ರೀಂ ಬಿಟ್ಟಾಕಿ: ಅಕ್ಕಿ ನೀರು ಹೀಗೆ ಉಪಯೋಗಿಸಿ ನೋಡಿ ಕಮಾಲ್