ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪಂಚ ಪೀಠಗಳ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮ ತೇಜೋವಧೆಗೆ ಕಾಣದ ಕೈಗಳು ಹುನ್ನಾರ ನಡೆಸಿವೆ ಎಂದು ಆರೋಪಿಸಿದ್ದಾರೆ. ಧರ್ಮ ಕ್ಷೇತ್ರಗಳಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದ್ದಾರೆ.

ಬಾಳೆಹೊನ್ನೂರು (ಆ.31): ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪಂಚ ಪೀಠಗಳ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸನಾತನ ಧರ್ಮ ತೇಜೋವಧೆಗೆ ಕಾಣದ ಕೈಗಳು ಹುನ್ನಾರ ನಡೆಸಿವೆ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು, ಉಜ್ಜಯಿನಿಯ ಸಿದ್ಧಲಿಂಗ ಜಗದ್ಗುರು, ಕೇದಾರದ ಭೀಮಾಶಂಕರ ಜಗದ್ಗುರು, ಶ್ರೀಶೈಲದ ಡಾ.ಚೆನ್ನಸಿದ್ಧರಾಮ ಜಗದ್ಗುರು ಹಾಗೂ ಕಾಶೀ ಪೀಠದ ಡಾ.ಚಂದ್ರಶೇಖರ ಜಗದ್ಗುರು, ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು, ಧರ್ಮ ಕ್ಷೇತ್ರಗಳು ತಮ್ಮದೇ ಆದ ಸಂಸ್ಕೃತಿ ಮತ್ತು ಪರಂಪರೆ ಅನುಸರಿಸುತ್ತವೆ. ಅಂತಹ ಧರ್ಮ ಕ್ಷೇತ್ರಗಳಲ್ಲಿ ರಾಜಕೀಯ ಬೆರೆಸುವ ಕೆಲಸ ಯಾರೂ ಮಾಡಬಾರದು. ಅನವಶ್ಯಕವಾಗಿ ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಭಕ್ತರು, ಸಮಾಜ ಹಾಗೂ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

ಸನಾತನ ಧರ್ಮ ತೇಜೋವಧೆಗೆ ಕಾಣದ ಕೈಗಳು ಹುನ್ನಾರ ನಡೆಸಿವೆ. ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ಸಂಸ್ಥೆ ಮೇಲ್ನೋಟಕ್ಕೆ ಆರೋಪಿಗಳಾಗಿರುವವರ ವಿಚಾರಣೆ ನಡೆಸುತ್ತಿದ್ದು, ಈ ಒಟ್ಟಾರೆ ಪ್ರಕರಣದ ಹಿಂದಿನ ಸೂತ್ರಧಾರಿಗಳನ್ನು ಪತ್ತೆಹಚ್ಚಿ ಆದಷ್ಟು ಬೇಗ ಅವರಿಗೆ ಶಿಕ್ಷೆ ನೀಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಅಪಪ್ರಚಾರ ವಿರೋಧಿಸಿ ದೋಸ್ತಿಗಳ ಪ್ರತ್ಯೇಕ ಹೋರಾಟ, ಇಂದು ಹಾಸನದಿಂದ ಜೆಡಿಎಸ್ ಸತ್ಯಯಾತ್ರೆ

ನಾಡಿನಲ್ಲಿರುವ ಅನೇಕ ಮಠ-ಮಂದಿರಗಳು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಪ್ರಾಚೀನ ಕಾಲದಿಂದಲೂ ಕಾರ್ಯ ನಿರ್ವಹಿಸಿಕೊಂಡು ಬಂದಿವೆ. ಅಂತೆಯೇ ಧರ್ಮಸ್ಥಳ ಕ್ಷೇತ್ರ ಶತಮಾನಗಳ ಇತಿಹಾಸ ಹೊಂದಿದ್ದು, ನಾಡಿಗೆ ವಿಶೇಷ ಕೊಡುಗೆ ನೀಡಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು 50 ವರ್ಷಗಳಿಂದ ಧರ್ಮ-ಸಂಸ್ಕೃತಿ ಪುನರುತ್ಥಾನಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ಕ್ಷೇತ್ರದ ಮೇಲೆ ಬಂದಿರುವ ಆರೋಪಗಳು ಮುಕ್ತವಾಗಿ ಆದಷ್ಟು ಬೇಗ ಮೊದಲಿನಂತೆ ಎಲ್ಲ ಸಾಮಾಜಿಕ ಕಾರ್ಯ ಗಳು ಮುಂದುವರಿಯುವಂತಾಗಲಿ ಎಂದು ಹಾರೈಸಿರುವ ಪಂಚಪೀಠಾಧೀಶ್ವರು, ಹಿಂದೂ ಸಂಸ್ಕೃತಿ ಬಗ್ಗೆ ಇತ್ತೀಚಿಗೆ ಕೆಲವು ನಾಸ್ತಿಕರು ಅಲ್ಲಲ್ಲಿ ವಾತಾವರಣ ಕಲುಷಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.