ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದು, ಅಲ್ಲಿರುವುದು ಹಿಂದೂ ದೇವರು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಚಾಮುಂಡೇಶ್ವರಿ ದೇವಿ ಯದುವಂಶದ ಕುಲದೇವಿ ಮತ್ತು 70 ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು (ಆ.31): ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದು, ಅಲ್ಲಿರುವುದು ಹಿಂದೂ ದೇವರು. ರಾಜಕಾರಣಿಗಳು ಏನೂ ಬೇಕಾದರು ಹೇಳಲಿ, ಕರೆಯುವವರು ಏನಾದರೂ ಕರೆಯಲಿ. ಅವರು ಹೇಳಿದಂತೆ ಆಗುವುದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡೇಶ್ವರಿ ದೇವಿ ಯದುವಂಶದ ಮನೆ ದೇವರು, ಕುಲದೇವಿ. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ಆ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಿಂದ ಪೂಜೆ ನಡೆಯುತ್ತದೆ. ದೇವಸ್ಥಾನ ವಿಚಾರದಲ್ಲಿ ನಮ್ಮ ಮನೆತನ 70 ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದೆ. ಚಾಮುಂಡೇಶ್ವರಿ ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ನ್ಯಾಯಾಲಯದ ಆದೇಶ ಬಂದ ಮೇಲೆ ಎಲ್ಲವೂ ಸ್ಪಷ್ಟ ಆಗುತ್ತದೆ ಎಂದರು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಮೌನಮುರಿದ ಪಂಚಪೀಠ ಶ್ರೀಗಳು, ಕಾಣದ 'ಕೈ'ಗಳ ಪಿತೂರಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ
ಸರ್ಕಾರದ ದಸರಾ ನಮ್ಮ ಪರಂಪರೆ ಭಾಗವಲ್ಲ
ಚಾಮುಂಡೇಶ್ವರಿ ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ನನಗೆ ಬೇಸರವಿದೆ. ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೆ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರ ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಾನು ಮುಷ್ತಾಕ್ ಹಣೆಗೆ ಅರಿಶಿಣ, ಕುಂಕುಮ ಹಚ್ಚಿ ದಸರಾ ಉದ್ಘಾಟಿಸಿದರೆ ನಮಗೆ ಅಭ್ಯಂತರವಿಲ್ಲ: ಪ್ರತಾಪ್ ಸಿಂಹ
ಜಂಬೂಸವಾರಿ ದಿನ ನಾನು ಅಲ್ಲಿಗೆ ಹೋಗಲ್ಲ. ನಮ್ಮ ಮನೆಯವರು ಒಬ್ಬರು ಹೋಗುತ್ತಾರೆ ಅಷ್ಟೆ. ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರ ಇನ್ನೂ ಮುಂದುವರಿಸುವುದು ಬೇಡ ಎಂದರು.
