ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟರೆ, ಚಿಕ್ಕಮಗಳೂರಿನಲ್ಲಿ ಹಸುವೊಂದು ಬಲಿಯಾಗಿದೆ. ಈ ಮಧ್ಯೆ, ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ 'ಝೂ ಅಭಿ' ಎಂಬ ಆನೆಯೂ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ:

ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ವಾಲ್ನೂರು ತ್ಯಾಗತ್ತೂರಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ 53 ವರ್ಷದ ಜಲಜಾಕ್ಷಿ ಎಂದು ಗುರುತಿಸಲಾಗಿದೆ. ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಲಜಾಕ್ಷಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆಯಾಗಿದ್ದರು.

Add Asianetnews Kannada as a Preferred SourcegooglePreferred

ಬಾಳೆಗುಂಡಿ ಹಾಡಿ‌ ನಿವಾಸಿಯಾಗಿದ್ದ ಜಲಜಾಕ್ಷಿ‌ ರಸ್ತೆ ಬದಿ ನಡೆದು ಸಾಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ‌ ಮಾಡಿದ್ದು, ಸ್ಥಳಕ್ಕೆ‌ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಸಾವಿನ ಹಿನ್ನೆಲೆ ಅರಣ್ಯಾಧಿಕಾರಿಗಳ‌ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹಾಲು ಕೊಡುವ ಹಸು ತುಳಿದು ಸಾಯಿಸಿದ ಆನೆ

ಚಿಕ್ಕಮಗಳೂರು: ಮತ್ತೊಂದೆಡೆ ಚಿಕ್ಕಮಗಳೂರಿನಲ್ಲೂ ಕಾಡಾನೆ ದಾಳಿ ಮುಂದುವರೆದಿದೆ. ಚಿಕ್ಕಮಗಳೂರು ತಾಲೂಕಿನ ಮಾಣಿಮಕ್ಕಿ ಗ್ರಾಮದಲ್ಲಿ ಹಸುವನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ. ಕಾಡಂಚಿನ ಗ್ರಾಮದಲ್ಲಿ ಮೇಯುವಾಗ ಕಾಡಾನೆ ದಾಳಿ ಮಾಡಿದ್ದು, ಮಾಣಿಮಕ್ಕಿ ಗ್ರಾಮದ ಮಧು ಎಂಬುವರಿಗೆ ಸೇರಿದ ಹಾಲು ಕೊಡುವ ಹಸುವನ್ನು ಕಾಡಾನೆ ತುಳಿದು ಸಾಯಿಸಿದೆ.

ಇದನ್ನೂ ಓದಿ: ಕನಸಿನ ಮನೆ ಕಟ್ಟುತ್ತಿದ್ದ ದಂಪತಿಯ ದುರಂತ ಸಾವು: ಮನೆಯ ಮೆಟ್ಟಿಲು ಬಿದ್ದು ಅವಘಡ

ಜಮೀನಿನ ಜೊತೆ ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದ ಮಧು ಅವರ ಹಸು ಇದಾಗಿದ್ದು, ಸ್ಥಳಕ್ಕೆ ಪಶುವೈದ್ಯರು ಭೇಟಿ ನೀಡಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕಾಡಾನೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಹಾವಳಿಗೆ ಶಾಶ್ವತ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಲ್ದೂರು ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗಿನಲ್ಲಿ ಸಾಕಾನೆ 21 ವರ್ಷದ ಝೂ ಅಭಿ ಸಾವು

ಮತ್ತೊಂದೆಡೆ ಕೊಡಗಿನಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ 21 ವರ್ಷದ ಆನೆ ಝೂ ಅಭಿ ಸಾವನ್ನಪ್ಪಿದೆ. ಝೂ ಅಭಿ ಆನೆಯನ್ನು ಆನೆ ಸೆರೆ ಕಾರ್ಯಾಚರಣೆಗೆ ಬಳಸುತ್ತಿದ್ದರು. ಭಾನುವಾರ ಸಂಜೆ ಝೂ ಅಭಿ ಸಾವನ್ನಪ್ಪಿದ್ದು, ಈ ಆನೆ ಕಳೆದ ಆರು ತಿಂಗಳಿನಿಂದ ಕಾಲು ನೋವಿನಿಂದ ಬಳಲುತ್ತಿತ್ತು. ಸಾವನ್ನಪ್ಪಿದ ಆನೆಗೆ ಪಶುವೈದ್ಯ ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಲಾಖಾ ಸಿಬ್ಬಂದಿ ಅಂತ್ಯಕ್ರಿಯೆ ನಡೆಸಿದ್ದಾರೆ. ಸ್ಥಳಕ್ಕೆ ಡಿಎಫ್ ಓ, ಡಿಸಿಎಫ್ ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ: ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು