ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಹೆಚ್ಚಿನವು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ನಿರ್ವಹಿಸಲ್ಪಡುತ್ತಿವೆ. 

ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.30): ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಹೆಚ್ಚಿನವು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳಿಂದ ನಿರ್ವಹಿಸಲ್ಪಡುತ್ತಿವೆ. ಇವುಗಳ ನಿರ್ವಹಣೆಗೆ ಹಣದ ಅಗತ್ಯತೆ ಹೆಚ್ಚಾಗಿದ್ದು, ಇದೀಗ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೊಡಗಿನ ಪ್ರಕೃತಿ ಮಡಿಲಿನಲ್ಲಿ ಹೊಸ ವರ್ಷಾಚರಣೆ ಮಾಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಇದೇ ಸಮಯವನ್ನು ಉಪಯೋಗಿಸಿಕೊಳ್ಳುತ್ತೀರುವ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಪ್ರವಾಸಿಗರ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕಾವೇರಿ ನಿಸರ್ಗಧಾಮ, ದುಬಾರೆ ಸಾಕಾನೆ ಶಿಬಿರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ 30 ರೂಪಾಯಿ ಇದ್ದ ಪ್ರವೇಶ ಶುಲ್ಕವನ್ನು 60 ರೂಪಾಯಿಯಿಂದ 100 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಿವೆ ಎನ್ನಲಾಗಿದೆ. 

ಒಟ್ಟಿನಲ್ಲಿ ಪ್ರವಾಸಿ ತಾಣಗಳ ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಡೀಕರಣಕ್ಕೆ‌ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ ಕುಶಾಲನಗರ ತಾಲೂಕಿನ ಪ್ರಮುಖ‌ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರಗಳ‌ ಎಂಟ್ರೀ ಫೀಸ್‌ನಲ್ಲಿ ಏರಿಕೆ‌ ಮಾಡಿದೆ. ಕಾವೇರಿ ನಿಸರ್ಗಧಾಮ ಪ್ರವೇಶ ಶುಲ್ಕ ಪ್ರಸ್ತುತ ಇದ್ದ 30 ರೂ 60 ರೂಗಳಿಗೆ ಏರಿಕೆ ಮಾಡಲಾಗಿದೆ. ದುಬಾರೆಗೆ ಪ್ರವೇಶ ಶುಲ್ಕ 50 ರಿಂದ 100 ಹಾಗೂ ಹಾರಂಗಿ ಸಾಕಾನೆ ಶಿಬಿರಕ್ಕೆ 30 ರಿಂದ 50 ರೂಗಳಿಗೆ ಏರಿಕೆ ಮಾಡಲಾಗಿದೆ. 2023 ಜನವರಿ 1 ಸೋಮವಾರದಿಂದ ಈ ಶುಲ್ಕಗಳು ಅನ್ವಯವಾಗಲಿದೆ ಅರಣ್ಯ ಇಲಾಖೆ ತಿಳಿಸಿದೆ. 

