ವಿಶ್ವನಾಥ್ ಒಬ್ಬ ವಿಚಿತ್ರ ಹುಚ್ಚ. ಬೆಳಗ್ಗೆ ಎದ್ದು ಯಾರ ಮೇಲಾದರೂ ಸುಳ್ಳು ಆರೋಪ ಮಾಡದಿದ್ದರೆ ತಿಂದಿದ್ದೂ ಕರಗಲ್ಲ, ನಿದ್ರೆಯೂ ಬರುವುದಿಲ್ಲ ಎಂದು ಕೆಂಡಕಾರಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ 

ಬೆಂಗಳೂರು(ಅ.26): ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತು ಅವರ ಮಗ ನನ್ನ ಬಳಿ ಬಂದು ಕಡಿಮೆ ಬೆಲೆಗೆ ಎಕರೆಗಟ್ಟಲೆ ಸಿಎ ನಿವೇಶನ ನೀಡುವಂತೆ ಕೇಳಿದ್ದರು. ಕಾನೂನು ಬಾಹಿರವಾದ್ದರಿಂದ ಕೊಡಲಾಗದು ಎಂದಿದ್ದಕ್ಕೆ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆರೋಪಿಸಿದರು. 

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಒಬ್ಬ ವಿಚಿತ್ರ ಹುಚ್ಚ. ಬೆಳಗ್ಗೆ ಎದ್ದು ಯಾರ ಮೇಲಾದರೂ ಸುಳ್ಳು ಆರೋಪ ಮಾಡದಿದ್ದರೆ ತಿಂದಿದ್ದೂ ಕರಗಲ್ಲ, ನಿದ್ರೆಯೂ ಬರುವುದಿಲ್ಲ ಎಂದು ಕೆಂಡಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸೊಸೆ ಹೆಸರಲ್ಲಿ ಹೋಟೆಲ್, ಪಬ್ ನಡೆಸುತ್ತಿದ್ದಾರೆ. ಇದರ ಬೆಲೆ ಇನ್ನೂರು- ಮುನ್ನೂರು ಕೋಟಿ ರುಪಾಯಿ. ಅದು ಬೈರತಿ ಸುರೇಶ್ ಕ್ಷೇತ್ರದಲ್ಲಿದೆ. ಅವರೇ ಅದರ ಮಾಸ್ಟರ್ ಮೈಂಡ್ ಎಂಬ ಸುಳ್ಳು ಹೇಳಿಕೆಯನ್ನು ವಿಶ್ವನಾಥ್ ನೀಡಿದ್ದಾರೆ. ಆ ವಿಶ್ವನಾಥ್ ಮಾಡಿರುವ ಆರೋಪದಲ್ಲಿ ಶೇ.1ರಷ್ಟು ಸತ್ಯ ಇದ್ದರೂ ಅವರು ಹೇಳಿದ ಶಿಕ್ಷೆಗೆ ಗುರಿಯಾ ಗಲು ನಾನು ಸಿದ್ದ, ಇಲ್ಲದಿದ್ದರೆ ನಾವು ಹೇಳುವ ಶಿಕ್ಷೆಯನ್ನು ಅವರು ಅನುಭವಿಸಲಿ ಎಂದು ಸವಾಲು ಹಾಕಿದರು.

ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರವೂ ಇದೆ: ಸಂಸದ ಕಾಗೇರಿ ಆರೋಪ

ವಿಶ್ವನಾಥ್ ಬ್ಲ್ಯಾಕ್ಟೇಲ‌ರ್, ರೋಲ್‌ಕಾಲರ್: 

ಬೈರತಿ ಎಚ್.ವಿಶ್ವನಾಥ್ ಒಬ್ಬ ಥರ್ಡ್ ಗ್ರೇಡ್ ವ್ಯಕ್ತಿ. ರೋಲ್ ಕಾಲ್ ಹಾಗೂ ನೂರಕ್ಕೆ ನೂರು ಬ್ಲಾಕ್ ಮೇಲ್ ರಾಜಕಾರಣಿ. ಸಹಾಯ ಮಾಡಿದವರನ್ನೇ ಕಚ್ಚುವ ಸ್ವಭಾವ ವಿಶ್ವನಾಥ್‌ಗಿದೆ. ಗೊಬೆಲ್ಸ್‌ ವಂಶಸ್ಥ. ಅವರಿಗೆ ಬುದ್ದಿ ಭ್ರಮಣೆ ಆಗಿದೆ. ನಿಮ್ಹಾನ್ಸ್‌ಗೆ ಸೇರಿಸುವುದು ಬಾಕಿ ಇದೆ. ಕಾಂಗ್ರೆಸ್‌ ಪಕ್ಷ ವಿಶ್ವನಾಥ್ ಅವರ ಅಪ್ಪನ ಮನೆ ಆಸ್ತಿಯಲ್ಲ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದು ಸೋನಿಯಾ ಗಾಂಧಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.