'ಅಮೃತಧಾರೆ'ಯಲ್ಲಿ ಸುಧಾ-ಸಚಿನ್ ಸ್ನೇಹ ಬೆಳೆದಿದ್ದು, ಮದುವೆಯಾಗುವ ಸೂಚನೆಗಳಿವೆ. ಸಚಿನ್‌ನ ಒಳ್ಳೆಯತನ ಅನುಮಾನ ಮೂಡಿಸಿದ್ದು, ಅವನ ನಿಜವಾದ ಸ್ವಭಾವ ಮತ್ತು ಸುಧಾಳ ಮೊದಲ ಗಂಡನ ಬಗ್ಗೆ ಕುತೂಹಲ ಮೂಡಿದೆ. ಧಾರಾವಾಹಿಯಲ್ಲಿ ಗೌತಮ್‌ನ ಆಸ್ತಿಗಾಗಿ ಮಲತಾಯಿ ಕುತಂತ್ರ ರೂಪಿಸುತ್ತಿದ್ದಾಳೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಲಕ್ಷ್ಮೀ ಈಗ ತನ್ನ ತಾಯಿ ಸುಧಾಗೂ ಸಚಿನ್‌ಗೂ ಸ್ನೇಹ ಶುರುವಾಗುವ ಹಾಗೆ ಮಾಡಿಸಿದ್ದಾಳೆ, ಇವರಿಬ್ಬರ ನಡುವಿನ ಕೋಪ, ಮನಸ್ತಾಪ ಕರಗಿ ಸ್ನೇಹ ಸೃಷ್ಟಿ ಆಗುವಂತೆ ಮಾಡಿದ್ದಾಳೆ.‌ ಈಗ ಅಣ್ಣ ಸಚಿನ್ ಆಗಿರಬಹುದಾ? ಸೀತಾರಾಮ ಥರ ಸುಧಾಗೆ ಅವನು ತಾಳಿ ಕಟ್ತಾನಾ? ಎನ್ನುವ ಪ್ರಶ್ನೆ ಶುರುವಾಗಿದೆ.

Add Asianetnews Kannada as a Preferred SourcegooglePreferred

ಸಚಿನ್‌ ಒಳ್ಳೆಯತನವೇ ಒಂದಷ್ಟು ಅನುಮಾನ ಮೂಡುವ ಹಾಗೆ ಮಾಡಿದೆ. ನಿಜಕ್ಕೂ ಸಚಿನ್‌ ಇಷ್ಟೊಂದು ಒಳ್ಳೆಯವನಾ? ಸುಧಾ ಬಾಳಲ್ಲಿ ಅವನು ಬೆಳಕು ಮೂಡಿಸ್ತಾನಾ ಎನ್ನುವ ಪ್ರಶ್ನೆ ಎದ್ದಿದೆ. ಮಲ್ಲಿ ಅಣ್ಣ ಸಚಿನ್‌ ಆಗಿರಬಹುದಾ? ಭೂಪತಿಯೇ ತನ್ನ ಮಗನನ್ನು ಈ ಮನೆಗೆ ಕಳಿಸಿರಬಹುದಾ ಎಂಬ ಡೌಟ್‌ ಬಂದಿದೆ. ಈಗಾಗಲೇ ಸುಧಾಗೆ ಮದುವೆಯಾಗಿ ಲಕ್ಷ್ಮೀ ಎಂಬ ಮಗಳಿದ್ದಾಳೆ, ಗಂಡನೂ ಸತ್ತಿದ್ದಾನೆ. ʼಸೀತಾರಾಮʼ ಧಾರಾವಾಹಿಯಲ್ಲಿ ಮಗಳಿರುವ ತಾಯಿಗೆ ಶ್ರೀರಾಮ್‌ ದೇಸಾಯಿ ಬಾಳು ಕೊಡುತ್ತಾನೆ, ಹಾಗೆಯೇ ಇಲ್ಲಿಯೂ ಆಗಬಹುದಾ?

ಸಚಿನ್‌ ಆಸರೆ ಸಿಗತ್ತಾ? 
ಧಾರಾವಾಹಿ, ಸಿನಿಮಾಗಳಲ್ಲಿ ಸಾಮಾನ್ಯವಾಗಿ ಒಂದು ಜೋಡಿ ಮಧ್ಯೆ ಪದೇ ಪದೇ ಜಗಳ ಆಗುತ್ತಿದೆ ಎಂದರೆ ಅವರಿಬ್ಬರು ಲವ್‌ ಮಾಡ್ತಾರೆ, ಮದುವೆ ಆಗ್ತಾರೆ ಅಂತಲೇ ಊಹಿಸಿಕೊಳ್ಳಬೇಕು. ಆಮೇಲೆ ಅದೇ ಆಗುವುದು. ಸಚಿನ್‌, ಸುಧಾ ಕೂಡ ಯಾವಾಗಲೂ ಜಗಳ ಆಡುತ್ತಿರುತ್ತಾರೆ. ಅವರಿಬ್ಬರ ಜಗಳ ಸ್ವಲ್ಪ ತಣ್ಣಗಾಗಿ ಸ್ನೇಹ ಕೂಡ ಈಗ ಆರಂಭವಾಗಿದೆ. ಮುಂದೆ ಇವರಿಬ್ಬರು ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಲೂಬಹುದು. ಈಗಾಗಲೇ ಗಂಡನನ್ನು ಕಳೆದುಕೊಂಡಿರೋ ಸುಧಾಳಿಗೆ ಸಚಿನ್‌ ಆಸರೆಯೂ ಸಿಗಬಹುದು, ಏನಂತೀರಾ? 