ಹನುಮಪ್ಪ-ಮುಲ್ಲಾಸಾಬ್‌ ನಡುವಿನ ಚುನಾವಣೆ: ಸಿ.ಟಿ.ರವಿ

ನಿರ್ವಹಣೆ ಉದ್ದೇಶ: ಈಗಾಗಲೆ ಕಾವೇರಿ‌ ನಿಸರ್ಗಧಾಮದಲ್ಲಿರುವ ಹಳೆಯ ತೂಗು ಸೇತುವೆ ಶಿಥಿಲಾವಸ್ಥೆಯಲ್ಲಿರುವ ಕಾರಣ ಈ‌ ಸೇತುವೆ ಮೇಲಿನ ಓಡಾಟವನ್ನು ಬಂದ್‌ ಮಾಡಲಾಗಿದೆ. ಸೇತುವೆ ದುರಸ್ಥಿಗೆ ಅಂದಾಜು 45 ಲಕ್ಷ ರೂಪಾಯಿ ಅನುದಾನದ ಅಗತ್ಯವಿದೆ. ಸೇತುವೆ ದುರಸ್ಥಿ ಸೇರಿದಂತೆ ಮಾನವ ಪ್ರಾಣಿ ಸಂಘರ್ಷದ ಪರಿಹಾರ ಮೊತ್ತ‌ ಕೂಡ ಏರಿಕೆಯಾಗಿರುವ ಕಾರಣ ಇದರ ನಿರ್ವಹಣೆ ಉದ್ದೇಶದಿಂದ ಪ್ರವೇಶ ದರ ಏರಿಕೆ ಮಾಡಿ‌ ಹಣ ಕ್ರೋಢೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೊಡಗಿನಲ್ಲಿ‌ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಕೊಂಚ‌ ಕಡಿಮೆಯಿದೆ. ಹೀಗಾಗಿ‌ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ಬರುವ ಆದಾಯವನ್ನು ಕೊಡಗು ಮಾನವ ಪ್ರಾಣಿ ಸಂಘರ್ಷ ಉಪಶಮನ ನಿಧಿಗಳಿಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಕೊಡಗಿನಲ್ಲಿ ಹೆಚ್ಚಿದ ಪ್ರವಾಸಿಗರು: ಡಿಸೆಂಬರ್‌ನಲ್ಲಿ ಕುಶಾಲನಗರದ ಕಾವೇರಿ‌ ನಿಸರ್ಗಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ‌ ಕಂಡುಬಂದಿದೆ. ಡಿ.24 ರಿಂದ 30 ರವರೆಗೆ ಪ್ರತಿದಿನ ಅಂದಾಜು 3000 ಪ್ರವಾಸಿಗರು ಆಗಮಿಸಿದ್ದು ಕ್ರಿಸ್ಮಸ್ ದಿನ‌ 4300 ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಹಳೆಯ ತೂಗು ಸೇತುವೆ ಬಂದ್ ಮಾಡಿರುವ ಕಾರಣ ಪಕ್ಕದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ತೂಗುಸೇತುವೆ ಮೂಲಕ ನಿಸರ್ಗಧಾಮ‌ ಪ್ರವೇಶಕ್ಕೆ ಅವಕಾಶ ಕಲ್ಲಿಸಲಾಗಿದೆ. ಏಕಕಾಲದಲ್ಲಿ ಹೆಚ್ಚಿನ ಪ್ರವಾಸಿಗರ ಈ ತಾತ್ಕಾಲಿಕ ಸೇತುವೆ ಮೂಲಕ ಹಾದು ಹೋಗುವುದು ಅಸಾಧ್ಯ ಹಾಗೂ ಅಪಾಯಕಾರಿ ಆದ ಕಾರಣ ಏಕಕಾಲಕ್ಕೆ ಕೇವಲ‌ 30 ಮಂದಿಯನ್ನು ಮಾತ್ರ ಒಳ ಬಿಡಲಾಗುತ್ತಿದೆ. 

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

ಫೆಬ್ರವರಿ 15 ರೊಳಗೆ ತೂಗುಸೇತುವೆ ಸಂಚಾರಕ್ಕೆ ಮುಕ್ತ: ಈಗಾಗಲೆ ತೂಗು ಸೇತುವೆ ದುರಸ್ಥಿ ಕಾರ್ಯ ಹಿನ್ನಲೆಯಲ್ಲಿ ತೂಗು ಸೇತುವೆಯನಾನು ಬಂದ್ ಮಾಡಲಾಗಿದೆ. ತೂಗು ಸೇತುವೆಗೆ ಬಳಸುವ ರೋಪ್ ಕೊರಿಯಾ ದೇಶದಿಂದ ಬರಬೇಕಿರುವ ಕಾರಣ ದುರಸ್ಥಿ‌ ಕಾರ್ಯ ವಿಳಂಬವಾಗಿದೆ ಎನ್ನಲಾಗಿದೆ. 2023 ರ ಫೆಬ್ರುವರಿ 15 ರೊಳಗೆ ಸೇತುವೆ ದುರಸ್ಥಿ ಮಾಡಿ ಪ್ರವಾಸಿಗರಿಗೆ ತೂಗು ಸೇತುವೆ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.