Asianet Suvarna News Asianet Suvarna News

ಕಥಕ್ಕಳಿ ಹುಟ್ಟಿದ್ದು ಇಲ್ಲೇ..ಕೇರಳದ ಕಲೆ ಹುಟ್ಟಿದ ಗ್ರಾಮಕ್ಕೆ ಮರುನಾಮಕರಣ

ಎಲ್ಲಾ ರೀತಿಯ ಕಲೆಗಳಿಗೆ ಮೂಲವಾಗಿ ಒಂದು ಗ್ರಾಮವಿರುತ್ತದೆ. ಆದ್ರೆ ಕಲಾ ಪ್ರಕಾರ ದೇಶಾದ್ಯಂತ ಪ್ರಸಿದ್ಧಿಯಾದರೂ ಅದು ಎಲ್ಲಿಂದ ಬಂದಿದೆ ಎಂದು ಬಹುತೇಕರಿಗೆ ಗೊತ್ತಿರುವುದಿಲ್ಲ. ಸದ್ಯ ಕೇರಳದ ಈ ಗ್ರಾಮವನ್ನು ಕಲಾಪ್ರಕಾರಕ್ಕೆ ಅನುಗುಣವಾಗಿ ರಿನೇಮ್ ಮಾಡಲಾಗಿದೆ.

Kerala village known for Kathakali renamed after the dance form Vin
Author
First Published Mar 24, 2023, 2:57 PM IST

ಪತ್ತನಂತಿಟ್ಟ: ದಕ್ಷಿಣ ಕೇರಳ ಜಿಲ್ಲೆಯ ಪಂಪಾ ನದಿಯ ದಡದಲ್ಲಿರುವ ಒಂದು ಸಣ್ಣ ಹಳ್ಳಿ ಕಥಕ್ಕಳಿ ಕಲೆ ಹುಟ್ಟಿ ಬಂದಿರುವ ಮೂಲ ಗ್ರಾಮವಾಗಿದೆ. ತಲೆ ತಲಾಂತರಗಳಿಂದ ಇಲ್ಲಿಜನ ಜನರು ಕಥಕ್ಕಳಿಯನ್ನು ಪ್ರದರ್ಶಿಸಿಕೊಂಡು ಬಂದಿದ್ದಾರೆ. ದೇಶ-ವಿದೇಶಗಳಲ್ಲಿ ಹಲವಾರು ಕಲಾವಿದರು ಈ ಶಾಸ್ತ್ರೀಯ ನೃತ್ಯ ರೂಪವನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಕಲಾಪ್ರಕಾರ ಹುಟ್ಟಿ ಬಂದ ಗ್ರಾಮ ಇವತ್ತಿಗೂ ಹಾಗೆಯೇ ಇದೆ. ಹೀಗಾಗಿ ಈ ಗ್ರಾಮಸ್ಥರು ಕಥಕ್ಕಳಿ ಎಂಬ ಹೆಸರನ್ನು ತಮ್ಮ ಗ್ರಾಮದೊಂದಿಗೆ ಜೋಡಿಸಲು ಪ್ರಯತ್ನಿಸ್ತಿದ್ದರು. 12 ವರ್ಷಗಳ ಸತತ ಪ್ರಯತ್ನದ ನಂತರ ಪತ್ತನಂತಿಟ್ಟದ ಐರೂರ್ ಗ್ರಾಮವು ಈಗ ಭಾರತೀಯ ಭೂಪಟದಲ್ಲಿ 'ಅಯಿರೂರ್ ಕಥಕ್ಕಳಿ ಗ್ರಾಮಮ್' ಎಂಬುದಾಗಿ ಕಾಣಿಸುತ್ತಿದೆ.

ಕೇರಳದಲ್ಲಿ ಐರೂರ್‌ ಗ್ರಾಮದಲ್ಲಿ ಹುಟ್ಟಿಕೊಂಡ ಕಥಕ್ಕಳಿ ಕಲೆ
300 ವರ್ಷಗಳ ಹಿಂದೆ ಕೇರಳದಲ್ಲಿ ಹುಟ್ಟಿಕೊಂಡ ಕಥಕ್ಕಳಿ, ಭಕ್ತಿ, ನಾಟಕ, ನೃತ್ಯ, ಸಂಗೀತ, ವೇಷಭೂಷಣಗಳು ಮತ್ತು ಮೇಕಪ್ ಅನ್ನು ಸಂಯೋಜಿಸಿ ಗತಕಾಲದ ಶ್ರೇಷ್ಠ ಕಥೆಗಳನ್ನು (Stories) ಹೇಳುವ ಕಲಾ ಪ್ರಕಾರವಾಗಿದೆ. ಹೆಚ್ಚಾಗಿ ಭಾರತೀಯ ಮಹಾಕಾವ್ಯಗಳಿಂದ ಆಯ್ದುಕೊಂಡ ಸನ್ನಿವೇಶವನ್ನು ಕೈ ಮತ್ತು ಮುಖದ ಸನ್ನೆಗಳು ಮತ್ತು ಅಭಿವ್ಯಕ್ತಿಗಳ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಐರೂರ್‌ನಲ್ಲಿ ಹಿಂದೂ ಮಹಾಕಾವ್ಯಗಳು ಮಾತ್ರವಲ್ಲ, ಬೈಬಲ್‌ನ ಕಥೆಗಳಾದ 'ಅಬ್ರಹಾಂನ ತ್ಯಾಗ', 'ದುರ್ಬಲ ಮಗ' ಮತ್ತು 'ಮೇರಿ ಮ್ಯಾಗ್ಡಲೀನ್' ಸಹ ಪ್ರದರ್ಶನಗೊಂಡಿವೆ.

ಕೇರಳದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಎನಿಸಿದ ಪದ್ಮಲಕ್ಷ್ಮೀ!

ಕಥಕ್ಕಳಿ ಕ್ಲಬ್‌ನಿಂದ ಗ್ರಾಮದ ಹೆಸರು ಬದಲಿಸುವ ಪ್ರಯತ್ನ
ಕಥಕ್ಕಳಿ ಕಲಾವಿದರ ಕುಟುಂಬದಿಂದ ಬಂದ ರಾಜ್ ಸ್ವತಃ ಕಲಾವಿದರಲ್ಲ. ಆದರೆ ನೃತ್ಯ ಪ್ರಕಾರದ ಮೇಲಿನ ಅವರ ಪ್ರೀತಿಯು ಅವರು ಕಥಕ್ಕಳಿಗಾಗಿ ಏನನ್ನಾದರೂ ಮಾಡಬೇಕು ಎಂಬ ಹುಮ್ಮಸ್ಸನ್ನು ತಂದಿತು. 1995ರಲ್ಲಿ ಅವರ ಕೆಲವು ಸ್ನೇಹಿತರೊಂದಿಗೆ (Friends) ಜಿಲ್ಲಾ ಕಥಕ್ಕಳಿ ಕ್ಲಬ್‌ನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಈ ಕ್ಲಬ್‌ನ ಕೋರಿಕೆಯ ಮೇರೆಗೆ 2010 ರಲ್ಲಿ ಗ್ರಾಮ ಪಂಚಾಯಿತಿಯು ಗ್ರಾಮದ ಹೆಸರನ್ನು (Village name) ಐರೂರು ಕಥಕ್ಕಳಿ ಗ್ರಾಮ ಎಂದು ಬದಲಾಯಿಸಲು ನಿರ್ಣಯವನ್ನು ಅಂಗೀಕರಿಸಿತು ಎಂದು ಪಂಚಾಯಿತಿ ಅಧ್ಯಕ್ಷ ಅಂಬಿಲಿ ಪ್ರಭಾಕರ ನಾಯರ್ ಹೇಳಿದರು. ಆದರೆ, ಸಂಪೂರ್ಣ ಪ್ರಕ್ರಿಯೆಯು ಕಾರ್ಯರೂಪಕ್ಕೆ ಬರಲು 12 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಕ್ಲಬ್ ಕಾರ್ಯದರ್ಶಿ ರಾಜ್ ಹೇಳಿದರು.

'ಗ್ರಾಮದ ಹೆಸರಿನ ಬದಲಾವಣೆ ಅಷ್ಟು ಸುಲಭವಾಗಿರಲ್ಲಿಲ್ಲ.ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ ಏಕೆಂದರೆ ನಿಮಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುಮೋದನೆಗಳು ಬೇಕಾಗುತ್ತವೆ. ಮರುನಾಮಕರಣವು (Rename) ಯಾವುದೇ ಕೋಮು ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ಗುಪ್ತಚರ ಅಧಿಕಾರಿಗಳ ತಪಾಸಣೆ ಒಳಗೊಂಡಿರುತ್ತದೆ' ಎಂದು ರಾಜ್ ತಿಳಿಸಿದರು.ಮರುನಾಮಕರಣಕ್ಕೆ ಯಾರೂ ವಿರೋಧ ವ್ಯಕ್ತಪಡಿಸದ ಕಾರಣ ಊರಿನ ಜೊತೆ ಕಥಕ್ಕಳಿಯ ಹೆಸರು ಸೇರಿತು ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೇಲಾಗಿ ಇಲ್ಲಿನ ಕ್ರೈಸ್ತ ಸಮುದಾಯದವರು ಕ್ಲಬ್ ನ ನಿರ್ವಹಣೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಮಾನ್ಸೂನ್ ಆರಂಭವಾಗೋ ಮೊದ್ಲು ಪಶ್ಚಿಮ ಘಟ್ಟದ ಈ ಸುಂದರ ತಾಣಗಳನ್ನೊಮ್ಮೆ ನೋಡಿ…