ಮೊದಲ ಗಂಡ ಯಾರು? 
ಸಚಿನ್‌ ನಿಜಕ್ಕೂ ತುಂಬ ಒಳ್ಳೆಯವನ ಥರ ಕಾಣುತ್ತಾನೆ. ʼಅತಿ ವಿನಯಂ ದೂರ್ತ ಲಕ್ಷಣಂʼ ಎಂದು ಹೇಳ್ತಾರೆ. ಹೀಗಾಗಿ ಸಚಿನ್‌ ನಡೆಯಲ್ಲಿ ನಿಜಕ್ಕೂ ಅನುಮಾನ ಕೂಡ ಕಾಡ್ತಿದೆ. ಸಚಿನ್‌ ಅಸಲಿ ಮುಖ ಏನು ಎನ್ನೋದು ಮೊದಲು ಗೊತ್ತಾಗಬೇಕು. ಅಷ್ಟೇ ಅಲ್ಲದೆ ಸಚಿನ್‌ ಒಳ್ಳೆಯವನಾದರೆ, ಸುಧಾ ಜೊತೆ ಮದುವೆ ಆಗಲೂಬಹುದು. ಸಚಿನ್‌ ಕೆಟ್ಟವನಾಗಿದ್ದು, ಅವನ ಜೊತೆ ಮದುವೆ ಆದರೆ ಸುಧಾ ಬದುಕು ನರಕ ಆಗುತ್ತದೆ. ಮುಂದಿನ ದಿನಗಳಲ್ಲಿ ಏನಾಗತ್ತೆ ಅಂತ ಕಾದು ನೋಡಬೇಕಾಗಿದೆ. ಸುಧಾಳ ಮೊದಲ ಗಂಡ ಯಾರು? ನಿಜಕ್ಕೂ ಸುಧಾಳ ಗಂಡನಿಗೆ ಏನಾಗಿತ್ತು ಎನ್ನೋದು ರಿವೀಲ್‌ ಆಗಬೇಕು. 

ಅಮೃತಧಾರೆʼ ಧಾರಾವಾಹಿ ಕಥೆ ಏನು?
ಆಗರ್ಭ ಶ್ರೀಮಂತ ಗೌತಮ್‌ ದಿವಾನ್‌ ತಂದೆಗೆ 2 ಮದುವೆಯಾಗಿತ್ತು. ಈಗ ಗೌತಮ್‌ ತಂದೆ ಬದುಕಿಲ್ಲ, ಜನ್ಮ ಕೊಟ್ಟ ತಾಯಿಯೂ ಬದುಕಿಲ್ಲ ಅಂತ ಅವನು ಅಂದುಕೊಂಡಿದ್ದನು, ಆದರೆ ಅವನ ತಾಯಿ ಭಾಗ್ಯ, ಏಕೈಕ ತಂಗಿ ಸುಧಾ ಬದುಕಿರೋದು ಈಗ ತಾನೇ ಗೊತ್ತಾಗಿದೆ. ಭೂಮಿಕಾಳಿಂದ ಅವರಿಬ್ಬರು ತಮ್ಮ ಮನೆಗೆ ಬಂದಿದ್ದಾರೆ. ಮಲತಾಯಿ ಶಕುಂತಲಾ ಒಳ್ಳೆಯವಳು, ನಮಗೆ ತಾಯಿ ಪ್ರೀತಿ ಕೊಟ್ಟಿದ್ದಾಳೆ ಅಂತ ಗೌತಮ್‌ ದಿವಾನ್ ನಂಬಿದ್ದಾನೆ. ಗೌತಮ್‌ ಆಸ್ತಿ ಹೊಡೆಯಬೇಕು ಅಂತ ಶಕುಂತಲಾ‌, ಅವಳ ಮಕ್ಕಳು ಪ್ಲ್ಯಾನ್‌ ಮಾಡುತ್ತಿದ್ದಾರೆ. ಗೌತಮ್‌ ಮದುವೆ ಆಗಬಾರದು, ಅವನ ಆಸ್ತಿ ನಮ್ಮ ಪಾಲಾಗಬೇಕು ಅಂತ ಶಕುಂತಲಾ ಯೋಜನೆ ಹಾಕಿದ್ದಾಳೆ. ಆದರೆ ವಿಧಿಯಂತೆ ಗೌತಮ್-ಭೂಮಿಯ ಮದುವೆ ಆಯ್ತು. ಭೂಮಿ ಈಗ ಗರ್ಭಿಣಿ. ಭೂಮಿಯ ಮಗು ಸಾಯಿಸಲು ಈ ಮಲತಾಯಿ ಪ್ಲ್ಯಾನ್‌ ಮಾಡುತ್ತಿದ್ದಾಳೆ. ಶಕುಂತಲಾಳ ನಿಜವಾದ ಗುಣ ಗೊತ್ತಾದರೆ ಗೌತಮ್‌ ಏನು ಮಾಡ್ತಾನೋ ಏನೋ!

ಪಾತ್ರಧಾರಿಗಳು
ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಭಾಗ್ಯ ಪಾತ್ರದಲ್ಲಿ ಚಿತ್ಕಳಾ ಬಿರಾದಾರ್‌ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಕೃಷ್ಣಮೂರ್ತಿ ಕವತ್ತಾರ್‌, ಸಿಲ್ಲಿ ಲಲ್ಲಿ ಆನಂದ್, ಸ್ವಾತಿ ರಾಯಲ್‌,‌ ಇಷಿತಾ ವರ್ಷ ಕೂಡ ನಟಿಸುತ್ತಿದ್ದಾರೆ.