ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳ ನೌಕರರಿಗೆ ಮಧ್ಯಾಹ್ನ ರಜೆ ಘೋಷಿಸಲಾಗಿದೆ. ಲೋಕಭವನದಲ್ಲಿ ನಡೆಯುವ ಈ ಕಾರ್ಯಕ್ರಮದಿಂದ ಉಂಟಾಗಬಹುದಾದ ಜನದಟ್ಟಣೆಗೆ ಕ್ರಮ..
ಎಂಎಸ್ ಬಿಲ್ಡಿಂಗ್ನಲ್ಲಿನ ಅಧಿಕಾರಿ, ನೌಕರರಿಗೂ ರಜೆ । ಭದ್ರತೆ ದೃಷ್ಟಿಯಿಂದ ಈ ಕ್ರಮ
ಬೆಂಗಳೂರು (ಜೂ.3): ರಾಜ್ಯ ಸರ್ಕಾರ(Karnataka government)ದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್(DK Shivakumar) ಅವರು ಲೋಕಭವನ(Lokbhavan)ದಲ್ಲಿ ಪದಗ್ರಹಣ(Oath) ಮಾಡುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ವಿಧಾನಸೌಧ(Vidhan soudha), ವಿಕಾಸಸೌಧ(Vikas soudha) ಮತ್ತು ಬಹುಮಹಡಿಗಳ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಬುಧವಾರ ಮಧ್ಯಾಹ್ನ ರಜೆ ಘೋಷಿಸಲಾಗಿದೆ.
ಲೋಕಭವನದಲ್ಲಿ ಸಂಜೆ 4.05ಕ್ಕೆ ಪ್ರಮಾಣ ವಚನ ಸಮಾರಂಭ
ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ 4.05ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದರಿಂದ ಲೋಕಭವನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜನದಟ್ಟಣೆ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ.
ಹೀಗಾಗಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯಪಾಲರ ಆದೇಶಾನುಸಾರ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ನೌಕರರಿಗೆ ಮಧ್ಯಾಹ್ನ ರಜೆ ಘೋಷಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.


