Asianet Suvarna News Asianet Suvarna News

Kolar: ಅಂತರಗಂಗೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ಪ್ರವಾಸಿಗರ ಪರದಾಟ

ರಾಜಧಾನಿ ಬೆಂಗಳೂರಿಗೆ ಕೋಲಾರ ಕೇವಲ 65 ಕಿ.ಮೀ ಅಂತರದಲ್ಲಿರುವುದರಿಂದ ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಪ್ರವಾಸಿಗರು ರಜೆ ದಿನಗಳಲ್ಲಿ ಅಂತರಗಂಗೆ ಕ್ಷೇತ್ರ ಆಗಮಿಸುತ್ತಾರೆ, ಅದರಲ್ಲೂ ಬೆಟ್ಟ ಹತ್ತುವ ಯುವಕರಿಗೆ ಚಾರಣ ತಾಣವೂ ಆಗಿದೆ.

Lack of basic facilities in Kolar Antaragange is a problem for tourists gvd
Author
First Published Nov 9, 2022, 8:17 AM IST

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ನ.09): ಜಿಲ್ಲೆಯು ಚಿನ್ನದ ಗಣಿ, ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಖ್ಯಾತಿ ಪಡೆದಿದೆ. ಕಾಲ ಬದಲಾದಂತೆ ಟೊಮ್ಯಾಟೋ, ಮಾವು, ತರಕಾರಿ ಬೆಳೆಗಳಿಗೆ ಪ್ರಸಿದ್ದಿ ಪಡೆದಿದೆ. ಅದೇ ರೀತಿ ಅಂತರಗಂಗೆಯಲ್ಲಿ ಶ್ರೀ ಕಾಶಿವಿಶ್ವನಾಥನ ದೇವಾಲಯ, ವಿನಾಯಕನ ಕಲ್ಯಾಣಿ, ಬಸವಣ್ಣ ಬಾಯಿಯಿಂದ ವರ್ಷವಿಡಿ ಬರುವ ಗಂಗೆಯು ಅತ್ಯಂತ ಪವಿತ್ರವಾದ ಕಾಶಿ ತೀರ್ಥದಷ್ಟೇ ಭಕ್ತಾದಿಗಳಲ್ಲಿ ಗೌರವವಿದೆ. ವೈಜ್ಞಾನಿಕವಾಗಿ ಬೆಟ್ಟ ಗುಡ್ಡಗಳಲ್ಲಿರುವ ಔಷಧಿಗಳ ಗುಣವುಳ್ಳ ಸಸ್ಯ ಸಂಪತ್ತು ಇಂಗಿದ ನೀರಿನಿಂದ ಅಂತರ್ಜಲವಾಗಿ ಹರಿದು ಬಸವಣ್ಣನ ಬಾಯಿ ಹರಿಯುವ ಜಲಗಂಗೆಯಿಂದ ಅನೇಕ ರೋಗಗಳಿಗೆ ರಾಮಬಾಣವೆನ್ನುವ ಅಂತರಗಂಗೆ ಕ್ಷೇತ್ರವನ್ನು ದಕ್ಷಿಣ ಕಾಶಿಯೆಂದೇ ಪ್ರತೀತಿ ಇದೆ.  

ರಾಜಧಾನಿ ಬೆಂಗಳೂರಿಗೆ ಕೋಲಾರ ಕೇವಲ 65 ಕಿ.ಮೀ ಅಂತರದಲ್ಲಿರುವುದರಿಂದ ನೆರೆಯ ಆಂಧ್ರ ಪ್ರದೇಶ, ತಮಿಳುನಾಡಿನಿಂದ ಪ್ರವಾಸಿಗರು ರಜೆ ದಿನಗಳಲ್ಲಿ ಅಂತರಗಂಗೆ ಕ್ಷೇತ್ರ ಆಗಮಿಸುತ್ತಾರೆ, ಅದರಲ್ಲೂ ಬೆಟ್ಟ ಹತ್ತುವ ಯುವಕರಿಗೆ ಚಾರಣ ತಾಣವೂ ಆಗಿದೆ. ಕಾರ್ತೀಕ ಮಾಸದಲ್ಲಿ ಜಾತ್ರೆ, ಶಿವದೀಪೋತ್ಸವ, ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಕಮ ನಡೆಯುವುದರಿಂದ ಕೋಲಾರ ಜಿಲ್ಲೆಯಿಂದಲ್ಲದೆ ವಿವಿಧ ರಾಜ್ಯಗಳಿಂದ ಅಂತರಗಂಗೆ ಆಗಮಿಸುವ ಭಕ್ತಾಧಿಗಳಿಗೆ ಪ್ರವಾಸೋದ್ಯಮ ಇಲಾಖೆಯು ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಮಾಡುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ. 