200 ವರ್ಷಗಳಷ್ಟು ಹಳೆಯದಾದ ಕಥಕ್ಕಳಿ ಪರಂಪರೆ
ಕ್ಲಬ್ ಮೊದಲು ಊರಿನ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನು ಏಕೆ ಮುಂದಿಟ್ಟಿತು ಎಂದು ಕೇಳಿದಾಗ ರಾಜ್‌, ಗ್ರಾಮವು ಸುಮಾರು 200 ವರ್ಷಗಳಷ್ಟು ಹಳೆಯದಾದ ಕಥಕ್ಕಳಿ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು. ಗ್ರಾಮದ ಪುತೇಝಂ ಪ್ರದೇಶದ ಚಿರಕುಝಿಯಿಲ್ ಕುಟುಂಬದ ಶಂಕರ ಪಣಿಕ್ಕರ್ ಅವರು ಕಥಕ್ಕಳಿ ರಸಿಕರಾಗಿದ್ದರು ಮತ್ತು ಅವರ ಪೂರ್ವಜರ ಮನೆಗೆ ಹೊಂದಿಕೊಂಡಂತೆ ಕಥಕ್ಕಳಿ ಕಲರಿಯನ್ನು ಪ್ರಾರಂಭಿಸುವ ಮೂಲಕ ಕಲೆಯನ್ನು ಎಲ್ಲರಿಗೂ ಹೇಳಿ ಕೊಡಲು ಆರಂಭಿಸಿದರು. ಆ ದಿನಗಳಲ್ಲಿ ಸಮಾಜದ ದೀನದಲಿತ ವರ್ಗವನ್ನು ಪ್ರವೇಶಿಸಲು ಅನುಮತಿಸದ ದೇವಾಲಯಗಳ ನಾಲ್ಕು ಗೋಡೆಗಳಿಂದ ಕಲಾ ಪ್ರಕಾರವನ್ನು ಹೊರತಂದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಕ್ಲಬ್ ಅನ್ನು ಸ್ಥಾಪಿಸಿದ ನಂತರ, ಅದು ತನ್ನದೇ ಆದ ವೆಚ್ಚದಲ್ಲಿ 1 ರಿಂದ 10 ನೇ ತರಗತಿಯ ಶಾಲಾ ಮಕ್ಕಳಿಗೆ ನೃತ್ಯ ಮುದ್ರೆಗಳನ್ನು ಕಲಿಸಿತು ಎಂದು ರಾಜ್ ಮಾಹಿತಿ ನೀಡಿದ್ದಾರೆ.

ಕ್ಲಬ್‌ನ ಪ್ರಯತ್ನಗಳು ಜನಪ್ರಿಯತೆಯನ್ನು ಗಳಿಸಿದಂತೆ, ಕೆಲವು ಸಾಮಾನ್ಯ ಸ್ಥಳದಲ್ಲಿ ನಡೆದ ತರಗತಿಗಳಿಗೆ ಹೆಚ್ಚಿನ ಮಕ್ಕಳು ಬಂದರು.
ಶಾಸ್ತ್ರೀಯ ನೃತ್ಯ ಪ್ರಕಾರದ ಬಗ್ಗೆ ಕಲಿಯಲು ಮಕ್ಕಳಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕ್ಲಬ್ ಪ್ರತಿ ವರ್ಷ ಜನವರಿ ಮೊದಲ ವಾರದಲ್ಲಿ ಮುದ್ರೆಗಳನ್ನು ಕಲಿಸಲು ಮಾತ್ರವಲ್ಲದೆ ಕಥಕ್ಕಳಿ ಪ್ರದರ್ಶನಗಳನ್ನು ಪ್ರದರ್ಶಿಸಲು ಏಳು ದಿನಗಳ ಉತ್ಸವವನ್ನು ನಡೆಸಲು ನಿರ್ಧರಿಸಿತು.

ಕ್ಲಬ್‌ನ ವೆಚ್ಚದಲ್ಲಿ ಪಂಪಾ ನದಿಯ ದಡದಲ್ಲಿ ಉತ್ಸವವನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದರು. ಅದಲ್ಲದೆ, ಕಥಕ್ಕಳಿ ಕಲಿಯಲು ಪ್ರತಿ ವರ್ಷ ಸುಮಾರು 20,000 ಮಕ್ಕಳು ಹಳ್ಳಿಯಲ್ಲಿರುವ ಕ್ಲಬ್‌ಗೆ ಬರುತ್ತಾರೆ ಎಂದು ರಾಜ್ ಹೇಳಿದ್ದಾರೆ. ಈ ಎಲ್ಲಾ ಅಂಶಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಊರಿನ ಹೆಸರನ್ನು ಚೇಂಜ್‌ ಮಾಡಲು ಕೊಡುಗೆ ನೀಡಿವೆ ಎಂದವರು ಹೇಳಿದರು.

Follow Us:
Download App:
  • android
  • ios