ವಕ್ಫ್ ಮಂಡಳಿಯ ಆಸ್ತಿ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು (ನ.22): ರಾಜ್ಯದಲ್ಲಿ ಹಿಂದೂಗಳು, ರೈತರು ಹಾಗೂ ಮಠ-ಮಂದಿರಗಳ ಭೂಮಿಯನ್ನು ವಕ್ಫ್ ಹೆಸರಿಗೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಾದ್ಯಂತ ವಕ್ಫ್ ಮಂಡಳಿಯಿಂದ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೆ, ಒಂದು ಹೆಜ್ಜೆ ಮುಂದಿಟ್ಟಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರಮೋದ್ ಮುತಾಲಿಕ್ ಹಾಗೂ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಮಾತ್ರ ಅವಕಾಶವಿದ್ದು, ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದು ಪೊಲೀಸರು ಸಂದೇಶ ಸಾರಿದ್ದಾರೆ.

ವಕ್ಫ್ ವಿರುದ್ಧ ಹೋರಾಟಕ್ಕೆ ಮುಂದಾದ ಶ್ರೀರಾಮ ಸೇನೆಯಿಮದ ಚಾಮರಾಜಪೇಟೆ ಆಟದ ಮೈದಾನ ಬಳಿಯ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಮಾಡಿ, ನಂತರ ಸಚಿವ ಜಮೀರ್ ಅಹ್ಮದ್ ಕಚೇರಿಗೆ ಕಾಲ್ನಡಿಗೆಯಲ್ಲಿ ತೆರಳಿ ಮನವಿ ಪತ್ರ ಸಲ್ಲಿಕೆ ಮಾಡುವುದಾಗಿ ಪೊಲೀಸರಿಂದ ಅನುಮತಿ ಕೇಳಿದ್ದರು. ಈ ಬೆನ್ನಲ್ಲಿಯೇ ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ತೆರಳಿ ಮನವಿ ಪತ್ರ ನೀಡಲು ಮುಂದಾದ ಪ್ರಮೋದ್ ಮುತಾಲಿಕ್ ಅವರು ದೊಡ್ಡ ಮಟ್ಟದಲ್ಲಿಯೇ ರ್ಯಾಲಿ ನಡೆಸುತ್ತಾ ಗುಂಪು ಸೇರಿದ್ದರಿಂದ ಅವರನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಇದಕ್ಕೆ ಬಗ್ಗದಿದ್ದಾಗ ಶ್ರೀ ರಾಮ ಸೇನೆ ರಾಜ್ಯಾಧ್ಯಕ್ಷರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಕಾಲ್ನಡಿಗೆಯಲ್ಲಿ ರ್ಯಾಲಿ ಮಾಡಿಕೊಂಡು ಹೋಗದೇ ವಾಹನದಲ್ಲಿ ಹೋಗಿ ಮನವಿ ಪತ್ರ ಸಲ್ಲಿಕೆ ಮಾಡುವಂತೆ ಪೊಲೀಸರು ಮನವೊಲಿಕೆ ಮಾಡಿದರು.

ಇದನ್ನೂ ಓದಿ: ಡಿ.9ರಿಂದ ಚಳಿಗಾಲದ ಅಧಿವೇಶನ; ಮುಡಾ ಆರೋಪಿ ಸಿದ್ದು ಸೈಲೆಂಟಾದ್ರೆ, ಯಾಗಗಲಿದ್ದಾರೆ ವಿಧಾನಸಭೆ ವೀರ?

ಆದರೆ, ಇದಕ್ಕೆ ಬಗ್ಗದ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸಚಿವ ಜಮೀರ್ ಅಹಮದ್ ಖಾನ್ ಅವರ ಚಾಮರಾಜಪೇಟೆಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಮುಂದಾಗಿದ್ದರು. ಇದನ್ನುರಿತ ಪೊಲೀಸರು ಪ್ರಮೋದ್ ಮುತ್ತಾಲಿಕ್ ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಅವರೊಂದಿಗೆ ಹೋಗುತ್ತಿದ್ದ ಶ್ರೀರಾಮ ಸೇನೆ ಕಾರ್ಯಕರ್ತರನ್ನೂ ವಶಕ್ಕೆ ಪಡೆದು ಬಸ್ಸಿನಲ್ಲಿ ತುಂಬಿಕೊಂಡು ಹೋಗಿದ್ದಾರೆ.