ಸತೀಶ್‌ ಜಾರಕಿಹೊಳಿಯಿಂದ ಕಾಂಗ್ರೆಸ್‌ ಅಂತರ: ಶಿಸ್ತು ಕ್ರಮದ ಬಗ್ಗೆಯೂ ಒಲವು

ಅಂತರಗಂಗೆಯು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲಿಂ ಭಾಂದವರಿಗೂ ಸಹ ಪವಿತ್ರವಾದ ತಾಣವಾಗಿದೆ. ಅಂತರಗಂಗೆಯ ತಪಲಿನಲ್ಲಿ ಮಸೀದಿ,ಮದರಸ ಶಿಕ್ಷಣ ಸಂಸ್ಥೆ ಹಾಗೂ ಕುಪ್ಪಹಳ್ಳಿ ಬಳಿ ಇರುವ ದರ್ಗಾಗಳಿಗೆ ರಜೆ ಹಾಗೂ ವಿಶೇಷವಾದ ದಿನಗಳಲ್ಲಿ ಉರುಸ್, ಕಾವಾಲಿ ನಡೆಯುವುದರಿಂದ ಈ ಕ್ಷೇತ್ರವು ಧಾರ್ಮಿಕ ಕ್ಷೇತ್ರದ ಜೊತೆಗೆ ಪ್ರವಾಸಿ ತಾಣವಾಗಿದೆ. ಅಂತರಗಂಗೆಯಲ್ಲಿ ಈ ಹಿಂದೆ ಅನೇಕ ವಿವಾಹಗಳು ನಡೆಸುತ್ತಿದ್ದರಿಂದ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪರ ಪ್ರದೇಶಾಭಿವೃದ್ದಿ ನಿಧಿಯಿಂದ 2002ರಲ್ಲಿ ಸಮುದಾಯ ಭವನ ಒಂದು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು ಅದರ ಸಮರ್ಪಕ ನಿರ್ವಹಣೆಯಿಲ್ಲದೆ ಪುಂಡುಪೋಕರಿಗಳ ತಾಣವಾಗಿದೆ. 

ಈ ಹಿಂದೆ ಅಂತರಗಂಗೆ ದೇವಾಲಯದ ಅಭಿವೃದ್ದಿಗೆ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಲಾಗಿತ್ತು, ಇದರಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಮುಜರಾಯಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳು ಸದಸ್ಯರಾಗಿದ್ದು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಮಿತಿ ರಚಿಸಿಕೊಂಡು ಎರಡ್ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಲಾಗುತ್ತಿತ್ತು. ಇತ್ತೀಚೆಗೆ ಅದನ್ನೂ ಸಹ ಮಾಡುತ್ತಿಲ್ಲವೆಂದು ಕೆಲ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ. ಈ ಪ್ರದೇಶವನ್ನು ಅಭಿವೃದ್ದಿ ಪಡಿಸಲು ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿ ಆಕರ್ಷಿಸುವಂತ ಇಚ್ಚಾಶಕ್ತಿಯು ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳಿಗೂ ಅಗತ್ಯವಾಗಿದೆ. 

ಬಿಜೆಪಿ ಕೈಗೆ ಮತ್ತೆ ಹಿಂದು ಅಸ್ತ್ರ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ತಲೆಬೇನೆ

ಅಂತರಗಂಗೆಯ ಮೆಟ್ಟಿಲುಗಳ ಬದಿಯಲ್ಲಿ ಮುಜರಾಯಿ ಇಲಾಖೆ ಇತ್ತೀಚೆಗೆ ನಿರ್ಮಿತಿ ಕೇಂದ್ರದಿಂದ ಶೌಚಾಲಯ ನಿರ್ಮಿಸಿರುವುದು ಸಾರ್ವಜನಿಕರಿಗೆ ಅನುಕೂಲಕರವಾಗಿರುವುದು ಬಿಟ್ಟರೆ ಬೇರ್‍ಯಾವುದೇ ಮೂಲಭೂತ ಸೌಲಭ್ಯಗಳನ್ನು ಮಾಡಿಲ್ಲ. ಮಳೆಗಾಲದಲ್ಲಿ ಹರಿಯುವಂತ ಸಣ್ಣಪುಟ್ಟ ಜಲಪಾತಗಳಿಗೆ ಹೋಗಲು ಸಮರ್ಪಕವಾದ ಕಾಲುದಾರಿಯ ಮಾರ್ಗವು ಇಲ್ಲದಂತಾಗಿದ್ದು, ಪ್ರವಾಸಿಗರು ಹರಸಾಹಾಸ ಪಟ್ಟು ಜಲಪಾತದ ಬಳಿ ತೆರಳುವಂತಾಗಿದೆ. ಇವೆಲ್ಲಾವನ್ನು ಸಮರ್ಪಕವಾದ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರು ಹೆಚ್ಚು ಆಕರ್ಷಿತರಾಗಲು ಸಾಧ್ಯ ಎಂದು ಪ್ರವಾಸಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Follow Us:
Download App:
  • android
  • ios